ಬಿಪಿನ್ ರಾವತ್ ಹೆಲಿಕಾಪ್ಟರ್ ಪತನ: ಟ್ವಿಟ್ಟರ್ ನಲ್ಲಿ 'ಕರ್ಮ' ಟ್ರೆಂಡಿಂಗ್
ಮೂರೂ ಸೇನಾಪಡೆಗಳಿಗೂ ಏಕೈಕ ದಂಡನಾಯಕನಾಗಿರುವ (ಚೀಫ್ ಆಫ್ ದಿ ಡಿಫೆನ್ಸ್ ಸ್ಟಾಫ್) ಬಿಪಿನ್ ರಾವತ್ ಸೇರಿದಂತೆ ಹದಿನಾಲ್ಕು ಮಂದಿ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್, ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರಿನಲ್ಲಿ ಪತನಗೊಂಡಿದೆ.
ಸೇನಾ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬಿಪಿನ್ ರಾವತ್ ಪತ್ನಿ ಮಧುಲಿಕಾ ರಾವತ್ ಸೇರಿ 11 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಬಿಪಿನ್ ರಾವತ್ ಸ್ಥಿತಿ ಗಂಭೀರವಾಗಿದೆ.
ರಾವತ್ 'ಅತೀ ಸುರಕ್ಷಿತ' Mi-17V5 ಹೆಲಿಕಾಪ್ಟರ್ನಲ್ಲಿದ್ದರು: ಪತನದ ಬಗ್ಗೆ ತಜ್ಞರ ಗೊಂದಲ
ಇಡೀ ದೇಶವೇ ಘಟನೆಯ ಬಗ್ಗೆ ಅಚ್ಚರಿ ವ್ಯಕ್ತ ಪಡಿಸುತ್ತಿದ್ದರೆ, ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಹೆಲಿಕಾಪ್ಟರ್ ಪತನಕ್ಕೆ ಸಂಬಂಧಿಸಿದ ಹ್ಯಾಷ್ ಟ್ಯಾಗ್ ಗಳು ಟ್ರೆಂಡಿಂಗ್ ನಲ್ಲಿದೆ. ಇದರಲ್ಲಿ 'ಕರ್ಮ'ಎನ್ನುವ ಟ್ಯಾಗ್ ಕೂಡಾ. ಬಿಪಿನ್ ರಾವತ್ ನಿಧನರಾಗಿರುವುದನ್ನು ಭಾರತೀಯ ಸೇನೆ ತನ್ನ ಅಧಿಕೃತ ಟ್ವಿಟ್ಟರ್ ಅಕೌಂಟ್ ಮೂಲಕ ಖಚಿತ ಪಡಿಸಿದೆ.
ಅತ್ಯಂತ ವಿಶ್ವಾಸಾರ್ಹ ಹಾಗೂ ಸುರಕ್ಷಿತವಾದ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುತ್ತಿದ್ದರೂ, ಇದು ಪತನಗೊಂಡಿರುವುದಕ್ಕೆ ತಜ್ಞರು, ಗೊಂದಲ ಮತ್ತು ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಒಂದು ಹ್ಯಾಂಡಲ್ ನಿಂದ ಬಂದ ನಕಾರಾತ್ಮಕ ಟ್ವೀಟ್, ಕರ್ಮ ಟ್ಯಾಗ್ ಅಲ್ಲಿ ಟ್ರೆಂಡಿಂಗ್ ನಲ್ಲಿ ತಂದು ಕೂರಿಸಿದೆ.
ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಪತನ; ಸಾವಿನ ಸಂಖ್ಯೆ 13ಕ್ಕೆ ಏರಿಕೆ
ಕರ್ಮ ತನ್ನದೇ ಆದ ದಾರಿಯನ್ನು ಹೊಂದಿದೆ
ನಿವೃತ್ತ ಸೇನಾ ಅಧಿಕಾರಿಯೊಬ್ಬರೇ ಘಟನೆಯ ಬಗ್ಗೆ ಟ್ವೀಟ್ ಮಾಡುತ್ತಾ, "ಮನುಷ್ಯನನ್ನು ಡೀಲ್ ಮಾಡಲು ಕರ್ಮ ತನ್ನದೇ ಆದ ದಾರಿಯನ್ನು ಹೊಂದಿದೆ" ಎಂದು ಕರ್ನಲ್ ಬಲ್ಜಿತ್ ಭಕ್ಷಿ ಟ್ವೀಟ್ ಮಾಡಿದ್ದಾರೆ. ತಾವು ಹಿಂದೆ ಕೆಲಸ ಮಾಡುತ್ತಿದ್ದ ಸೇನೆಯ ಅಧಿಕಾರಿಯೊಬ್ಬರ ಬಗ್ಗೆ ಇವರು ಮಾಡಿರುವ ಟ್ವೀಟಿಗೆ ನೆಟ್ಟಿಗರು ಆಕ್ರೋಶವನ್ನು ಹೊರಹಾಕಿದ್ದಾರೆ. ತನ್ನ ಟ್ವೀಟ್ ವ್ಯಾಪಕ ಆಕ್ರೋಶಕ್ಕೆ ಒಳಾಗುತ್ತಿರುದನ್ನು ಅರಿತ ಕರ್ನಲ್ ಭಕ್ಷಿ ನಂತರ ಇನ್ನೊಂದು ಟ್ವೀಟ್ ಮೂಲಕ, ಸಮಜಾಯಿಶಿ ಮತ್ತು ಕ್ಷಮೆಯಾಚಿಸಿದ್ದಾರೆ.
ಬೇರೊಬ್ಬರಿಗೆ ಕೆಟ್ಟದ್ದನ್ನು ಬಯಸುವ ಯಾವುದೇ ಉದ್ದೇಶ ನನಗಿಲ್ಲ
"ನಾನು ಇದಕ್ಕೂ ಮುನ್ನ ಮಾಡಿದ್ದ ಟ್ವೀಟ್ ಅನ್ನು ನೆಟ್ಟಿಗರು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಂಡಿಲ್ಲ. ಬೇರೊಬ್ಬರಿಗೆ ಕೆಟ್ಟದ್ದನ್ನು ಬಯಸುವ ಯಾವುದೇ ಉದ್ದೇಶ ನನಗಿಲ್ಲ. ಆದರೂ, ಜನರ ಭಾವನೆಗೆ ಬೆಲೆಕೊಡಬೇಕಾಗಿರುವುದರಿಂದ, ನಿಮ್ಮೆಲ್ಲರ ಕ್ಷಮೆಯಾಚಿಸಿ ಆ ಟ್ವೀಟ್ ಅನ್ನು ಡಿಲಿಟ್ ಮಾಡುತ್ತಿದ್ದೇನೆ"ಎಂದು ನಿವೃತ್ತ ಕರ್ನಲ್ ಬಲ್ಜಿತ್ ಭಕ್ಷಿ ಇನ್ನೊಂದು ಟ್ವೀಟ್ ಮಾಡಿದ್ದಾರೆ. ಆ ಅರ್ಥದಲ್ಲಿ ಬರೆದಿಲ್ಲ ಎಂದ ಮೇಲೆ, ಆ ಟ್ವೀಟ್ ಅನ್ನು ಡಿಲಿಟ್ ಮಾಡಿದ್ದು ಯಾವ ಕಾರಣಕ್ಕಾಗಿ ಎಂದು ಹಲವರು ಮರು ಪ್ರಶ್ನಿಸಿದ್ದಾರೆ.
ಕರ್ಮ ತನ್ನದೇ ಶೈಲಿಯಲ್ಲಿ ನಿನ್ನನ್ನೂ ಡೀಲ್ ಮಾಡುತ್ತದೆ
ಬಲ್ಜಿತ್ ಭಕ್ಷಿ ಟ್ವೀಟಿಗೆ ಬಂದ ಕೆಲವೊಂದು ಸ್ಯಾಂಪಲ್ ಪ್ರತಿಕ್ರಿಯೆಗಳು ಹೀಗಿದೆ, 'ನಿನ್ನ ಸಮಯವೂ ಹತ್ತಿರದಲ್ಲಿದೆ, ಕರ್ಮ ತನ್ನದೇ ಶೈಲಿಯಲ್ಲಿ ನಿನ್ನನ್ನೂ ಡೀಲ್ ಮಾಡುತ್ತದೆ'. 'ಎಷ್ಟು ಟ್ವೀಟ್ ಅನ್ನು ನೀವು ಡಿಲಿಟ್ ಮಾಡಲು ಸಾಧ್ಯ? ನಿಮ್ಮ ನಿಜರೂಪವನ್ನು ತೋರಿಸಿದ್ದೀರಾ, ನಿಮಗಿರುವ ರಿಟೈರ್ಡ್ ಕರ್ನಲ್ ಎನ್ನುವ ಹುದ್ದೆಗಾದರೂ ಮರ್ಯಾದೆ ತೋರುವುದು ಬೇಡವೇ'. 'ದುರ್ಘಟನೆಯನ್ನು ಅಪಹಾಸ್ಯ ಮಾಡುತ್ತಿರುವವರಿಗೂ ಕರ್ಮ ಕಾಡಲಿದೆ'.
ದೇವರು ತನ್ನದೇ ಶೈಲಿಯಲ್ಲಿ ನೀನು ಮಾಡಿದ ಕರ್ಮವನ್ನು ಅನುಭವಿಸುವಂತೆ ಮಾಡಿದ್ದಾನೆ
'ಘಟನೆಯ ಬಗ್ಗೆ ಸೇನಾ ಸಿಬ್ಬಂದಿಗಳಲ್ಲಿ ಒಬ್ಬರು ಕರ್ಮ ಎನ್ನುತ್ತಾರೆ, ಇನ್ನೊಬ್ಬರು ಶಿಷ್ಟಾಚಾರವನ್ನು ಉಲ್ಲಂಘಿಸಿ ರಾವತ್ ಬಗ್ಗೆ ಬರೆಯುತ್ತಾರೆ'. 'ಕರ್ಮ ಎನ್ನುವುದು ವೇಶ್ಯೆಯ ಹಾಗೆ. ಕೆಮಿಕಲ್ ಆಯುಧದ ಮೂಲಕ ನಮ್ಮ ಹೀರೋಗಳನ್ನು ನೀನು ಹೊಡೆದುರುಳಿಸಿದೆ, ಈಗ ದೇವರು ತನ್ನದೇ ಶೈಲಿಯಲ್ಲಿ ನೀನು ಮಾಡಿದ ಕರ್ಮವನ್ನು ಅನುಭವಿಸುವಂತೆ ಮಾಡಿದ್ದಾನೆ' ಎನ್ನುವ ಟ್ವೀಟ್ ಅನ್ನು ಡಾ.ಆಸಿಫ್ ಮಕ್ಬೂಲ್ ಎನ್ನುವವನು ಮಾಡಿದ್ದಾನೆ.