ಮಲ್ಯ ಕೇಸ್: ಲಂಡನ್ ಗೆ ಕಾಲಿಟ್ಟ ಭಾರತೀಯ ತನಿಖಾಧಿಕಾರಿಗಳು
ಭಾರತೀಯ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರು. ಸಾಲ ಪಾವತಿಸದೇ ಲಂಡನ್ ನಲ್ಲಿ ಹೋಗಿ ನೆಲೆ ನಿಂತಿರುವ ಭಾರತೀಯ ಮದ್ಯೋದ್ಯಮಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ವಿಚಾರದಲ್ಲಿ ಭಾರತ ಮತ್ತೊಂದು ಹೆಜ್ಜೆ.
ನವದೆಹಲಿ, ಮೇ 2: ಲಂಡನ್ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿರುವ ಮಲ್ಯ ಅವರನ್ನು ಕರೆತರುವ ಉದ್ದೇಶದಿಂದ ಲಂಡನ್ ಪೊಲೀಸ್ ಇಲಾಖೆ ಹಾಗೂ ರಾಜತಾಂತ್ರಿಕ ಸಿಬ್ಬಂದಿಯೊಡನೆ ಮಾತುಕತೆ ನಡೆಸಲು ಕೇಂದ್ರದ ಜಾರಿ ನಿರ್ದೇಶನಾಲಯ (ಇಡಿ) ಹಾಗೂ ಕೇಂದ್ರೀಯ ತನಿಖಾ ದಳದ (ಸಿಬಿಐ) ಆಯ್ದ ಅಧಿಕಾರಿಗಳ ತಂಡವೊಂದು ಲಂಡನ್ ಗೆ ಹೋಗಿದೆ.
ಈ ಮೂಲಕ, ಭಾರತೀಯ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರು. ಸಾಲ ಪಾವತಿಸದೇ ಲಂಡನ್ ನಲ್ಲಿ ಹೋಗಿ ನೆಲೆ ನಿಂತಿರುವ ಭಾರತೀಯ ಮದ್ಯೋದ್ಯಮಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ವಿಚಾರದಲ್ಲಿ ಭಾರತ ಮತ್ತೊಂದು ಹೆಜ್ಜೆಯಿಟ್ಟಂತಾಗಿದೆ.
ಅತ್ತ, ಇಂಗ್ಲೆಂಡ್ ಕಾನೂನು ಸಲಹೆಗಾರರು ಸೇರಿದಂತೆ ಅನೇಕ ಅಧಿಕಾರಿಗಳ ಜತೆಗೆ ಈ ತಂಡದ ಸದಸ್ಯರು ಮಾತುಕತೆ ನಡೆಸಲಿದ್ದಾರೆ. ಇದೇ ವಾರಾಂತ್ಯಕ್ಕೆ ಭಾರತಕ್ಕೆ ಆಗಮಿಸಲಿರುವ ಬ್ರಿಟನ್ ನ ಗೃಹ ಸಚಿವಾಲಯದ ಕಾರ್ಯದರ್ಶಿ ಆ್ಯಂಬರ್ ರುಡ್ ಹಾಗೂ ಭಾರತದ ಗೃಹ ಸಚಿವಾಲಯದ ಕಾರ್ಯದರ್ಶಿ ರಾಜೀವ್ ರಾಜೀವ್ ಮಹಾರಿಷಿ ಅವರ ನಡುವೆಯೂ ಇದು ಮತ್ತೆ ಚರ್ಚೆಗೆ ಬರಲಿದೆ ಎಂದು ಕೆಲ ಮೂಲಗಳು ತಿಳಿಸಿವೆ.
ಭಾರತೀಯ ಅಧಿಕಾರಿಗಳು ಲಂಡನ್ ಪ್ರವೇಶಿಸುವ ಹೊತ್ತಿಗಾಗಲೇ ಅಲರ್ಟ್ ಆಗಿರುವ ಮಲ್ಯ ಅವರ ಕಾನೂನು ಸಲಹೆಗಾರರು, ಮಲ್ಯ ಅವರ ಇಡೀ ಪ್ರಕರಣ ರಾಜಕೀಯ ಪಿತೂರಿ ಎಂದು ಬಿಂಬಿಸಲು ಸಿದ್ಧತೆ ನಡೆಸಿದೆ ಎಂದು ಅವರ ಆಪ್ತ ವಲಯ ಹೇಳಿದೆ.
ಈ ಹಿಂದೆ, ಭಾರತದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಮಲ್ಯ ಸಂಸದರಾಗಿದ್ದರು. ಹಾಗಾಗಿ, ಅವರ ವಿರುದ್ಧದ ರಾಜಕೀಯ ಫಲವಾಗಿ ಅವರನ್ನು ಸಾಲಗಾರರನ್ನಾಗಿ ಬಿಂಬಿಸಿ ಹಲವಾರು ಪ್ರಕರಣಗಳಲ್ಲಿ ಸಿಕ್ಕಿಹಾಕಿಸಲಾಗಿದೆ ಎಂದು ಮಲ್ಯ ಅವರ ಕಾನೂನು ಸಲಹೆಗಾರರ ತಂಡ ನಿರ್ಧರಿಸಿದ ಎಂದು ಹೇಳಲಾಗಿದೆ.