ಚಿಟ್ ಫಂಡ್ ವಂಚನೆ, ಸಿಬಿಐ ವಶಕ್ಕೆ ರೂಪದರ್ಶಿ
ಮುಂಬೈ, ಅ.10: ಕೋಲ್ಕತ್ತಾದ ಶಾರದಾ ಚಿಟ್ ಫಂಡ್ ಹಗರಣದ ನಂತರ ಅರ್ಥ ತತ್ವ ಸಮೂಹ ಸಂಸ್ಥೆ ಚಿಟ್ ಫಂಡ್ ಹಗರಣ ಅನೇಕ ಸೆಲೆಬ್ರಿಟಿಗಳ ನಿದ್ದೆಗೆಡಿಸುತ್ತಿದೆ. ಗ್ರಾಹಕರಿಗೆ ವಂಚನೆ ಎಸಗಿದ ಆರೋಪದಡಿಯಲ್ಲಿ ಮುಂಬೈ ಮೂಲದ ರೂಪದರ್ಶಿ ಹಾಗೂ ಕಿರುತೆರೆ ಧಾರಾವಾಹಿ ನಿರ್ಮಾಪಕಿ ಪ್ರೀತಿ ಭಾಟಿಯಾರನ್ನು ಶುಕ್ರವಾರ ಬಂಧಿಸಿರುವ ಸಿಬಿಐ ತಂಡ ತೀವ್ರ ವಿಚಾರಣೆ ಕೈಗೊಂಡಿದೆ.
ಸುಮಾರು ಮೂರು ಗಂಟೆಗಳ ಕಾಲ ವಿಚಾರಣೆ ನಂತರ ಹೊರ ಬಂದ ಪ್ರೀತಿ 'I am not involved in any stupid chit (fund) scam' ಎಂದು ಮಾಧ್ಯಮಗಳ ಪ್ರತಿನಿಧಿಗಳ ಮುಂದೆ ಅರಚಾಡಿದ್ದಾರೆ.[ವಂಚನೆ: ಅಪರ್ಣಾ ಸೇನ್ ವಿಚಾರಣೆ]
ಅರ್ಥ ತತ್ವ ಸಮೂಹ ಸಂಸ್ಥೆಯು ಚಿಟ್ ಫಂಡ್ ಹಗರಣದಲ್ಲಿ ಮುಂಬೈ ಮೂಲದ ರೂಪದರ್ಶಿ, ನಟಿ ಪ್ರೀತಿ ಭಾಟಿಯಾಳ ವೈಯಕ್ತಿಕ ಖಾತೆ, ಕಂಪನಿ ಖಾತೆ ಹಾಗೂ ಆಕೆಯ ಸಂಬಂಧಿಗಳ ಖಾತೆಗೆ ಹಣ ವರ್ಗಾಯಿಸಿರುವುದು ಸಿಬಿಐ ತನಿಖೆಯ ಸಂದರ್ಭದಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಸಿಬಿಐ ಅಧಿಕಾರಿಗಳ ಎದುರು ಹಾಜರಾದ ಪ್ರೀತಿ ಭಾಟಿಯಾರನ್ನು ಸುದೀರ್ಘ ಕಾಲ ವಿಚಾರಣೆ ನಡೆಸಲಾಗಿದೆ.ಕಳೆದ 18 ದಿನಗಳಲ್ಲಿ ನಾಲ್ಕನೆ ಬಾರಿಗೆ ಪ್ರೀತಿ ವಿಚಾರಣೆ ನಡೆಸಲಾಗಿದೆ ಎಂದು ಸಿಬಿಐ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪ್ರೀತಿ ಭಾಟಿಯಾ ಅವರು ಪಾಲುದಾರರಾಗಿರುವ ಅರ್ಥ ತತ್ವ(ಎಟಿ) ಸಮೂಹ ಸಂಸ್ಥೆಯ ಮುಖ್ಯಸ್ಥ ಪ್ರದೀಪ್ ಸೇಥಿ, ಆಕೆಯ ಮೂಲಕ ಕಿರುತೆರೆ ಧಾರಾವಾಹಿ ಹಾಗೂ ಚಲನಚಿತ್ರ ನಿರ್ಮಾಣದಲ್ಲಿ ಹಣ ತೊಡಗಿಸಿರುವುದು ಅನುಮಾನಕ್ಕೆ ಎಡೆ ಮಾಡಿತ್ತು. ಅಲ್ಲದೆ, ಪ್ರೀತಿಗೆ ಸುಮಾರು 4 ಕೋಟಿ ರು ಪಾಲು ಸಿಕ್ಕಿದೆ ಎಂಬ ಮಾಹಿತಿಯೂ ಸಿಕ್ಕಿತ್ತು. ಹೀಗಾಗಿ ಈ ಬಗ್ಗೆ ಆಕೆಯನ್ನು ಪ್ರಶ್ನಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಒಡಿಯಾದ ಚಲನಚಿತ್ರರಂಗವನ್ನು ಅಲುಗಾಡಿಸುತ್ತಿರುವ ಅರ್ಥ ತತ್ವ ಸಮೂಹದ ಚಿಟ್ ಫಂಡ್ ಹಗರಣ ಈಗ ಬಾಲಿವುಡ್, ಮುಂಬೈನ ಕಿರುತೆರೆ ಪ್ರಪಂಚದಲ್ಲೂ ಸದ್ದು ಮಾಡಲು ದಿನಗಳು ದೂರವಿಲ್ಲ. ಕಳೆದ ಆಗಸ್ಟ್ ತಿಂಗಳಿನಲ್ಲಿ ಒಮ್ಮೆ ಪ್ರೀತಿ ಭಾಟಿಯಾ ಮನೆ ಮೇಲೆ ಸಿಬಿಐ ತಂಡ ದಾಳಿ ನಡೆಸಿ ಬರಿಗೈಯಲ್ಲಿ ವಾಪಸ್ ಆಗಿತ್ತು. ಒಟ್ಟಾರೆ ಬಹುಕೋಟಿ ಚಿಟ್ ಫಂಡ್ ಹಗರಣದಲ್ಲಿ ಇನ್ನಷ್ಟು ದೊಡ್ಡ ತಿಮಿಂಗಲಗಳು ಇರುವ ಶಂಕೆ ಇದ್ದೇ ಇದೆ. (ಪಿಟಿಐ)