ತಂಗುದಾಣಕ್ಕೆ ನುಗ್ಗಿದ ಕಾರು; ನಾಲ್ವರ ಬಲಿ
ಲಖ್ನೌ: ವೇಗವಾಗಿ ಸಾಗಿಬಂದ ಕಾರೊಂದು ದಿನಗೂಲಿ ಕಾರ್ಮಿಕರು ಮಲಗಿದ್ದ ತಂಗುದಾಣಕ್ಕೆ ನುಗ್ಗಿದ ಪರಿಣಾಮ, ನಾಲ್ವರು ಕೂಲಿಯಾಳುಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಲಖ್ನೌನ ದಲೀಬಾಘ್ ನಲ್ಲಿ ಭಾನುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ನಡೆದಿದೆ. ಕಾರಿನಲ್ಲಿದ್ದ ಇಬ್ಬರ ಪೈಕಿ ಒಬ್ಬ ಸಮಾಜವಾದಿ ಪಕ್ಷದ ಮಾಜಿ ಶಾಸಕರ ಪುತ್ರ ಎಂದು ಹೇಳಲಾಗಿದೆ.
ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, ಗಾಯಗೊಂಡಿರುವ ಆರು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದ್ದು, ಇನ್ನಿಬ್ಬರಿಗೆ ಅಲ್ಪಪ್ರಮಾಣದ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.
ದೂರದ ಉತ್ತರ ಪ್ರದೇಶದಿಂದ ಕೂಲಿಗಾಗಿ ಆಗಮಿಸಿದ್ದ ಈ ಕೂಲಿಗಾರರಿಗೆ ಲಖನೌನ ಮಧ್ಯಭಾಗದಲ್ಲಿರುವ ದಲೀಬಾಘ್ ನಲ್ಲಿನ ರಸ್ತೆಯೊಂದರ ಪಕ್ಕದ ತಂಗುದಾಣದಲ್ಲಿ ಮಲಗುವ ವ್ಯವಸ್ಥೆ ಮಾಡಲಾಗಿತ್ತು. ಒಟ್ಟು 35 ಕೂಲಿಯಾಳುಗಳು ರಾತ್ರಿ ತಂಗಿದ್ದರು.
ಶನಿವಾರವೂ ಎಂದಿನಂತೆ ತಮ್ಮ ಕೂಲಿ ಮುಗಿಸಿ ಊಟ ಮಾಡಿ ಮಲಗಿದ್ದರು. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಅತಿ ವೇಗದಿಂದ ಬಂದ ಹುಂಡೈ ಐ20 ಕಾರು ನಿಯಂತ್ರಣ ತಪ್ಪಿ ಈ ತಂಗುದಾಣದೊಳಗ್ಗೆ ನುಗ್ಗಿದ್ದರಿಂದಾಗಿ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಎಲ್ಲಾ ಕಾರ್ಮಿಕರು ಉತ್ತರ ಪ್ರದೇಶದ ಬಹರೈಚ್ ಜಿಲ್ಲೆಯವರು ಎಂದು ಹೇಳಲಾಗಿದೆ.
ಘಟನೆಯ ನಂತರ, ಕಾರಿನೊಳಗಿದ್ದ ಇಬ್ಬರು ಓಡಿಹೋಗಲು ಯತ್ನಿಸಿದ್ದರು. ತಕ್ಷಣವೇ ಅವರನ್ನು ಬೆನ್ನಟ್ಟಿದ ಇತರ ಕೂಲಿಕಾರ್ಮಿಕರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅವರಲ್ಲೊಬ್ಬ ಸಮಾಜವಾದಿ ಪಕ್ಷದ ನಾಯಕರ ಪುತ್ರನೆಂಬುದು ತಿಳಿದುಬಂದಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.