ರಾಹುಲ್ ವಿರುದ್ಧ ಮಾಜಿ ಕಾಂಗ್ರೆಸ್ಸಿಗ ರಾಯ್ ವಾಗ್ದಾಳಿ
ಛತ್ತೀಸ್ ಗಢ, ಅಕ್ಟೋಬರ್ 19: ಪಕ್ಷ ವಿರೋಧಿ ಚಟುವಟಿಕೆ ಕೈಗೊಂಡ ಆರೋಪದಲ್ಲಿ ಕಾಂಗ್ರೆಸ್ ನಿಂದ ಅಮಾನತುಗೊಂಡಿರುವ ಛತ್ತೀಸ್ ಗಢ ಶಾಸಕ ಆರ್.ಕೆ.ರಾಯ್ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮಾನ ಹರಾಜು ಹಾಕಿದ್ದಾರೆ. ರಾಯ್ ಪುರದಲ್ಲಿ ನಡೆದ ಪಕ್ಷದ ಸಭೆಯಲ್ಲಿ ರಾಯ್ ಅಮಾನತು ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಜನತಾ ಕಾಂಗ್ರೆಸ್ ಪಾರ್ಟಿ ಮುಖ್ಯಸ್ಥ ಅಜಿತ್ ಜೋಗಿ ಅವರನ್ನು ರಾಯ್ ಬೆಂಬಲಿಸುತ್ತಾರೆ ಎಂಬುದು ಆರೋಪ. ಬಿ.ಕೆ.ಹರಿಪ್ರಸಾದ್ ಅವರೇ ರಾಯ್ ಅಮಾನತು ಸುದ್ದಿಯನ್ನು ಮಾಧ್ಯಮದವರಿಗೆ ನೀಡಿದ್ದಾರೆ. ರಾಯ್ ಅವರನ್ನು ಪಕ್ಷದಿಂದಲೇ ವಜಾ ಮಾಡಬೇಕು ಎಂದು ಪಕ್ಷದ ಕೇಂದ್ರ ಶಿಸ್ತು ಸಮಿತಿಗೆ ಶಿಫಾರಸು ಕೂಡ ಮಾಡಲಾಗಿದೆ. ಅಂದಹಾಗೆ ಇದು ಸರ್ವಾನುಮತದ ತೀರ್ಮಾನ ಅಂತಲೂ ತಿಳಿಸಿದ್ದಾರೆ.
ಕಾಂಗ್ರೆಸ್ ನಿರ್ಧಾರ ಸ್ವಾಗತಾರ್ಹ ಎಂದಿರುವ ರಾಯ್, 'ರಾಹುಲ್ ಗಾಂಧಿ ವಿರುದ್ಧ ಮಾತನಾಡಿದೆ ಅನ್ನೋ ಕಾರಣಕ್ಕೆ ಈ ಕ್ರಮ ಕೈಗೊಂಡಿದ್ದಾರೆ. ಕತ್ತೆಯನ್ನು ಕುದುರೆ ಅನ್ನೋದಿಕ್ಕೆ ಅಗುತ್ತಾ? ಒಂದು ವೇಳೆ ನನ್ನ ಮಾತು ತಪ್ಪು ಅಂದರೆ, ಒಂದೋ ಅವರು ಕುರುಡರಾಗಿರಬೇಕು ಅಥವಾ ಕುರುಡರ ಹಾಗೆ ನಟಿಸುತ್ತಿರಬೇಕು' ಎಂದು ಹೇಳಿದ್ದಾರೆ.
ನನಗೇನೂ ಇದರಿಂದ ದುಃಖ ಇಲ್ಲ. ಬುಡಕಟ್ಟು ಜನಾಂಗದ ನಿಜವಾದ ಧ್ವನಿ ಹಾಗೂ ಪ್ರತಿನಿಧಿ ನಾನು. ಈಗ ಸ್ವತಂತ್ರನಾದೆ. ನನ್ನ ವಿರುದ್ಧ ಕ್ರಮ ತೆಗೆದುಕೊಂಡ ಕಾಂಗ್ರೆಸ್ ನ ಬುಡಕಟ್ಟು ವಿರೋಧಿ ಮುಖ ಬಯಲಾಗಿದೆ ಎಂದಿದ್ದಾರೆ. ಛತ್ತೀಸ್ ಗಢ ಕಾಂಗ್ರೆಸ್ ಕಳೆದ ವಾರ, ಸಾರ್ವಜನಿಕವಾಗಿ ಪಕ್ಷದ ವಿರುದ್ಧ ಹೇಳಿಕೆ ನೀಡಿದ ಕಾರಣಕ್ಕೆ, 'ಪಕ್ಷ ವಿರೋಧಿ' ಚಟುವಟಿಕೆ ಎಂದು ಷೋಕಾಸ್ ನೋಟಿಸ್ ನೀಡಿದೆ.
ರಾಯ್ ಮೊದಲಿಗೆ ಪೊಲೀಸ್ ಅಧಿಕಾರಿಯಾಗಿದ್ದವರು. ಅಜಿತ್ ಜೋಗಿಯವರ ಕಟ್ಟಾ ಬೆಂಬಲಿಗ. ಕಾಂಗ್ರೆಸ್ ತೊರೆದ ನಂತರ ಜೋಗಿ, ಕಳೆದ ಜೂನ್ ನಲ್ಲಿ ಸ್ವಂತ ಪಕ್ಷ ಆರಂಭಿಸಿದ್ದಾರೆ. ರಾಯ್ ನನ್ನು ರಾಜಕೀಯಕ್ಕೆ ಕರೆತಂದು, ಗುಂಡೇರ್ ದೆಹಿಯಿಂದ 2013ರಲ್ಲಿ ವಿಧಾನಸಭೆಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿದ್ದು ಕೂಡ ಇದೇ ಜೋಗಿ.