ಮಹಾ ಸರ್ಕಾರ ಪತನವಾಗುತ್ತಾ: ಅಧಿಕಾರಕ್ಕೆ ಬರಲು ಬಿಜೆಪಿ ಕಸರತ್ತು- ಸಂಖ್ಯೆಗಳ ಲೆಕ್ಕಾಚಾರ?
ಮುಂಬೈ, ಜೂನ್ 21: ಮಹಾರಾಷ್ಟ್ರದ ಸಚಿವ ಏಕನಾಥ್ ಶಿಂಧೆ ಮತ್ತು ಹಲವು ಶಾಸಕರು ಅಜ್ಞಾತ ಸ್ಥಳದಲ್ಲಿದ್ದು, ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದ್ದಾರೆ. ಬಂಡಾಯವೆದ್ದು ಶಿಂಧೆ ಮತ್ತವರ ಬೆಂಬಲಿಗರು ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆದರೆ ಮಹಾರಾಷ್ಟ್ರ ಸಮ್ಮಿಶ್ರ ಸರ್ಕಾರದ ಭವಿಷ್ಯ ಏನಾಗಲಿದೆ ಎನ್ನುವ ಪ್ರಶ್ನೆ ಶುರುವಾಗಿದೆ.
ಶಿಂಧೆ ಪರವಾಗಿ ನಿಲ್ಲುವ ಶಾಸಕರ ನಿಖರ ಸಂಖ್ಯೆ ಇನ್ನೂ ಅಸ್ಪಷ್ಟವಾಗಿಯೇ ಉಳಿದಿದೆ, ರಾಜಕೀಯ ನಾಯಕರು ವಿಭಿನ್ನ ಸಂಖ್ಯೆಗಳನ್ನು ಮುಂದಿಡುತ್ತಿದ್ದು, ಸರ್ಕಾರ ಉರುಳಿಸಲು ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿದೆಯಾ ಎನ್ನುವ ಅನುಮಾನ ರಾಜಕೀಯ ವಲಯದಲ್ಲಿ ಮೂಡಿದೆ.
Breaking News: ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ಶಿಂಧೆಗೆ ಕೊಕ್
ಹಲವು ಮೂಲಗಳ ಪ್ರಕಾರ ಪ್ರಸ್ತುತ 25 ರಿಂದ 30 ಶಾಸಕರು ಸೂರತ್ ರೆಸಾರ್ಟ್ನಲ್ಲಿ ತಂಗಿದ್ದಾರೆ. ಇವರೆಲ್ಲ ಶಿವಸೇನಾ ತೊರೆದು ಬಿಜೆಪಿಗೆ ಸೇರಲಿದ್ದಾರೆ ಎನ್ನುವ ಗಾಳಿಸುದ್ದಿಯೊಂದು ಹರಿದಾಡುತ್ತಿದೆ. ಆದರೆ ಬಿಜೆಪಿ ಕೂಡ ಈ ಬಗ್ಗೆ ಎಲ್ಲೂ ಗುಟ್ಟು ಬಿಟ್ಟುಕೊಟ್ಟಿಲ್ಲ.
ಆದರೆ ಶಿವನೇಸೆ ಸಂಸದ ಸಂಜಯ್ ರಾವುತ್ ಪ್ರಕಾರ, "ಸುಮಾರು 14-15 ಶಾಸಕರು ಸೂರತ್ನಲ್ಲಿದ್ದಾರೆ ಮತ್ತು ಅವರಲ್ಲಿ ಕೆಲವರು ಹಿಂತಿರುಗತ್ತಿದ್ದಾರೆ, ನಾವು ಅವರಿಗಾಗಿ ಕಾಯುತ್ತಿದ್ದೇವೆ. ಸದ್ಯಕ್ಕೆ ನಮಗೆ ಯಾವುದೇ ಯೋಜನೆಗಳಿಲ್ಲ. ನಾವು ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ. ಬಿಜೆಪಿ ಏನು ಬೇಕಾದರೂ ಮಾಡಲಿ" ಎಂದು ಹೇಳಿಕೆ ನೀಡಿದ್ದಾರೆ.
ಬಹುಮತ ಕಳೆದುಕೊಂಡಿದೆ ಎಂದ ಬಿಜೆಪಿ
ಬಿಜೆಪಿಯ ಚಂದ್ರಕಾಂತ ಪಾಟೀಲ ಮಾತನಾಡಿ, "ರಾಜ್ಯಸಭೆ ಮತ್ತು ಎಂಎಲ್ಸಿ ಚುನಾವಣೆಗಳಿಗೆ ಬಿಜೆಪಿಗೆ ಸ್ವತಂತ್ರ ಮತ್ತು ಸಣ್ಣ ರಾಜಕೀಯ ಪಕ್ಷಗಳಿಂದ ಬೆಂಬಲ ಸಿಕ್ಕಿತು. ಮಾಹಿತಿಯ ಪ್ರಕಾರ, ಏಕನಾಥ್ ಶಿಂಧೆ ಮತ್ತು 35 ಶಾಸಕರು ಹೋಗಿದ್ದಾರೆ. ಇದರರ್ಥ ತಾಂತ್ರಿಕವಾಗಿ ರಾಜ್ಯ ಸರ್ಕಾರ ಅಲ್ಪಸಂಖ್ಯಾತವಾಗಿದೆ. ಆದರೆ, ಪ್ರಾಯೋಗಿಕವಾಗಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ," ಎಂದು ಬಿಜೆಪಿಯ ಚಂದ್ರಕಾಂತ ಪಾಟೀಲ ಹೇಳಿದರು.
ಮಹಾರಾಷ್ಟ್ರ ಎಂಎಲ್ಸಿ ಚುನಾವಣೆ: ಅಲುಗಾಡಿದ ಠಾಕ್ರೆ ಸರ್ಕಾರ
18 ಶಾಸಕರು ಮಾತ್ರ ಸಭೆಗೆ ಹಾಜರು
ಶಿವಸೇನೆ ಮುಖ್ಯಸ್ಥ ಮಂಗಳವಾರ ಮಧ್ಯಾಹ್ನ ತುರ್ತು ಸಭೆ ಕರೆದಿದ್ದರು. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸದಲ್ಲಿ ಬಹುಮತದ ಸಂಭವನೀಯ ನಷ್ಟದ ಬಗ್ಗೆ ಚರ್ಚೆ ನಡೆಸಲಾಗಿದೆ. ರಾಜ್ಯದಲ್ಲಿ ಶಿವಸೇನೆಗೆ ಒಟ್ಟು 55 ಶಾಸಕರನ್ನು ಹೊಂದಿದೆ. ಆದರೆ ಸಭೆಗೆ ಕೇವಲ 18 ಶಾಸಕರು ಮಾತ್ರ ಹಾಜರಾಗಿದ್ದರು. ಇದು ಶಿವಸೇನೆಗೆ ತಲೆನೋವಾಗಿ ಪರಿಣಮಿಸಿದೆ.
ಬಿಜೆಪಿ ನಾಯಕರಿಂದ ಶಿಂಧೆ ಭೇಟಿ ಸಾಧ್ಯತೆ
ನಾಪತ್ತೆಯಾಗಿರುವ ಶಾಸಕರು ಪಕ್ಷಾಂತರಕ್ಕೆ ನಿರ್ಧರಿಸಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಇತರ ಪಕ್ಷದ ನಾಯಕರು ಸೂರತ್ನತ್ತ ಸಾಗಿದ್ದಾರೆ. ಸೇನಾ ಶಾಸಕಿ ಲತಾ ಸೋನಾವಾನೆ ದೆಹಲಿಯಿಂದ ಸೂರತ್ಗೆ ತೆರಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಏತನ್ಮಧ್ಯೆ, ಬಿಜೆಪಿಯ ಉನ್ನತ ನಾಯಕರು ಶೀಘ್ರದಲ್ಲೇ ಸೂರತ್ನಲ್ಲಿ ಶಿಂಧೆ ಅವರನ್ನು ಭೇಟಿಯಾಗಬಹುದು ಎಂದು ಹೇಳಲಾಗಿದೆ.
ಮಹಾ ಸರ್ಕಾರದ ಮ್ಯಾಜಿಕ್ ನಂಬರ್
288 ಸ್ಥಾನಗಳ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮ್ಯಾಜಿಕ್ ಸಂಖ್ಯೆ 144 ಅಥವಾ 145 ಆಗಿದೆ. ಪ್ರಸ್ತುತ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು 106 ಸ್ಥಾನಗಳನ್ನು ಹೊಂದಿದ್ದರೆ, ಶಿವಸೇನೆ 55 ಸ್ಥಾನಗಳನ್ನು ಹೊಂದಿದೆ (ಒಬ್ಬ ಶಾಸಕರು ನಿಧನರಾಗಿದ್ದಾರೆ). ಕಾಂಗ್ರೆಸ್ 44 ಸ್ಥಾನಗಳನ್ನು ಹೊಂದಿದ್ದರೆ, ಎನ್ಸಿಪಿ 54 ಸ್ಥಾನಗಳನ್ನು ಹೊಂದಿದೆ (ಇಬ್ಬರು ಶಾಸಕರು ನಿಧನರಾಗಿದ್ದಾರೆ). ಅಲ್ಲಿ ಸುಮಾರು 18-20 ಸ್ವತಂತ್ರರು ಅಥವಾ ಸಣ್ಣ ಪಕ್ಷಗಳಿಗೆ ಸೇರಿದ ಶಾಸಕರು ಇದ್ದಾರೆ.
ಮಹಾ ವಿಕಾಸ್ ಅಘಾಡಿ (MVA) ಗುಂಪು 153 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತವನ್ನು ಹೊಂದಿದೆ. ಬಂಡಾಯ ಶಾಸಕರು ಈಗ ಸರ್ಕಾರದ ಬುಡವನ್ನೇ ಅಲುಗಾಡಿಸಿದ್ದಾರೆ. ಬಿಜೆಪಿಯು ಸ್ವತಂತ್ರ ಮತ್ತು ಸಣ್ಣ ಪಕ್ಷಗಳ ಬೆಂಬಲವನ್ನು ಪಡೆದರೆ, ಶಿಂಧೆ ಜೊತೆಗೆ ಅಜ್ಞಾತವಾಗಿರುವ ಎಲ್ಲಾ ಬಂಡಾಯ ಶಾಸಕರು ಬಿಜೆಪಿಗೆ ಬಾಹ್ಯ ಬೆಂಬಲ ನೀಡಿದರೆ ಸರ್ಕಾರ ರಚನೆಗೆ ಹಕ್ಕು ಸಾಧಿಸಲು ಸಾಧ್ಯವಾಗುತ್ತದೆ.