ದಿಶಾ ರವಿಗೆ ಜಾಮೀನು ನೀಡುವಾಗ ಕೋರ್ಟ್ ಹೇಳಿದ್ದೇನು?
ನವದೆಹಲಿ, ಫೆಬ್ರವರಿ 23: ಟೂಲ್ ಕಿಟ್ ಪ್ರಕರಣದಲ್ಲಿ ಫೆ. 13ರಂದು ಬೆಂಗಳೂರಿನಲ್ಲಿ ಬಂಧನಕ್ಕೆ ಒಳಗಾಗಿದ್ದ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರಿಗೆ ದೆಹಲಿ ಸೆಷನ್ಸ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ ನ್ಯಾಯಾಧೀಶ ಧರ್ಮೇಂದ್ರ ರಾಣಾ, ಅನೇಕ ವಿಚಾರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣದಲ್ಲಿ ಪೊಲೀಸರ ತನಿಖೆಯು ಅತ್ಯಲ್ಪ ಮತ್ತು ಹುರುಳಿಲ್ಲದ ಪುರಾವೆಗಳ ಆಧಾರದಲ್ಲಿ ನಡೆದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 'ದಾಖಲೆಯಲ್ಲಿನ ಅತ್ಯಲ್ಪ ಮತ್ತು ಹುರುಳಿಲ್ಲದ ಪುರಾವೆಗಳನ್ನು ಪರಿಗಣಿಸಿ, ಯಾವುದೇ ಅಪರಾಧ ಪೂರ್ವಾಪರ ಇಲ್ಲದ 22 ವರ್ಷದ ಯುವತಿಗೆ ಜಾಮೀನಿನ ನಿಯಮ ಉಲ್ಲಂಘಿಸಲು ಯಾವುದೇ ಪ್ರಬಲ ಕಾರಣ ನನಗೆ ಕಾಣಿಸುತ್ತಿಲ್ಲ' ಎಂದು ಹೇಳಿದ್ದಾರೆ.
ಟೂಲ್ಕಿಟ್ ಪ್ರಕರಣ: ದಿಶಾ ರವಿಗೆ ಕೊನೆಗೂ ಜಾಮೀನು ಮಂಜೂರು
'ನನ್ನ ಅಭಿಪ್ರಾಯದ ಪ್ರಕಾರ, ಯಾವುದೇ ಪ್ರಜಾಪ್ರಭುತ್ವ ದೇಶದಲ್ಲಿ ನಾಗರಿಕರು ಸರ್ಕಾರದ ಆತ್ಮಸಾಕ್ಷಿಯನ್ನು ಕಾಪಾಡುವವರು. ಅವರು ಸರ್ಕಾರದ ನೀತಿಗಳ ವಿರುದ್ಧ ಅಸಮ್ಮತಿ ವ್ಯಕ್ತಪಡಿಸುವುದನ್ನು ಆಯ್ಕೆಮಾಡಿಕೊಂಡ ಒಂದೇ ಕಾರಣಕ್ಕೆ ಅವರನ್ನು ಸುಮ್ಮನೆ ಕಂಬಿಯ ಹಿಂದೆ ಹಾಕಲು ಸಾಧ್ಯವಿಲ್ಲ. ಸರ್ಕಾರಗಳ ಗಾಸಿಗೊಂಡ ಘನತೆಯನ್ನು ನಿಭಾಯಿಸಲು ದೇಶದ್ರೋಹದ ಅಪರಾಧವನ್ನು ಹೇರಲು ಆಗುವುದಿಲ್ಲ' ಎಂದು ಆದೇಶದಲ್ಲಿ ತೀಕ್ಷ್ಣವಾಗಿ ತಿಳಿಸಿದ್ದಾರೆ.
'ಅಭಿವ್ಯಕ್ತಿ ಸ್ವಾತಂತ್ರ್ಯವು ಜಾಗತಿಕ ಕೇಳುಗರನ್ನು ಹೊಂದುವ ಹಕ್ಕನ್ನು ಒಳಗೊಂಡಿದೆ. ಸಂವಹನದಲ್ಲಿ ಯಾವುದೇ ಭೌಗೋಳಿಕ ಅಡೆತಡೆಗಳಿಲ್ಲ. ಸಂವಹನ ಕಳುಹಿಸುವ ಮತ್ತು ಪಡೆಯುವಲ್ಲಿ ನಾಗರಿಕರಿಗೆ ಮೂಲಭೂತ ಹಕ್ಕು ಇದೆ. ಕಾನೂನಿನ ನಾಲ್ಕು ಮೂಲೆಗಳಿಂದಲೂ ಇದಕ್ಕೆ ಅನುಮತಿ ಇರುವರೆಗೂ ಹಾಗೂ ಎಲ್ಲೆಡೆಗಿನ ಕೇಳುಗರಿಗೆ ಅದನ್ನು ಆಲಿಸುವ ಅವಕಾಶ ಇರುವವರೆಗೂ ಆ ಹಕ್ಕು ಇರುತ್ತದೆ' ಎಂದು ನ್ಯಾಯಾಧೀಶರು ಹೇಳಿದ್ದಾರೆ.