ಕಾರ್ತಿ ಚಿದಂಬರಂಗೆ ಮಂಪರು ಪರೀಕ್ಷೆಗೆ ಕೋರಿ ಸಿಬಿಐ ಅರ್ಜಿ
ನವದೆಹಲಿ, ಮಾರ್ಚ್ 7: ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಕಾರ್ತಿ ಚಿದಂಬರಂಗೆ ಮಂಪರು ಪರೀಕ್ಷೆ ನಡೆಸಲು ಅನುಮತಿ ಕೋರಿ ಸಿಬಿಐ ಪಟಿಯಾಲಾ ಹೌಸ್ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.
ಇದೇ ವೇಳೆ ಕಾರ್ತಿ ಚಿದಂಬರಂ ಲೆಕ್ಕ ಪರಿಶೋಧಕ ಭಾಸ್ಕರ್ ರಾಮನ್ ಮತ್ತು ಐಎನ್ಎಕ್ಸ್ ಮೀಡಿಯಾದ ಮಾಜಿ ನಿರ್ದೇಶಕಿ ಇಂದ್ರಾಣಿ ಮುಖರ್ಜಿ ವಿರುದ್ಧ ಪ್ರೊಡಕ್ಷನ್ ವಾರಂಟ್ ಗೂ ಸಿಬಿಐ ಅರ್ಜಿ ಸಲ್ಲಿಸಿದೆ. (ಪ್ರೊಡಕ್ಷನ್ ವಾರಂಟ್ ಅಂದರೆ ಕ್ರಿಮಿನಲ್ ವಿಚಾರಣೆ ಎದುರಿಸುತ್ತಿರುವ ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಕೋರ್ಟ್ ಹೊರಡಿಸುವ ಆದೇಶ.
ಮಾರ್ಚ್ 9ರವರೆಗೆ ಕಾರ್ತಿ ಚಿದಂಬರಂಗೆ ಸಿಬಿಐ ಕಸ್ಟಡಿಯೇ ಗತಿ
ವಿಚಾರಣೆ ವೇಳೆ ಕಾರ್ತಿ ಚಿದಂಬರಂ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುತ್ತಿಲ್ಲ ಎಂಬ ಕಾರಣಕ್ಕೆ ಅವರನ್ನು ಮಂಪರು ಪರೀಕ್ಷೆಗೆ ನೀಡಿ ಎಂದು ಸಿಬಿಐ ಅರ್ಜಿಯಲ್ಲಿ ಕೇಳಿಕೊಂಡಿದೆ. ಈ ಹಿಂದೆ ಎರಡು ಸಂದರ್ಭದಲ್ಲಿ ಕಾರ್ತಿ ಚಿದಂಬರಂ ವಿಚಾರಣೆಗೆ ಯತ್ನಿಸಲಾಯಿತು. ಆದರೆ ಅವರು ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸದೆ ತನಿಖೆಗೆ ಸಹಕರಿಸುತ್ತಿಲ್ಲ. ಹೀಗಾಗಿ ಮಂಪರು ಪರೀಕ್ಷೆ ಅಗತ್ಯವಾಗಿದೆ ಎಂದು ಸಿಬಿಐ ವಾದಿಸಿದೆ.
ಪ್ರಕ್ರಿಯೆಗಳ ಪ್ರಕಾರ ಯಾವುದೇ ತನಿಖಾ ಸಂಸ್ಥೆ ನ್ಯಾಯಾಲಯದ ಅನುಮತಿ ಮೇರೆಗೆ ಮಂಪರು ಪರೀಕ್ಷೆಗೆ ಕೋರಿಕೊಳ್ಳಬಹುದಾಗಿದೆ. ಇದೇ ವೇಳೆ ಆರೋಪಿ ವ್ಯಕ್ತಿಯೂ ಮಂಪರು ಪರೀಕ್ಷೆಗೆ ಸಂಬಂಧಿಸಿದಂತೆ ತನ್ನ ಅಭಿಪ್ರಾಯವನ್ನು ನೀಡಬೇಕಾಗಿದೆ.
ಕಾರ್ತಿ ಚಿದಂಬರಂ ಜಾಮೀನು ಅರ್ಜಿ ವಿಚಾರಣೆಯ ರೋಚಕ ಘಟ್ಟಗಳು