ಕಾಶ್ಮೀರದ 40 ಬ್ಯಾಂಕ್ ಶಾಖೆಗಳಲ್ಲಿ ನಗದು ವ್ಯವಹಾರ ಸ್ಥಗಿತ
ಜಮ್ಮು-ಕಾಶ್ಮೀರದ ಬ್ಯಾಂಕ್ ಗಳ ಮೇಲೆ ನಿರಂತರವಾಗಿ ಉಗ್ರರ ದಾಳಿ ನಡೆಯುತ್ತಿರುವ ರಕ್ಷಣಾ ಸಂಸ್ಥೆಗಳ ಸಲಹೆ ಆಧಾರದ ಮೇಲೆ ನಲವತ್ತು ಶಾಖೆಗಳಲ್ಲಿ ನಗದು ವ್ಯವಹಾರ ನಡೆಸದಿರಲು ತೀರ್ಮಾನಿಸಲಾಗಿದೆ
ಶ್ರೀನಗರ್, ಮೇ 6: ದಕ್ಷಿಣ ಕಾಶ್ಮೀರದಲ್ಲಿ ಉಗ್ರಗಾಮಿಗಳು ಬ್ಯಾಂಕ್ ಗಳನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿರುವ ಹಿನ್ನೆಲೆಯಲ್ಲಿ ತುಂಬ ಸೂಕ್ಷ್ಮ ಪ್ರದೇಶವಾದ ಪುಲ್ವಾಮ ಹಾಗೂ ಶೋಪಿಯಾನ್ ನಲ ನಲವತ್ತು ಶಾಖೆಗಳಲ್ಲಿ ನಗದು ವ್ಯವಹಾರವನ್ನೇ ಸ್ಥಗಿತಗೊಳಿಸಲಾಗಿದೆ.
ರಕ್ಷಣಾ ಸಂಸ್ಥೆಗಳ ಸಲಹೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದ್ದು, ಈ ಎರಡು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುವ ಬ್ಯಾಂಕ್ ಗಳಿಗೆ ನಗದು ವ್ಯವಹಾರಗಳನ್ನು ನಿಲ್ಲಿಸುವಂತೆ ಸೂಚಿಸಲಾಗಿತ್ತು. ಜಮ್ಮುಮತ್ತು ಕಾಶ್ಮೀರ ಬ್ಯಾಂಕ್ ಹಾಗೂ ಎಲ್ಲಾಕ್ವೈ ದೆಹಾತಿ ಬ್ಯಾಂಕ್ ನ ಶಾಖೆಗಳಲ್ಲಿ ನಗದು ವ್ಯವಹಾರಗಳನ್ನು ಮಾಡದಂತೆ ನಿರ್ಧರಿಸಲಾಗಿದೆ.[ಬ್ಯಾಂಕ್ ವಾಹನದ ಮೇಲೆ ಶಂಕಿತ ಉಗ್ರರ ದಾಳಿ, ಆರು ಮಂದಿ ಸಾವು]
ಎಟಿಎಂ ಸೇವೆ ಸೇರಿದಂತೆ ಇತರ ಬ್ಯಾಂಕ್ ಕಾರ್ಯಾಚರಣೆಗಳು ಈ ಪ್ರದೇಶಗಳಲ್ಲಿ ಮುಂದುವರಿಯಲಿದೆ ಎಂದು ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಉಗ್ರರು ದಾಳಿ ನಡೆಸುವ ಸಾಧ್ಯತೆ ಬಗ್ಗೆ ರಕ್ಷಣಾ ಸಂಸ್ಥೆಗಳು ಮಾಹಿತಿ ನೀಡಿರುವುದರಿಂದ ಈ ಶಾಖೆಗಳಲ್ಲಿ ನಗದು ವ್ಯವಹಾರ ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ" ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಾರ್ವಜನಿಕರು ಇದೇ ಪ್ರದೇಶದ ಉಳಿದ ಕಡೆ ಯಾವ ಹತ್ತಿರದ ಬ್ಯಾಂಕ್ ಶಾಖೆಯಲ್ಲಿ ನಗದು ವ್ಯವಹಾರ ನಡೆಯುತ್ತದೋ ಅಲ್ಲಿ ಹಣ ತೆಗೆದುಕೊಳ್ಳಬಹುದು. ನಗದು ವ್ಯವಹಾರ ಸ್ಥಗಿತಗೊಳಿಸುವ ನಿರ್ಧಾರ ತಾತ್ಕಾಲಿಕವಾದದ್ದು. ಬ್ಯಾಂಕ್ ನೌಕರರ ಪ್ರಾಣಿ ಹಾಗೂ ಬ್ಯಾಂಕ್ ನ ಆಸ್ತಿ ರಕ್ಷಣೆಗಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ.[ಭಾರತೀಯ ಸೈನಿಕರ ದೇಹ ತುಂಡರಿಸಿದ ಪಾಕ್ ಸೇನೆ]
ಹೆಚ್ಚುವರಿ ರಕ್ಷಣಾ ವ್ಯವಸ್ಥೆ, ಬುಲೆಟ್ ಪ್ರೂಫ್ ನಗದು ವ್ಯಾನ್ ಸೇರಿದಂತೆ ಇತರ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಬ್ಯಾಂಕ್ ಗಳ ಮೇಲೆ ನಿರಂತರವಾಗಿ ಉಗ್ರರಿಂದ ದಾಳಿಗಳಾಗುತ್ತಿರುವ ಹಿನ್ನೆಲೆಯಲ್ಲಿ ಇಂಥ ತೀರ್ಮಾನ ಮಾಡಲಾಗಿದೆ.