ನಾಯಿ ಹೋಯ್ತು, ಬೆಕ್ಕು ಬಂತು, ಮುಂದೆ ಏನ್ಬರುತ್ತೋ?
ಕಾಸರಗೋಡು, ಜುಲೈ, 23 : ಹಲವು ದಿನಗಳಿಂದ ಆಧಾರ್ ಕಾರ್ಡ್ ನಲ್ಲಿ ಮನುಷ್ಯರ ಭಾವಚಿತ್ರದ ಬದಲಿಗೆ ಪ್ರಾಣಿಗಳ ಭಾವಚಿತ್ರ ಬರಲು ಶುರುವಾಗಿದೆ. ಇದು ಅಧಿಕಾರಿಗಳ ಅಸಡ್ಡೆತನವೋ, ಅಥವಾ ಕಾರ್ಯಕರ್ತರನ್ನು ಸಂಕಟಕ್ಕೆ ಸಿಲುಕಿಸುವ ಹುನ್ನಾರವೋ ಒಂದೂ ತಿಳಿಯುತ್ತಿಲ್ಲ.
ನಗರದಲ್ಲಿ ಆಧಾರ್ ಕಾರ್ಡ್ ಅರ್ಜಿಯಲ್ಲಿ ಬೆಕ್ಕಿನ ಭಾವ ಚಿತ್ರ ಅಂಟಿಸಿದ ಇಬ್ಬರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಆರೋಪಿಗಳನ್ನು ಬಂಧಿಸಿದ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.[ನಾಯಿಗೂ ಆಧಾರ್ ಕಾರ್ಡ್ ಮಾಡಿಸಿದ ಕಿಲಾಡಿ!]
ಅಜೀಜ್ ಅಬ್ದುಲ್ಲಾ ಮತ್ತು ಜಬೀಲ್ ಮಂಜಿಲ್ ಎಂಬುವರು ಆಧಾರ್ ಅರ್ಜಿಯಲ್ಲಿ ಬೆಕ್ಕಿನ ಭಾವಚಿತ್ರ ಅಂಟಿಸಿ ಜುಲೈ 7 ರಂದು ಕಚೇರಿಗೆ ಸಲ್ಲಿಸಿದ್ದರು. ಅರ್ಜಿ ಪರಿಶೀಲನೆ ಸಮಯದಲ್ಲಿ ಇದನ್ನು ಪರಾಮರ್ಶಿಸಿದ ಅಧಿಕಾರಿಗಳು ಇವರ ಹಾಗೂ ಕಾರ್ಯನಿರ್ವಹಿಸುವ ಸಂಸ್ಥೆಯ ವಿರುದ್ದ ಬೆಂಗಳೂರಿನ Regional Aadhaar Card Additional ನ ನಿರ್ದೇಶಕರಾದ ಡಿ.ಎಂ ಗುಜ್ರಾಲ್ ದೂರು ನೀಡಿದ್ದರು.
ಈ ಕೃತ್ಯದ ಕುರಿತು ದೂರು ದಾಖಲಿಸಿಕೊಂಡ ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದು, ಕಂಬ್ಳಾ ಎಂಬಲ್ಲಿ ಆಧಾರ್ ಕಾರ್ಡ್ ನೋಂದಾವಣೆ ಮಾಡುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.