ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ: ನವೆಂಬರ್ ಅಂತ್ಯದವರೆಗೆ ಮುಂದುವರಿಕೆ
ನವದೆಹಲಿ, ಜೂನ್ 23: ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಲ್ಲಿ ವಿತರಿಸಲಾಗುತ್ತಿರುವ ಉಚಿತ ಪಡಿತರವನ್ನು ನವೆಂಬರ್ ಅಂತ್ಯದವರೆಗೆ ವಿಸ್ತರಿಸಲು ಕೇಂದ್ರ ಸಂಪುಟ ಅನುಮತಿ ನೀಡಿದೆ.
ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆಯಲ್ಲಿ ಬಡ ಪಿಡಿಎಸ್ (ಸಾರ್ವಜನಿಕ ವಿತರಣಾ ವ್ಯವಸ್ಥೆ) ಫಲಾನುಭವಿಗಳು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳನ್ನು ಕಡಿಮೆ ಮಾಡುವ ಸಲುವಾಗಿ ಈ ವರ್ಷದ ಜೂನ್ವರೆಗೆ ಎರಡು ತಿಂಗಳ ಕಾಲ ಪಿಎಂಜಿಕೆ ಯೋಜನೆಯನ್ನು ಪುನಃ ಪರಿಚಯಿಸಲಾಗಿತ್ತು. ಆದರೆ ಇದೀಗ ಈ ಯೋಜನೆಯನ್ನು ಮತ್ತೆ 5 ತಿಂಗಳುಗಳಿಗೆ ವಿಸ್ತರಿಸಲಾಗಿದೆ.
'ಪಡಿತರ ಚೀಟಿ ಇಲ್ಲದೆಯೇ ವಲಸೆ ಕಾರ್ಮಿಕರಿಗೆ ಆಹಾರ ದೊರೆಯುವುದು ಹೇಗೆ?' - ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ
ಸರ್ಕಾರದ ಈ ನಿರ್ಣಯದಿಂದ ದೇಶದ ಸುಮಾರು 80 ಕೋಟಿ ಫಲಾನುಭವಿಗಳು ಇನ್ನೂ 5 ತಿಂಗಳು ಹೆಚ್ಚುವರಿ ಅಂದರೆ ನವೆಂಬರ್ ಅಂತ್ಯದವರೆಗೂ ಉಚಿತ ಪಡಿತರ ಪಡೆಯಬಹುದಾಗಿದೆ.
ಈ ಕುರಿತಂತೆ ಬುಧವಾರ ನಡೆದ ಕೇಂದ್ರ ಸಂಪುಟಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ (PMGKAY) ಅಡಿಯಲ್ಲಿ ವಿತರಿಸಲಾಗುವ ಉಚಿತ ಪಡಿತರವನ್ನು ನವೆಂಬರ್ ಅಂತ್ಯದವರೆಗೂ ವಿಸ್ತರಣೆ ಮಾಡಲು ಸಂಪುಟ ಅನುಮೋದನೆ ನೀಡಿದೆ.
ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸುತ್ತಿದ್ದು, ಇದರಲ್ಲಿ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಯಾವುದೇ ಕೊಡುಗೆ ಇಲ್ಲ. ಆಹಾರ ಧಾನ್ಯಗಳ ಸಾಗಾಣಿಕೆ, ನಿರ್ವಹಣೆ ಮತ್ತು ಇಪಿಎಸ್ ಡೀಲರ್ ಗಳಿಗೆ ಅಂಚು ನೆರವು ನೀಡುವ ಉದ್ದೇಶದಿಂದ ಸರ್ಕಾರಕ್ಕೆ ಹೆಚ್ಚುವರಿಯಾಗಿ 3,234,85 ಕೋಟಿ ರೂಪಾಯಿ ಹೊರೆ ಬೀಳಲಿದೆ. ಇದರಿಂದಾಗಿ ಕೇಂದ್ರ ಸರ್ಕಾರ ಒಟ್ಟು ಅಂದಾಜು 62,266.44 ಕೋಟಿ ರೂಪಾಯಿ ಭರಿಸಲಿದೆ.
ಗೋಧಿ/ ಅಕ್ಕಿ ಯಾವ ಆಹಾರ ಧಾನ್ಯ ಮಂಜೂರು ಮಾಡಬೇಕು ಎನ್ನುವುದನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತೀರ್ಮಾನಿಸಲಿದೆ.
ಇದಲ್ಲದೇ ಹಂತ 3 ಮತ್ತು ಹಂತ 4 ರೆಡಿ ಆಹಾರ ಧಾನ್ಯ ಎತ್ತುವಳಿ/ ಪೂರೈಕೆ, ಕಾರ್ಯಾಚರಣೆಯ ಅಗತ್ಯಗಳು, ಮುಂಗಾರು, ಹಿಮಪಾತದಂತಹ ಪ್ರತಿಕೂಲ ಹವಾಮಾನ ಪರಿಸ್ಥಿತಿ, ಕೋವಿಡ್ ಪ್ರೇರಿತ ನಿರ್ಬಂಧಗಳು, ಪೂರೈಕೆ ಸರಪಳಿ ಕುರಿತು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಗತ್ಯಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಲಿದೆ.
ಒಟ್ಟು ಅಂದಾಜು 204 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಪೂರೈಸಲಾಗುತ್ತಿದೆ. ಕೊರೊನಾ ಸೋಂಕಿನಿಂದಾಗಿ ಉಂಟಾಗುವ ಆರ್ಥಿಕ ಅಡ್ಡಿಗಳಿಂದಾಗಿ ಬಡವರು ಎದುರಿಸುತ್ತಿರುವ ಕಷ್ಟಗಳನ್ನು ನಿವಾರಿಸಲು ಹೆಚ್ಚುವರಿ ಆಹಾರ ಧಾನ್ಯ ಮಂಜೂರು ಮಾಡಲಾಗಿದೆ.
ಯಾವುದೇ ಬಡ ಕುಟುಂಬ ಆಹಾರ ಧಾನ್ಯಗಳು ಲಭ್ಯವಿಲ್ಲದ ಕಾರಣ ತೊಂದರೆ ಎದುರಿಸಬಾರದು ಎನ್ನುವ ಕಾರಣದಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಈ ಹಿಂದೆ ಜೂನ್ 7ರಂದು ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, 'ಪ್ರತಿಯೊಬ್ಬ ಬಡ ನಾಗರಿಕರೊಂದಿಗೆ ಸರ್ಕಾರವೂ ಜೊತೆಗಿರುತ್ತದೆ. ನವೆಂಬರ್ವರೆಗೆ ಎಲ್ಲ 80 ಕೋಟಿ ಮಂದಿಗೆ, ಉಚಿತವಾಗಿ ಧಾನ್ಯ ವಿತರಿಸಲಾಗುತ್ತದೆ. ಈ ಯೋಜನೆಯು ದೀಪಾವಳಿವರೆಗೂ ಮುಂದುವರಿಯಲಿದೆ ಎಂದು ಹೇಳಿದ್ದರು.