ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆ ಪ್ರಗತಿ ಬಗ್ಗೆ ಕೊನೆಗೂ ಸಿಬಿಐ ಮಾಹಿತಿ
ನವದೆಹಲಿ, ಡಿಸೆಂಬರ್ 31: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಸುಮಾರು 145 ದಿನಗಳಿಂದ ತನಿಖೆ ನಡೆಸುತ್ತಿರುವ ಸಿಬಿಐ, ಎಲ್ಲ ಆಯಾಮಗಳಲ್ಲಿಯೂ ಪರಿಶೀಲನೆ ನಡೆಸುತ್ತಿದ್ದು, ಯಾವುದನ್ನೂ ತಳ್ಳಿಹಾಕಿಲ್ಲ ಎಂದು ಹೇಳಿದೆ.
ಸುಶಾಂತ್ ಸಾವಿನ ತನಿಖೆಯ ಪ್ರಗತಿ ಕುರಿತಂತೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದರು. ಇದನ್ನು ಪಿಎಂಒ ಸಿಬಿಐಗೆ ರವಾನಿಸಿತ್ತು. ಸುಬ್ರಮಣಿಯನ್ ಸ್ವಾಮಿ ಅವರಿಗೆ ಪ್ರತಿಕ್ರಿಯೆ ನೀಡಿರುವ ತನಿಖಾ ಸಂಸ್ಥೆ, 'ಸಿಬಿಐ ಸವಿಸ್ತಾರವಾಗಿ ಮತ್ತು ಇತ್ತೀಚಿನ ವೈಜ್ಞಾನಿಕ ತಂತ್ರಜ್ಞಾನಗಳನ್ನು ಬಳಸಿ ವೃತ್ತಿಪರ ತನಿಖೆ ನಡೆಸುತ್ತಿದೆ. ತನಿಖೆಯ ಸಂದರ್ಭದಲ್ಲಿ ಎಲ್ಲ ಆಯಾಮಗಳನ್ನೂ ನೋಡಲಾಗುತ್ತಿದೆ. ಇದುವರೆಗೂ ಯಾವುದೇ ಅಂಶವನ್ನು ನಿರಾಕರಿಸಿಲ್ಲ' ಎಂದು ತಿಳಿಸಿದೆ.
ನಾನು ಮತ್ತು ನನ್ನ ಮಗ ಇಬ್ಬರೂ ಕ್ಲೀನ್ ಇದ್ದೇವೆ: ಉದ್ಧವ್ ಠಾಕ್ರೆ
'ತನಿಖೆ ವೇಳೆ ಡಿಜಿಟಲ್ ಉಪಕರಣಗಳಲ್ಲಿ ಇರುವ ಸೂಕ್ತ ದತ್ತಾಂಶಗಳನ್ನು ತೆಗೆದು ಅವುಗಳನ್ನು ವಿಶ್ಲೇಷಣೆಗೆ ಒಳಪಡಿಸಲು ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಲ್ ಟವರ್ ಸ್ಥಳಗಳಲ್ಲಿನ ದತ್ತಾಂಶಗಳನ್ನು ವಿಶ್ಲೇಷಿಸಲು ಇತ್ತೀಚಿನ ಸಾಫ್ಟ್ವೇರ್ ಸೇರಿದಂತೆ ಅತ್ಯಾಧುನಿಕ ಮೊಬೈಲ್ ಫಾರೆನ್ಸಿಕ್ ಸಾಧನವನ್ನು ಬಳಸಲಾಗಿದೆ' ಎಂದು ವಿವರಿಸಿದೆ.
'ಸಂದರ್ಭವನ್ನು ದೂರುದಾರರು ಮತ್ತು ಅವರ ಕುಟುಂಬದವರು ಹಾಗೂ ಇತರೆ ಅವಲಂಬಿತ ಮೂಲಗಳು ಎತ್ತಿರುವ ವಿಚಾರಗಳನ್ನು ಅರ್ಥ ಮಾಡಿಕೊಳ್ಳಲು ಎಲ್ಲ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ತೀವ್ರ ಹಾಗೂ ಕೂಲಂಕಷ ತನಿಖೆಯನ್ನು ನಡೆಸಲಾಗಿದೆ. ಅಲಿಗಡ, ಫರೀದಾಬಾದ್, ಹೈದರಾಬಾದ್, ಮುಂಬೈ, ಮಣೇಸರ್ ಮತ್ತು ಪಟ್ನಾ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಸ್ಥಳಗಳಿಗೂ ಹಿರಿಯ ಅಧಿಕಾರಿಗಳ ಜತೆಗೆ ತನಿಖಾ ತಂಡ ಭೇಟಿ ನೀಡಿದೆ' ಎಂದು ಹೇಳಿದೆ.
ಅಕ್ಟೋಬರ್ನಲ್ಲಿ ಸಿಬಿಐಗೆ ತನ್ನ ಅಭಿಪ್ರಾಯ ತಿಳಿಸಿದ್ದ ಏಮ್ಸ್ನ ವೈದ್ಯರ ತಂಡ, ಸುಶಾಂತ್ ಅವರದ್ದು ಕೊಲೆಯಲ್ಲ ಮತ್ತು ಅದು ಆತ್ಮಹತ್ಯೆ ಪ್ರಕರಣ ಎಂದಿತ್ತು. ಸುಶಾಂತ್ ಕುಟುಂಬ ಹಾಗೂ ವೈದ್ಯರ ಆರೋಪದಂತೆ ಅವರಿಗೆ ವಿಷ ಪ್ರಾಶನ ಮಾಡಿರುವ ಅಥವಾ ಕತ್ತು ಹಿಸುಕಿರುವ ಸಾಧ್ಯತೆಗಳನ್ನು ತಳ್ಳಿಹಾಕಿತ್ತು.