ಬೆಂಗಳೂರಲ್ಲೂ ಆಯ್ತು ಸಿಬಿಐ ದಾಳಿ!
ಬೆಂಗಳೂರು, ಮೇ 16: ಭಾರತ ಸರ್ಕಾರದ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಗೆ (ಡಿಆರ್ ಡಿಒ) ಸೇರಿದ್ದ ಸುಮಾರು 500 ಕೋಟಿ ರು. ಬೆಲೆಯ ಭೂಮಿಯನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಖಾಸಗಿ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದ ಆರೋಪದ ಮೇರೆಗೆ ಡಿಆರ್ ಡಿಒನ ಮಾಜಿ ಅಧಿಕಾರಿ, ಮಾಜಿ ಲೆಫ್ಟನೆಂಟ್ ಕರ್ನಲ್ ಎಂ.ಜಿ. ತಿಮ್ಮಯ್ಯ ಎಂಬುವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿ ವಿಚಾರಣೆ ನಡೆಸಿದೆ.
ಬೆಂಗಳೂರಿನಲ್ಲಿದ್ದ ತಿಮ್ಮಯ್ಯ ನಿವಾಸದ ಮೇಲೆ ಹಾಗೂ ಖಾಸಗಿ ಬಿಲ್ಡರ್ ಒಬ್ಬರ ಮನೆಯ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ ಸಿಬಿಐ, ಆರೋಪಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
2004ರಿಂದ 2006ರಲ್ಲಿ ತಿಮ್ಮಯ್ಯ ಅವರು, ಬೆಂಗಳೂರಿನ ಸಿ.ವಿ. ರಾಮನ್ ನಗರದಲ್ಲಿರುವ ಡಿಆರ್ ಡಿಒ ಟೌನ್ ಶಿಪ್ ನ ಎಸ್ಟೇಟ್ ಮ್ಯಾನೇಜ್ ಯೂನಿಟ್ (ಇಎಂಯು) ನಲ್ಲಿ ಎಸ್ಟೇಟ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದರು. ಆ
ಆ ವೇಳೆ, ಕೆ.ಆರ್. ಪುರಂ ವ್ಯಾಪ್ತಿಯಲ್ಲಿ ಬರುವ ಬೆನ್ನಿಗನ ಹಳ್ಳಿಯಲ್ಲಿದ್ದ , ಡಿಆರ್ ಡಿಒಗೆ ಸೇರಿದ ಸುಮಾರು 97 ಎಕರೆ ಪ್ರದೇಶವನ್ನು ಖಾಸಗಿ ಬಿಲ್ಡರ್ ಒಬ್ಬರಿಗೆ ಪರಭಾರೆ ಮಾಡಿದ್ದರೆಂದು ಡಿಆರ್ ಡಿಒ ಆರೋಪಿಸಿದೆ. ಈ ಜಾಗವನ್ನು 1989ರಲ್ಲಿ ರಾಜ್ಯ ಸರ್ಕಾರವು ಡಿಆರ್ ಡಿಒಗಾಗಿ ಬಿಟ್ಟುಕೊಟ್ಟಿತ್ತು.
ಆದರೆ, 1994ರಿಂದ 1996ರ ಅವಧಿಯಲ್ಲಿ ರಾಜ್ಯ ಸರ್ಕಾರ, ತಾವು ಡಿಆರ್ ಡಿಒಗೆ ನೀಡಿದ್ದ ಜಾಗದ ಸುಮಾರು 44 ಎಕರೆ ಪ್ರದೇಶವನ್ನು ಡಿನೋಟಿಫೈ ಮಾಡಿತ್ತು. ಈ ವಿಚಾರವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಾರದಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ, ರಾಜ್ಯ ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಿತ್ತು.
ಆನಂತರ ಈ ವಾದ, ಸುಪ್ರೀಂ ಕೋರ್ಟ್ ಗೂ ಹೋಯಿತು. ಹೀಗೆ, ವಿವಾದಕ್ಕೊಳಗಾಗಿದ್ದ ಜಾಗವನ್ನು ತಿಮ್ಮಯ್ಯ ಅವರು ಪರಭಾರೆ ಮಾಡಿದ್ದಾರೆಂದು ಆರೋಪಿಸಲಾಗಿದೆ.