ಷೆಲ್ ಕಂಪೆನಿಗಳ 2,900 ಕೋಟಿ ರುಪಾಯಿ ಹಗರಣ ಬಯಲು ಮಾಡಿದ ಸಿಬಿಐ
ಷೆಲ್ ಕಂಪೆನಿಗಳ ಹೆಸರಿನಲ್ಲಿ ನಡೆಸಿದ 2,900 ಕೋಟಿ ರುಪಾಯಿಯ ಹಗರಣವನ್ನು ಸಿಬಿಐ ಬಯಲಿಗೆ ಎಳೆದಿದೆ. ಕಪ್ಪು ಹಣವನ್ನು ಕೈ ಬದಲಿಸಲು ಈ ಪ್ರಕರಣದಲ್ಲಿ ಅನುಸರಿಸಿದ ಕ್ರಮವನ್ನು ಸಿಬಿಐ ವಿವರಿಸಿದೆ
ಮುಂಬೈ, ಮೇ 8: ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ನ ಜಿಗ್ನೇಶ್ ಶಾ ಹಾಗೂ ಅಂಜನಿ ಸಿನ್ಹಾ ವಿರುದ್ಧ ಸಿಬಿಐ ಎರಡು ಪ್ರಕರಣ ದಾಖಲಿಸಿದೆ. ಇದನ್ನು ಎನ್ಎಸ್ಇಎಲ್ ಹಗರಣ ಅಂತ ಕೂಡ ಕರೆಯಲಾಗುತ್ತದೆ. ಇದರಲ್ಲಿ 342 ಕೋಟಿ ರುಪಾಯಿ ಹೇರಾಫೇರಿ ಆಗಿದೆ ಎಂಬ ಆರೋಪ ಕೇಳಿಬಂದಿದೆ.
ಸಿಬಿಐ ಬಹುಮುಖ್ಯ ಹಗರಣವೊಂದನ್ನು ಬಯಲು ಮಾಡಿದ್ದು, 393 ಷೆಲ್ ಕಂಪೆನಿಗಳು 2,900 ಕೋಟಿ ರುಪಾಯಿಯಷ್ಟು ಅವ್ಯವಹಾರ ನಡೆಸಿವೆ. ಸಾಲದ ಹಣವನ್ನು ಷೆಲ್ ಕಂಪೆನಿಗಳ ಮೂಲಕ ಮತ್ತೊಂದು ಕಡೆಗೆ ಹರಿಸಲಾಗಿದ್ದು, ತೆರಿಗೆ ಕದಿಯಲು ಹಾಗೂ ಕಪ್ಪು ಹಣದ ಕೈ ಬದಲಾವಣೆಗಾಗಿ ನಕಲಿ ರಶೀದಿಗಳನ್ನು ಸೃಷ್ಟಿಸಿರುವುದು ಸಹ ಗೊತ್ತಾಗಿದೆ.[ಹಗರಣ ಬಯಲಿಗೆಳೆಯುತ್ತೇನೆ ಎಂದ ಸಚಿವನನ್ನು ಹೊರ ದಬ್ಬಿದ ಕೇಜ್ರಿ]
ಸಾರ್ವಜನಿಕ ವಲಯದ 28 ಬ್ಯಾಂಕ್ ಗಳಲ್ಲಿ ಸಾಲಕ್ಕೆ ಸಂಬಂಧಿಸಿದ ಹಗರಣಗಳನ್ನು ತನಿಖೆ ನಡೆಸುವಾಗ ಈ ಪ್ರಕರಣ ಬೆಳಕಿಗೆ ಬಂದಿದ್ದು, ಇದರಲ್ಲಿ ಒಂದು ಖಾಸಗಿ ಬ್ಯಾಂಕ್ ಕೂಡ ಇದೆ. ಈ ಇಡೀ ಹಗರಣ ಹೇಗೆ ನಡೆಯುತ್ತಿತ್ತು ಎಂಬುದನ್ನು ಸಿಬಿಐ ವಿವರವಾಗಿ ತಿಳಿಸಿದೆ.
ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗಿದೆ ಎಂದು ತೋರಿಸಿ, ಷೆಲ್ ಕಂಪೆನಿಗಳ ಮೂಲಕ ಹಣ ಪಾವತಿ ಮಾಡಲಾಗುತ್ತದೆ. ಆ ನಂತರ ವಿದೇಶಿ ಬಂಡವಾಳ ಎಂದು ತೋರಿಸಿ, ಹಣವನ್ನು ಭಾರತಕ್ಕೆ ತರಲಾಗಿದೆ. ಈ ರೀತಿಯ ಇನ್ನೂರು ಪ್ರಕರಣಗಳ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ. ಅವುಗಳ ಒಟ್ಟು ಮೊತ್ತ ಮೂವತ್ತು ಸಾವಿರ ಕೋಟಿ ರುಪಾಯಿ ಆಗುತ್ತದೆ.[200ಕೋಟಿಯ ಪೆಟ್ರೋಲ್ ಹಗರಣ ಸ್ಪೋಟಿಸಿದ ಯುಪಿ ಪೊಲೀಸ್]
ಹಲವು ಕಂಪೆನಿಗಳ ಬಗ್ಗೆ ಸಿಬಿಐ ಮಾಹಿತಿ ಕಲೆ ಹಾಕಿದ್ದು, ಸದ್ಯದಲ್ಲೇ ಭ್ರಷ್ಟಾಚಾರದ ಆರೋಪದ ವಿಚಾರಣೆ ಆರಂಭವಾಗುತ್ತದೆ. ಹಲವು ಅಧಿಕಾರಿಗಳ ಮೇಲೆ ಕೂಡ ಸಿಬಿಐ ಕಣ್ಣಿರಿಸಿದೆ. ಷೆಲ್ ಕಂಪೆನಿಗಳ ಹೊರತಾಗಿ ಹಲವು ಅಧಿಕಾರಿಗಳ ವಿರುದ್ಧ ಕೂಡ ಸಾಕ್ಷ್ಯ ಸಂಗ್ರಹಿಸಲಾಗಿದೆ. ಮುಂದೆ ಇಂಥ ಅಪರಾಧ ಕೃತ್ಯಗಳು ನಡೆಯದಂತೆ ಕ್ರಮ ಕೈಗೊಳ್ಳಲು ಚಿಂತನೆ ನಡೆದಿದೆ.
ಆರ್ಥಿಕ ಅಪರಾಧಗಳಿಂದ ಬಚಾವಾಗಲು ಕೆಲವು ವ್ಯಕ್ತಿಗಳು ಕೂಡ ಷೆಲ್ ಕಂಪೆನಿಗಳನ್ನು ಬಳಸಿಕೊಂಡಿದ್ದಾರೆ ಎಂದು ಸಿಬಿಐ ತಿಳಿಸಿದೆ. ಕಪ್ಪು ಹಣವನ್ನು ವಿದೇಶಗಳಿಗೆ ಸಾಗಿಸಲು ದೇಶದಾದ್ಯಂತ ಇರುವ ಕಂಪೆನಿಗಳು ನೆರವಾಗಿದ್ದು, ತನಿಖೆ ನಡೆಸುವುದು ತುಂಬ ಕಷ್ಟವಾಗುತ್ತಿದೆ.
ಸಿಬಿಐನ ಪ್ರಮುಖ ಪ್ರಕರಣದಲ್ಲಿ ಸೆಂಚುರಿ ಕಮ್ಯುನಿಕೇಷನ್ ಗ್ರೂಪ್ ಸಹ ಇದೆ. ಮಹುವಾ ಚಾನಲ್ ನಿಂದ ಇದನ್ನು ನಡೆಸುತ್ತಿದ್ದು, 3 ಸಾವಿರ ಕೋಟಿಯಷ್ಟು ವಂಚನೆ ಮಾಡಲಾಗಿದೆ ಎಂದು ಚಾರ್ಜ್ ಶೀಟ್ ಮತ್ತು ಎಫ್ ಐಆರ್ ನಲ್ಲಿ ಆರೋಪಿಸಲಾಗಿದೆ. ಬ್ಯಾಂಕ್ ಸಾಲಗಳನ್ನು ಬಳಸಿ ನೋಯ್ಡಾ, ಮುಂಬೈ, ಕೋಲ್ಕತ್ತಾ ಮತ್ತಿತರ ಕಡೆ ಡಿಜಿಟಲ್ ಸ್ಟುಡಿಯೋ ಅರಂಭಿಸಲು ಷೆಲ್ ಕಂಪೆನಿಗಳ ಮೂಲಕ ಹಣ ವರ್ಗಾವಣೆ ಮಾಡಲಾಗಿದೆ.[ಕೋಟಿ ರುಪಾಯಿ ಸಮೋಸ ತಿಂದು, ಟೀ ಕುಡಿದು ತೇಗಿತೆ ಆಪ್?]
ಹಲವು ಪ್ರಕರಣಗಳಲ್ಲಿ ಕಂಪೆನಿಯ ಜವಾನ, ಚಾಲಕ, ಒಳಚರಂಡಿ ಕಾರ್ಮಿಕರು, ಅಡುಗೆಯವರನ್ನು ಸಹ ಷೆಲ್ ಕಂಪೆನಿಗಳ ನಿರ್ದೇಶಕರಾಗಿ ನೇಮಿಸಿ, ಹಣ ವರ್ಗಾವಣೆ ಮಾಡಿರುವುದು ಸಿಬಿಐ ಗಮನಕ್ಕೆ ಬಂದಿದೆ.