ಸಿಬಿಎಸ್ ಇ ಫಲಿತಾಂಶ ಮತ್ತಷ್ಟು ತಡ: ಆತಂಕದಲ್ಲಿ ವಿದ್ಯಾರ್ಥಿಗಳು
ಬುಧವಾರ ನಡೆದ ಸಿಬಿಎಸ್ ಇ ಆಡಳಿತ ಮಂಡಳಿ ಸಭೆಯಲ್ಲಿ ದೆಹಲಿ ಹೈಕೋರ್ಟ್ ನ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಇದರಿಂದಾಗಿ ಫಲಿತಾಂಶ ಮತ್ತಷ್ಟು ತಡೆಯಾಗುವ ಸಂಭವವಿದೆ.
ನವದೆಹಲಿ, ಮೇ 25: ಸುಮಾರು 10,98,891 ವಿದ್ಯಾರ್ಥಿಗಳು ಕಾತುರದಿಂದ ನಿರೀಕ್ಷಿಸುತ್ತಿರುವ ಸಿಬಿಎಸ್ ಇ 12ನೇ ತರಗತಿಯ ಫಲಿತಾಂಶ ಪ್ರಕಟಗೊಳ್ಳುವುದು ಮತ್ತಷ್ಟು ತಡವಾಗಲಿದೆ.
ಫಲಿತಾಂಶ ಪಟ್ಟಿಯನ್ನು ತಯಾರಿಸುವಾಗ ತಾನು ಈ ಹಿಂದೆ ಅನುಸರಿಸುತ್ತಿದ್ದ ಅಂಕ ಮಿತಿ ನೀತಿಯನ್ನು ಪುನಃ ಅನುಷ್ಠಾನಗೊಳಿಸಿ, ಅದರ ಆಧಾರದಲ್ಲೇ 2017ರ 12ನೇ ತರಗತಿಯ ಫಲಿತಾಂಶವನ್ನು ಪ್ರಕಟಿಸಬೇಕೆಂದು ದೆಹಲಿ ಹೈಕೋರ್ಟ್ ಮಂಗಳವಾರ ಸಿಬಿಎಸ್ ಇ ಮಂಡಳಿಗೆ ಸೂಚಿಸಿತ್ತು.[ಸುಪ್ರೀಂ ಮೆಟ್ಟಿಲೇರದಿರಲು ಸಿಬಿಎಸ್ ಇ ನಿರ್ಧಾರ?]
ಈ ಹಿನ್ನೆಲೆಯಲ್ಲಿ, ಮೇ 24ರಂದು ಪ್ರಕಟಗೊಳ್ಳಬೇಕಿದ್ದ ಫಲಿತಾಂಶಕ್ಕೆ ತಾತ್ಕಾಲಿಕ ತಡೆ ಬಿದ್ದಿತ್ತು. ಬುಧವಾರ ನಡೆದ ಸಿಬಿಎಸ್ ಇ ಆಡಳಿತ ಮಂಡಳಿ ಸಭೆಯಲ್ಲಿ ದೆಹಲಿ ಹೈಕೋರ್ಟ್ ನ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಹೀಗಾಗಿ, ಫಲಿತಾಂಶ ಪ್ರಕಟಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ.[ಏನಿದು 'CBSE ಅಂಕ ನಿಯಮ' ? ನೀವು ತಿಳಿಯಬೇಕಾದ 5 ವಿಚಾರ]
ಇದರಿಂದ ಲಕ್ಷಾನುಗಟ್ಟಲೆ ವಿದ್ಯಾರ್ಥಿಗಳು ತೊಂದರೆಗೊಳಗಾಗಿದ್ದಾರೆ. ಅತ್ತ, ಗೋವಾ ಹಾಗೂ ಮಹಾರಾಷ್ಟ್ರದ 12ನೇ ತರಗತಿಯ ಪರೀಕ್ಷಾ ಫಲಿತಾಂಶಗಳು ಗುರುವಾರ (ಮೇ 25) ಪ್ರಕಟಗೊಂಡಿದ್ದು, ಆ ವಿದ್ಯಾರ್ಥಿಗಳು ಶೈಕ್ಷಣಿಕ ಪಥದಲ್ಲಿ ಸಿಬಿಎಸ್ ಇ ವಿದ್ಯಾರ್ಥಿಗಳಿಗಿಂತ ದಾಪುಗಾಲಿಟ್ಟು ಮುಂದೆ ಸಾಗಿಬಿಡುತ್ತಾರೆ. ಈ ಒತ್ತಡದಲ್ಲೂ ಸಿಬಿಎಸ್ ಇ 12ನೇ ತರಗತಿಯ ವಿದ್ಯಾರ್ಥಿಗಳು ಸಿಲುಕಿದ್ದಾರೆ.
ಆದರೆ, ಈ ಕಾನೂನು ಹೋರಾಟವೇನೇ ಇರಲಿ. ಇದರಿಂದ ತೊಂದರೆಯಾಗುವುದಂತೂ ವಿದ್ಯಾರ್ಥಿಗಳಿಗೇ. ಈ ಸಮಸ್ಯೆ ಹಾಗೂ ಇನ್ನಿತರ ವಿಚಾರಗಳಿಗೆ ಸಂಬಂಧಪಟ್ಟ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಅಂಕ ಮಿತಿ ನಿಯಮವೇ ಗಲಾಟೆಗೆ ಕಾರಣ
ಕಳೆದ ವರ್ಷದವರೆಗೂ ಸಿಬಿಎಸ್ ಇ ಫಲಿತಾಂಶವನ್ನು ಅಂಕಗಳ ಮಿತಿ ನಿಯಮಗಳ ಆಧಾರದಲ್ಲೇ ಪ್ರಕಟಿಸಲಾಗುತ್ತಿತ್ತು. ಪ್ರಸಕ್ತ ವರ್ಷದಿಂದ ಆ ಪದ್ಧತಿಯನ್ನು ಮಂಡಳಿ ಕೈಬಿಟ್ಟಿದೆ. ಇದರ ವಿರುದ್ಧ ಕೆಲವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆ ಅರ್ಜಿಗಳ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್ ಅಂಕ ಮಿತಿ ನಿಯಮ ಕೈಬಿಡದಂತೆ ಕೇಳಿದೆ.
ಆದರೆ ಹಠ ಬಿಡದ ಮಂಡಳಿ
ದೆಹಲಿ ಹೈಕೋರ್ಟ್ ನ ಆದೇಶ ಮಂಡಳಿಗೆ ಕಹಿ ಎನಿಸಿದೆ. ಆಡಳಿತಾತ್ಮಕ ದೃಷ್ಟಿಯಿಂದ ಮಂಡಳಿಯು ಯಾವಾಗ ಏನು ಬೇಕಾದರೂ ನಿರ್ಣಯ ತೆಗೆದುಕೊಳ್ಳುವ ಅಧಿಕಾರವಿದೆ. ವಿದ್ಯಾರ್ಥಿಗಳಿಗೆ ಅನ್ಯಾಯವಾಗುವಂಥದ್ದೇನನ್ನೂ ತಾನು ಮಾಡಿಲ್ಲ ಎಂಬುದು ಮಂಡಳಿಯ ವಾದ.
ಆದೇಶ ಪಾಲಿಸಲು ಜಾವಡೇಕರ್ ಸೂಚನೆ
ದೆಹಲಿ ಹೈಕೋರ್ಟ್- ಸಿಬಿಎಸ್ ಇ ಮಂಡಳಿ ನಡುವಿನ ಕಗ್ಗಂಟಿನ ಬಗ್ಗೆ ಪ್ರತಿಕ್ರಯಿಸಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್, ಸಿಬಿಎಸ್ ಇ ಮಂಡಳಿಯು ಏನೇ ನಿಯಮಗಳನ್ನು ಅಳವಡಿಸಿಕೊಳ್ಳಲಿ. ಅದಕ್ಕೆ ನಮ್ಮ (ಸರ್ಕಾರ) ಅಡ್ಡಿಯಿಲ್ಲ. ಆದರೆ, ಹೈಕೋರ್ಟ್ ಆದೇಶವನ್ನು ಅದು ಪಾಲಿಸಲಿ ಎಂದು ತಿಳಿಸಿದ್ದಾರೆ.
ಸುಪ್ರೀಂ ಕಡೆಗೆ ಹೊರಳಿರುವ ಮಂಡಳಿ
ಆದರೆ, ಕೇಂದ್ರ ಸಚಿವರ ಮಾತನ್ನೂ ಕೇಳಿಸಿಕೊಳ್ಳುವ ವ್ಯವಧಾನ ಮಂಡಳಿಗೆ ಇದ್ದಂತೆ ಕಾಣುವುದಿಲ್ಲ. ಈಗ ಮಂಡಳಿಯು ಸುಪ್ರೀಂ ಕೋರ್ಟ್ ನಲ್ಲಿ ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿದೆ.
ಫಲಿತಾಂಶ, ಅಂಕಪಟ್ಟಿ ಸಿಗದಿದ್ದರೇನು ಗತಿ?
ಮಂಡಳಿಯ ಈ ಹಠಮಾರಿ ನಿಲುವಿನಿಂದಾಗಿ, ವಿದ್ಯಾರ್ಥಿಗಳು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ. ಮುಂದಿನ ಓದಿಗಾಗಿ ದೇಶ ವಿದೇಶಗಳ ಕಾಲೇಜುಗಳ ಪ್ರವೇಶ ಪರೀಕ್ಷೆಗಳನ್ನು ಬರೆದಿರುವ ವಿದ್ಯಾರ್ಥಿಗಳಿಗೆ ಸರಿಯಾದ ಘಳಿಗೆಯಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದ್ದರೆ, ಅಂಕಪಟ್ಟಿ ಲಭಿಸಲಿದ್ದರೆ ಕಷ್ಟವಾಗಲಿದೆ. ಇದರಿಂದ, ಅವರು ಅನೇಕ ಕೋರ್ಸ್ ಗಳಲ್ಲಿ ಸೀಟು ಕಳೆದುಕೊಳ್ಳುವ ಅಪಾಯವೂ ಇರುತ್ತದೆ.