ಬಿಹಾರ ಆಶ್ರಯತಾಣದಲ್ಲಿ 11 ಬಾಲಕಿಯರ ಬರ್ಬರ ಹತ್ಯೆ: ಮೂಳೆಗಳನ್ನು ಪತ್ತೆಹಚ್ಚಿದ ಸಿಬಿಐ
ನವದೆಹಲಿ, ಮೇ 4: ದೇಶವನ್ನೇ ಬೆಚ್ಚಿಬೀಳಿಸಿದ ಬಿಹಾರ ಮುಜಫ್ಫರ್ಪುರದ ಆಶ್ರಯ ತಾಣದಲ್ಲಿನ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಭಯಾನಕ ಮಾಹಿತಿಗಳು ಹೊರಬಿದ್ದಿವೆ.
ಪ್ರಕರಣದ ಪ್ರಮುಖ ಆರೋಪಿ ಬ್ರಜೇಶ್ ಠಾಕೂರ್ ಮತ್ತು ಆತನ ಸಹಚರರು ಆಶ್ರಮದಲ್ಲಿದ್ದ 11 ಬಾಲಕಿಯರನ್ನು ಕೊಂದಿರಬಹುದು ಎಂದು ಸಿಬಿಐ, ಸುಪ್ರೀಂಕೋರ್ಟ್ಗೆ ತಿಳಿಸಿದೆ. ಅಲ್ಲಿನ ಸ್ಮಶಾನದಲ್ಲಿ ಮೂಳೆಗಳ ರಾಶಿಯನ್ನು ವಶಪಡಿಸಿಕೊಂಡಿರುವುದಾಗಿ ಅದು ಹೇಳಿದೆ.
ಮುಜಾಫರ್ ಪುರ್ ಪ್ರಕರಣ: ಬಿಹಾರದ ನಿತೀಶ್ ಸರಕಾರಕ್ಕೆ ಚಾಟಿ ಏಟು
ಸುಪ್ರೀಂಕೋರ್ಟ್ಗೆ ಶುಕ್ರವಾರ ಅಫಿಡವಿಟ್ ಸಲ್ಲಿಸಿರುವ ಸಿಬಿಐ, ತನಿಖೆಯ ಸಂದರ್ಭದಲ್ಲಿ ಸಂತ್ರಸ್ತ ಬಾಲಕಿಯರ ಹೇಳಿಕೆಗಳನ್ನು ದಾಖಲಿಸಿಕೊಳ್ಳುವ ಸಂದರ್ಭದಲ್ಲಿ 11 ಬಾಲಕಿಯರ ಹೆಸರು ಹೊರಬಂದಿವೆ. ಅವರನ್ನು ಠಾಕೂರ್ ಮತ್ತು ಆತನ ಸಹಚರರು ಕೊಂದಿದ್ದಾರೆ ಎಂದು ಹೇಳಿದೆ.
ಆರೋಪಿಗಳಲ್ಲಿ ಒಬ್ಬನಾದ ಗುಡ್ಡು ಪಾಟೀಲ್ ತೋರಿಸಿದ ಸ್ಮಶಾನದ ನಿರ್ದಿಷ್ಟ ಸ್ಥಳವೊಂದರಲ್ಲಿ ಅಗೆದಾಗ ಮೂಳೆಗಳ ರಾಶಿ ದೊರಕಿದ್ದಾಗಿ ಸಂಸ್ಥೆ ವಿವರಿಸಿದೆ.
ಬಿಹಾರದ ಮುಜಫ್ಫರ್ಪುರದಲ್ಲಿ ಎನ್ಜಿಓ ನಡೆಸುತ್ತಿರುವ ಬಾಲಕಿಯರ ಆಶ್ರಯ ತಾಣದಲ್ಲಿ ಅನೇಕ ಬಾಲಕಿಯರ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ನಡೆದಿವೆ ಎಂದು ಆರೋಪಿಸಲಾಗಿದೆ. ಟಾಟಾ ಸಾಮಾಜಿಕ ವಿಜ್ಞಾನ ಸಂಸ್ಥೆಯ (ಟಿಐಎಸ್ಎಸ್) ವರದಿ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.
ಅಶ್ಲೀಲ ಹಾಡಿಗೆ ನರ್ತಿಸುವಂತೆ ಮಾಡಿ, ಮತ್ತು ಬರಿಸಿ ಬಾಲಕಿಯರ ರೇಪ್!
ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು. ಸಿಬಿಐ, ಠಾಕೂರ್ ಸೇರಿದಂತೆ 21 ಮಂದಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು.
35 ಬಾಲಕಿಯರ ವಿವರ
ಮುಜಫ್ಫರ್ಪುರದ 'ಬಾಲಿಕಾ ಘರ್' ಆಶ್ರಯ ತಾಣದಲ್ಲಿ ದಾಖಲಾಗಿದ್ದ 11 ಬಾಲಕಿಯರ ವಿವರಗಳನ್ನು ಪರಿಶೀಲಿಸಿದಾಗ ಆ ಹೆಸರಿನ/ಗುರುತಿನ ಒಟ್ಟು 35 ಬಾಲಕಿಯರು ಅಲ್ಲಿ ಒಂದು ಸಮಯದಲ್ಲಿ ಇದ್ದದ್ದು ಗೊತ್ತಾಗಿದೆ. ತನಿಖಾಧಿಕಾರಿಗಳ ಮುಂದೆ ಅಲ್ಲಿರುವ ಬಾಲಕಿಯರು ನೀಡಿರುವ ಹೇಳಿಕೆಗಳ ಆಧಾರದಲ್ಲಿ ಸ್ಮಶಾನದಲ್ಲಿ ಸ್ಥಳೀಯ ಪೊಲೀಸರು ಮತ್ತು ಸಿಬಿಐ ಅಗೆದು ಪರಿಶೀಲನೆ ನಡೆಸಲಾಗಿದೆ.
ಈ ಬಗ್ಗೆ ಮುಂದಿನ ತನಿಖೆ ಪ್ರಗತಿಯಲ್ಲಿದೆ ಎಂದು ಸಿಬಿಐ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.
ಹೊರಗಿನವರೂ ಭಾಗಿ
ಪ್ರಕರಣದಲ್ಲಿ ಆಶ್ರಯ ತಾಣದ ಹೊರಗಿನವರ ಭಾಗಿಯ ಕುರಿತು ಹೇಳಿಕೆ ನೀಡಿರುವ ಸಿಬಿಐ, ಬಾಲಕಿಯರನ್ನು ಲೈಂಗಿಕವಾಗಿ ಹಿಂಸಿಸಿದ ವ್ಯಕ್ತಿಗಳ ಬಗ್ಗೆ ಸೂಕ್ತವಾದ ವಿಚಾರಣೆ ನಡೆಸಲಾಗಿದೆ. ಸಂತ್ರಸ್ತೆಯರು ನೀಡಿರುವ ಮಾಹಿತಿ ಆಧಾರದಲ್ಲಿ ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದೆ.
ಬಿಹಾರ ಆಶ್ರಮ ತಾಣಗಳಲ್ಲಿನ ರೇಪ್ ಕೇಸ್ ಸಿಬಿಐ ತನಿಖೆಗೆ
|
ಆರೋಪಿಗಳ ರಕ್ಷಣೆಗೆ ಪ್ರಯತ್ನ ಆರೋಪ
ಆಶ್ರಯ ತಾಣದಲ್ಲಿದ್ದ ಬಾಲಕಿಯರ ಮೇಲೆ ಹೊರಗಿನ ವ್ಯಕ್ತಿಗಳೂ ಬಂದು ದೌರ್ಜನ್ಯ ಎಸಗಿದ್ದಾರೆ. ಜತೆಗೆ ಠಾಕೂರ್ನ ಸ್ನೇಹಿತರು ಕೂಡ ಭಾಗಿಯಾಗಿದ್ದಾರೆ. ಆದರೆ, ಸಂತ್ರಸ್ತೆಯರು ಅವರ ಕುರಿತು ಮಾಹಿತಿ ನೀಡಿದ್ದರೂ ಸಿಬಿಐ ಅವರನ್ನು ವಿಚಾರಣೆಗೆ ಒಳಪಡಿಸದೆ ನೈಜ ಪಾತಕಿಗಳ ರಕ್ಷಣೆಗೆ ಪ್ರಯತ್ನಿಸುತ್ತಿದೆ ಎಂದು ಅರ್ಜಿದಾರರ ಪರ ವಕೀಲರಾದ ಶೋಯೆಬ್ ಅಲಂ ಮತ್ತು ಫೌಜಿಯಾ ಶಕೀಲ್ ಆರೋಪಿಸಿದರು.
ಆಶ್ರಯ ತಾಣಕ್ಕೆ ಬರುತ್ತಿದ್ದ ಠಾಕೂರ್ನ ಸ್ನೇಹಿತರಿಂದ ಮತ್ತು ಹೊರಗಿನವರಿಂದ ಅತ್ಯಾಚಾರಕ್ಕೆ ಒಳಗಾಗುತ್ತಿದ್ದುದ್ದಲ್ಲದೆ, ಸಂತ್ರಸ್ತ ಬಾಲಕಿಯರನ್ನು ಹೋಟೆಲ್ಗಳಿಗೂ ಕಳುಹಿಸಲಾಗುತ್ತಿತ್ತು ಎಂಬುದನ್ನು ಬಾಲಕಿಯರು ಸಿಬಿಐ ಮುಂದೆ ಹೇಳಿದ್ದಾರೆ ಎಂದು ಸಹ ಅರ್ಜಿದಾರರು ತಿಳಿಸಿದ್ದಾರೆ.
ಆರೋಪ ಆಧಾರರಹಿತ
ಅರ್ಜಿದಾರರ ಆರೋಪಗಳಿಗೆ ಸೂಕ್ತ ತಳಹದಿಯಿಲ್ಲ. ಅವು ಆಧಾರರಹಿತ. ಸಿಬಿಐ ಈಗಾಗಲೇ ಪ್ರತಿಕ್ರಿಯೆ ನೀಡಿದೆ ಎಂದು ಸಿಬಿಐ ಪರ ವಕೀಲ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ತಿಳಿಸಿದರು.
ತನಿಖೆಯನ್ನು ಪಕ್ಷಾತೀತ, ನ್ಯಾಯಸಮ್ಮತ ಮತ್ತು ಕೂಲಂಕಷವಾಗಿ ನಡೆಸಲಾಗಿದೆ ಎಂದು ಸಿಬಿಐ ಅಫಿಡವಿಟ್ನಲ್ಲಿ ಹೇಳಿದೆ. ಸಂಕ್ಷಿಪ್ತ ವಿಚಾರಣೆಯ ಬಳಿಕ ಪ್ರಕರಣವನ್ನು ಮೇ 6ಕ್ಕೆ ನಿಗದಿಪಡಿಸಲಾಯಿತು.
16 ತಾಣಗಳಲ್ಲಿಯೂ ಇದೇ ಕಥೆ!
ಈ ಪ್ರಕರಣವನ್ನು ಸುಪ್ರೀಂಕೋರ್ಟ್ ಬಿಹಾರದಿಂದ ದೆಹಲಿಯ ಸಾಕೇತ್ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿರುವ 'ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ' (ಪೋಕ್ಸೋ) ನ್ಯಾಯಾಲಯಕ್ಕೆ ಫೆಬ್ರವರಿಯಲ್ಲಿ ವರ್ಗಾಯಿಸಿತ್ತು.
ಟಿಐಎಸ್ಎಸ್ ವರದಿ ಆಧರಿಸಿ ಕಳೆದ ನವೆಂಬರ್ 28ರಂದು ಸುಪ್ರೀಂಕೋರ್ಟ್, ಬಿಹಾರದ 16 ಬಾಲಕಿಯರ ಆಶ್ರಯ ಗೃಹಗಳಲ್ಲಿ ದೈಹಿಕ ಮತ್ತು ಲೈಂಗಿಕ ದೌರ್ಜನ್ಯಗಳು ನಡೆದಿವೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಸಿಬಿಐಗೆ ಸೂಚನೆ ನೀಡಿತ್ತು.
ಬಿಹಾರ ಸಚಿವೆಯ ಬಂಧನ
ಆಶ್ರಯ ತಾಣ, ನಿರ್ಗತಿಕರ ಕೇಂದ್ರಗಳಲ್ಲಿನ ಸೆಕ್ಸ್ ಹಗರಣಕ್ಕೆ ಸಂಬಂಧಿಸಿದಂತೆ ನಿತೀಶ್ ಕುಮಾರ್ ಅವರ ಕ್ಯಾಬಿನೆಟ್ ನಲ್ಲಿ ಸಮಾಜ ಕಲ್ಯಾಣ ಖಾತೆ ಸಚಿವೆ ಮಂಜು ವರ್ಮಾ ನವೆಂಬರ್ 20ರಂದು ನ್ಯಾಯಾಲಯಕ್ಕೆ ಶರಣಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಮಂಜು ವರ್ಮಾ ಅವರನ್ನು ಇನ್ನು ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದ ಸುಪ್ರೀಂಕೋರ್ಟ್, ಬಿಹಾರದ ಹಿರಿಯ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತ್ತು.