ಈರುಳ್ಳಿ ಬೀಜಗಳ ರಫ್ತನ್ನು ನಿಷೇಧಿಸಿದ ಕೇಂದ್ರ ಸರ್ಕಾರ
ನವದೆಹಲಿ, ಅಕ್ಟೋಬರ್ 29: ಈರುಳ್ಳಿ ಬೀಜಗಳ ರಫ್ತನ್ನು ನಿಷೇಧಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ದೇಶೀಯ ಮಾರುಕಟ್ಟೆಗಳಲ್ಲಿಬೆಲೆ ಏರಿಕೆಯಾಗಿರುವ ನಡುವೆ ತಕ್ಷಣ ಜಾರಿಗೆ ಬರುವಂತೆ ಈರುಳ್ಳಿ ಬಿತ್ತನೆ ಬೀಜಗಳ ರಫ್ತು ಮಾಡುವುದನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.
ಈರುಳ್ಳಿ ಸಂಗ್ರಹದ ಮೇಲೆ ಮಿತಿ ವಿಧಿಸಿದ ಕೇಂದ್ರ ಸರ್ಕಾರ
ಈರುಳ್ಳಿ ಬಿತ್ತನೆ ಬೀಜಗಳನ್ನು ರಫ್ತು ಮಾಡುವುದನ್ನು ನಿಷೇಧಿಸಲಾಗಿದ್ದು ಈ ಆದೇಶ ತಕ್ಷಣದಿಂದ ಜಾರಿಗೆ ಬರಲಿದೆ ಎಂದು ವಿದೇಶಾಂಗ ವ್ಯಾಪಾರ ನಿರ್ದೇಶನಾಲಯವು ಅಧಿಸೂಚನೆಯಲ್ಲಿ ತಿಳಿಸಿದೆ. ಇದಾಗಲೇ ರಫ್ತಿಗೆ ಸಿದ್ದವಾಗಿರುವ ಸರಕುಗಳಿಗೆ ಇದು ಅನ್ವಯಿಸುವುದಿಲ್ಲ.
ದೇಶದ ವಿವಿಧ ಮಾರುಕಟ್ಟೆಗಳಲ್ಲಿಈರುಳ್ಳಿ ರೀಟೇಲ್ ದರ ಕೆಜಿಗೆ 75ರಿಂದ 120 ರೂ. ದಾಟಿದೆ. ಕೇಂದ್ರ ಸರ್ಕಾರವು ಈರುಳ್ಳಿ ರಫ್ತು ನಿರ್ಬಂಧಿಸಿ, ಆಮದು ಹೆಚ್ಚಿದ್ದರಿಂದ ಚಿಲ್ಲರೆ ಹಾಗೂ ಹೋಲ್ಸೇಲ್ ಮಾರಾಟಗಾರರು ಈರುಳ್ಳಿ ಸಂಗ್ರಹ ಮಾಡುವುದರ ಮೇಲೆ ಮಿತಿ ಹೇರಿದೆ. ಆದರೆ ಈಗ ಬೆಲೆ ಏರಿಕೆ ತಡೆಯುವ ಉದ್ದೇಶದಿಂದ ಈರುಳ್ಳಿ ದಾಸ್ತಾನು ಮೇಲೆ ಸರ್ಕಾರ ಮಿತಿ ವಿಧಿಸಿದೆ.
ಅಗತ್ಯವಸ್ತುಗಳ ಕಾಯ್ದೆಗೆ ಒಳಪಡುವ ಪಟ್ಟಿಯಿಂದ ಈರುಳ್ಳಿಯನ್ನು ಇತ್ತೀಚೆಗೆ ಕೈ ಬಿಡಲಾಗಿತ್ತು. ಚಿಲ್ಲರೆ ಮಾರಾಟಗಾರರು 20 ಕ್ವಿಂಟಾಲ್ ಹಾಗೂ ಸಗಟು ಮಾರಾಟಗಾರರು 250 ಕ್ವಿಂಟಾಲ್ ಈರುಳ್ಳಿ ಸಂಗ್ರಹ ಮಿತಿ ನಿಗದಿಯಾಗಿದೆ.
ಆದರೆ, ಈರುಳ್ಳಿ ದರ ಹೆಚ್ಚಳದಂತೆ ಪೂರೈಕೆಯಲ್ಲಿ ಉಂಟಾದ ವ್ಯತ್ಯಾಸದಿಂದ ಕೃತಕ ಅಭಾವ ಉಂಟಾಗಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈರುಳ್ಳಿ ದಾಸ್ತಾನು ಮೇಲೆ ನಿಯಂತ್ರಣಕ್ಕೆ ಮುಂದಾಗಿದೆ.
ಈ ಮೊದಲು, ಈರುಳ್ಳಿ ಬಿತ್ತನೆ ಬೀಜಗಳ ರಫ್ತು ನಿರ್ಬಂಧಿತ ವಿಭಾಗದಲ್ಲಿತ್ತು, ಅಂದರೆ ರಫ್ತು ಮಾಡುವವರಿಗೆ ಸರ್ಕಾರದಿಂದ ಪರವಾನಗಿ ಅಥವಾ ಅನುಮತಿ ಪಡೆಯುವುದು ಅಗತ್ಯವಿತ್ತು.