ಕೊರೊನಾದಿಂದಾಗಿ ಜನಗಣತಿ ಮುಂದೂಡಿಕೆ: ಕೇಂದ್ರ ಸರ್ಕಾರ
ನವದೆಹಲಿ, ಜುಲೈ 27: ಕೊರೊನಾ ಸೋಂಕಿನಿಂದಾಗಿ ಜನಗಣತಿ ಪ್ರಕ್ರಿಯೆ ಮುಂದೂಡಲಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಮಾಹಿತಿ ನೀಡಿದೆ.
ಏಪ್ರಿಲ್-ಸೆಪ್ಟೆಂಬರ್ 2020ರಲ್ಲಿ ಮನೆಗಣತಿ, ಫೆಬ್ರವರಿ 9-28, 2021ರ ಅವಧಿಯಲ್ಲಿ ಜನಗಣತಿ ನಡೆಯಬೇಕಿತ್ತು. ಈ ಚಟುವಟಿಕೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.
ಭೌಗೋಳಿಕ ಹಾಗೂ ಸಾಮಾಜಿಕ ಆರ್ಥಿಕ ಮಾನದಂಡಗಳು ಅಂದರೆ ಪರಿಶಿಷ್ಟರು, ಧರ್ಮ, ಭಾಷೆ, ವೈವಾಹಿಕ ಸ್ಥಿತಿ, ಅಂಕವಿಕಲತೆ, ವಲಸೆ, ಉದ್ಯೋಗ ಅಂಶಗಳನ್ನು ಆಧರಿಸಿ ಗಣತಿ ಕಾರ್ಯವನ್ನು ನಡೆಸಲಾಗುತ್ತದೆ ಎಂದು ಹೇಳಿದರು.
ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಈ ಕುರಿತು ಲಿಖಿತ ಹೇಳಿಕೆ ನೀಡಿದ್ದಾರೆ. ಜನಗಣತಿ ಕಾಯ್ದೆ 1948ರ ಅನ್ವಯ ಎರಡು ಹಂತದಲ್ಲಿ ಗಣತಿ ಚಟುವಟಿಕೆಗಳನ್ನು ನಡೆಸಬೇಕಾಗಿತ್ತು ಎಂದರು.
2021ರ ಜನಗಣತಿ ದೇಶದ 16ನೇ ಜನಗಣತಿಯಾಗಿದೆ ಮತ್ತು ಸ್ವಾತಂತ್ರ್ಯಾನಂತರದ 8ನೇ ಜನಗಣತಿಯಾಗಿದೆ. ಜನಗಣತಿಯು ಗ್ರಾಮ, ಪಟ್ಟಣ ಮತ್ತು ವಾರ್ಡ್ ಮಟ್ಟದಲ್ಲಿ ಪ್ರಾಥಮಿಕ ದತ್ತಾಂಶ ಒದಗಿಸುವ ಬೃಹತ್ ಮೂಲವಾಗಿದ್ದು, ಮನೆಯ ಸ್ಥಿತಿ, ಸೌಲಭ್ಯಗಳು ಮತ್ತು ಆಸ್ತಿ, ಜನಸಂಖ್ಯೆ, ಧರ್ಮ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಭಾಷೆ, ಸಾಕ್ಷರತೆ ಮತ್ತು ಶಿಕ್ಷಣ, ಆರ್ಥಿಕ ಚಟುವಟಿಕೆ, ವಲಸೆ ಮತ್ತು ಫಲವತ್ತತೆ ಸೇರಿದಂತೆ ವಿವಿಧ ಮಾನದಂಡಗಳ ಸೂಕ್ಷ್ಮ ದತ್ತಾಂಶ ಒದಗಿಸುತ್ತದೆ. ಜನಗಣತಿ ಕಾಯಿದೆ 1948 ಮತ್ತು ಜನಗಣತಿ ನಿಯಮಗಳು 1990 ಜನಗಣತಿ ನಡೆಸಲು ಕಾನೂನು ಚೌಕಟ್ಟು ಒದಗಿಸುತ್ತದೆ.
ರಾಷ್ಟ್ರೀಯ ಜನಸಂಖ್ಯೆ ದಾಖಲಾತಿ (ಎನ್.ಪಿ.ಆರ್.) ಯನ್ನು 1955ರ ಪೌರತ್ವ ಕಾಯಿದೆ ಮತ್ತು ಪೌರತ್ವದ ನಿಯಮಗಳು, 2003ರ ನಿಬಂಧನೆಗಳ ಅಡಿಯಲ್ಲಿ 2010ರಲ್ಲಿ ತಯಾರಿಸಲಾಗಿತ್ತು, ಅದನ್ನು 2015ರಲ್ಲಿ ಆಧಾರ್ ಜೋಡಣೆಯ ಮೂಲಕ ಅದನ್ನು ನವೀಕರಿಸಲಾಗಿತ್ತು.