ಸಿಡಿ ಹಗರಣ: ಛತ್ತೀಸ್ ಗಢ ಸಿಎಂಗೆ ನೆಮ್ಮದಿಯ ಸುದ್ದಿಕೊಟ್ಟ ಸುಪ್ರೀಂ
ನವದೆಹಲಿ, ಅಕ್ಟೋಬರ್ 21: ಛತ್ತೀಸ್ ಗಢದಲ್ಲಿ 15 ವರ್ಷಗಳ ನಂತರ ಅಧಿಕಾರ ಸ್ಥಾಪಿಸುವ ಜನಾದೇಶ ಪಡೆದುಕೊಂಡ ಕಾಂಗ್ರೆಸ್, ಹಿರಿಯ ನಾಯಕ ಭೂಪೇಶ್ ಬಘೇಲ್ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದೆ. ನಕಲಿ ಸೆಕ್ಸ್ ಸಿಡಿ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಬಘೇಲ್ ಗೆ ಸೋಮವಾರದಂದು ಸುಪ್ರೀಂಕೋರ್ಟ್ ನಿಂದ ನೆಮ್ಮದಿಯ ಸುದ್ದಿ ಸಿಕ್ಕಿದೆ.
Recommended Video
ಛತ್ತೀಸ್ ಗಢ ಸಿಎಂ ಭೂಪೇಶ್ ಬಘೇಲ್ ವಿರುದ್ಧದ ಕ್ರಿಮಿನಲ್ ತನಿಖೆ ವಿಚಾರಣೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಬಿಐ, ಬಘೇಲ್ ವಿರುದ್ಧ ಸೆಪ್ಟೆಂಬರ್ 2018ರಲ್ಲಿ ಪ್ರಕರಣದ ದಾಖಲಿಸಿಕೊಂಡಿತ್ತು. ಅಂದಿನ ಬಿಜೆಪಿ ಮುಖಂಡ ರಾಜೇಶ್ ಮುನ್ನತ್ ಅವರಿದ್ದ ಸೆಕ್ಸ್ ಸಿಡಿ ಹಗರಣ ಭಾರಿ ಸದ್ದು ಮಾಡಿತ್ತು.
ವ್ಯಕ್ತಿಚಿತ್ರ : ಛತ್ತೀಸ್ ಗಡದ ಕಾಂಗ್ರೆಸ್ಸಿನ ನೇತಾರ ಸಿಎಂ ಭೂಪೇಶ್ ಬಘೇಲ್
ಛತ್ತೀಸ್ ಗಢದಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ,ಪಠಾಣ್ ಶಾಸಕ ಭೂಪೇಶ್ ಬಘೇಲ್ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂಬ ಶಂಕೆಯಿಂದ ಪ್ರಕರಣವನ್ನು ಛತ್ತೀಸ್ ಗಢದಿಂದ ಬೇರೆಡೆಗೆ ವರ್ಗಾಯಿಸುವಂತೆ ಸುಪ್ರೀಂಕೋರ್ಟಿನಲ್ಲಿ ತನಿಖಾ ಸಂಸ್ಥೆ ಸಿಬಿಐ ಅರ್ಜಿ ಸಲ್ಲಿಸಿದೆ. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಾಯ್, ಜಸ್ಟೀಸ್ ಎಸ್ಎ ಬೊಬ್ಡೆ ಹಾಗೂ ಜಸ್ಟೀಸ್ ನಜೀರ್ ಅವರಿದ್ದ ನ್ಯಾಯಪೀಠವು, ಈ ಕುರಿತಂತೆ ಬಘೇಲ್ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಏನಿದು ಪ್ರಕರಣ?: ಅಂದಿನ ಜಲ ಸಂಪನ್ಮೂಲ ಸಚಿವ ರಾಜೇಶ್ ಮುನಾತ್ ಅವರಿಗೆ ಸೇರಿದೆ ಎನ್ನಲಾದ ನಕಲಿ ಪೋರ್ನೊಗ್ರಾಫಿಕ್ ಸಿಡಿಯನ್ನು ಹಂಚಿದ ಆರೋಪವನ್ನು ಛತ್ತೀಸ್ ಗಡ ಕಾಂಗ್ರೆಸ್ ಅಧ್ಯಕ್ಷ ಭೂಪೇಶ್ ಹೊತ್ತುಕೊಂಡಿದ್ದರು. ಭೂಪೇಶ್ ವಿರುದ್ಧ ಸಿಬಿಐ ತಂಡವು ದೋಷಾರೋಪಣ ಪಟ್ಟಿ ಸಲ್ಲಿಸಿತ್ತು. ವಿಶೇಷ ನ್ಯಾಯಾಲಯದಲ್ಲಿ ಖುದ್ದು ವಾದಿಸಿದ ಭೂಪೇಶ್ ಅವರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದರು.
ಛತ್ತೀಸ್ ಗಢ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭೂಪೇಶ್ ಬಘೇಲ್ ಅವರು ಅಕ್ಟೋಬರ್ 2014ರಿಂದ ಅಧಿಕಾರ ನಡೆಸಿದ್ದಾರೆ. ದುರ್ಗ್ ಜಿಲ್ಲೆಯ ಪಟಾನ್ ಕ್ಷೇತ್ರದ ಅಭ್ಯರ್ಥಿ. ಈ ಹಿಂದೆ ದಿಗ್ವಿಜಯ್ ಸಿಂಗ್ ಅವರ ಸರ್ಕಾರದಿಂದ ಸಚಿವರಾಗಿದ್ದರು. ಸಾರಿಗೆ ಸಚಿವರಾಗಿ ಉತ್ತಮ ಹೆಸರು ಗಳಿಸಿದರು. ಛತ್ತೀಸ್ ಗಢ ರಾಜ್ಯ ಉದಯವಾದ ಬಳಿಕ ಬಘೇಲ್ ಅವರು ಕಂದಾಯ ಸಚಿವರಾಗಿ ಕಾರ್ಯನಿರ್ವಹಿಸಿದರು.