ಪೌರತ್ವ ಮಸೂದೆ ಪಾಸ್: ಅಮಿತ್ ಶಾ ಮಂಡಿಸಿದ ಈ 'ಐದು' ಮಾತಿಗೆ ಭಾರೀ ಕರತಾಡನ
ನವದೆಹಲಿ, ಡಿ 12: ಭಾರೀ ಪರವಿರೋಧ, ಪ್ರತಿರೋಧಕ್ಕೆ ಕಾರಣವಾಗಿದ್ದ ಪೌರತ್ವ ತಿದ್ದುಪಡಿ ಮಸೂದೆ -2019, ರಾಜ್ಯಸಭೆಯಲ್ಲೂ ಪಾಸ್ ಆಗಿದೆ. ಕೆಲವು ದಿನಗಳ ಹಿಂದೆ, ಲೋಕಸಭೆಯಲ್ಲೂ ಈ ಮಸೂದೆ ಆಂಗೀಕಾರ ಪಡೆದುಕೊಂಡಿತ್ತು.
ಆ ಮೂಲಕ, ಜಮ್ಮು, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದತಿಯ ನಂತರ, ಮೋದಿ ಸರಕಾರ ತೆಗೆದುಕೊಂಡ ಮತ್ತೊಂದು ಮಹತ್ವದ ನಿರ್ಣಯ ಇದಾಗಿದೆ. 117 ರಾಜ್ಯಸಭಾ ಸದಸ್ಯರು ಮಸೂದೆಯ ಪರವಾಗಿ, 92 ಸಂಸದರು ವಿರುದ್ದವಾಗಿ ಮತ ಚಲಾಯಿಸಿದರು.
"ಇದೊಂದು ಐತಿಹಾಸಿಕ ಕ್ಷಣ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರೆ, "ಇದು ದೇಶದ ಇತಿಹಾಸದ ಕರಾಳ ದಿನ" ಎಂದು ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
Breaking: ಪೌರತ್ವ ಮಸೂದೆ ರಾಜ್ಯಸಭೆಯಲ್ಲೂ ಅಂಗೀಕಾರ: ಬಿದ್ದ ಮತಗಳೆಷ್ಟು?
'ಮಸೂದೆಯ ಅವಶ್ಯಕತೆ ಯಾಕೆ' ಎಂದು ರಾಜ್ಯಸಭೆಯಲ್ಲಿ ಸವಿಸ್ತಾರವಾಗಿ ವಿವರಿಸಿದ, ಕೇಂದ್ರ ಗೃಹಸಚಿವ ಅಮಿತ್ ಶಾ, ವಿರೋಧ ಪಕ್ಷವಾದ ಕಾಂಗ್ರೆಸ್ ವಿರುದ್ದ ಟೀಕಾಪ್ರಹಾರ ನಡೆಸಿದ್ದಾರೆ. ಚರ್ಚೆಗೆ ಉತ್ತರಿಸುತ್ತಾ, ಶಾ, ನೀಡಿದ ಈ ಐದು ಹೇಳಿಕೆಗೆ, ಸ್ವಪಕ್ಷೀಯರಿಂದ, ಭಾರೀ ಕರತಾಡನ ವ್ಯಕ್ತವಾಯಿತು.
ಶಿವಸೇನೆಯನ್ನು ಮಾತಿನಲ್ಲೇ ಚುಚ್ಚಿದ ಅಮಿತ್ ಶಾ
"ಅಧಿಕಾರಕ್ಕಾಗಿ ಜನ ಯಾವರೀತಿ ಬದಲಾಗುತ್ತಾರೆ ಎನ್ನುವುದು ನನಗೆ ಆಶ್ಚರ್ಯ ತಂದಿದೆ. ಒಂದೇ ರಾತ್ರಿಯಲ್ಲಿ ತಮ್ಮ ಬಣ್ಣವನ್ನು ಬದಲಾಯಿಸುತ್ತಾರೆ. ಲೋಕಸಭೆಯಲ್ಲಿ ಮಸೂದೆಗೆ ಒಪ್ಪಿಗೆ ನೀಡುವವರು, ರಾಜ್ಯಸಭೆಯಲ್ಲಿ ಅದಕ್ಕೆ ವಿರೋಧಿಸುತ್ತಾರೆ" ಎಂದು ಅಮಿತ್ ಶಾ, ಶಿವಸೇನೆಗೆ ಚಾಟಿ ಬೀಸಿದ್ದಾರೆ. (ಫೈಲ್ ಫೋಟೋ)
ದೇಶದ ವಿಭಜನೆ, ಧರ್ಮದ ಆಧಾರದಲ್ಲಿ
"ಈ ದೇಶದ ವಿಭಜನೆ, ಧರ್ಮದ ಆಧಾರದಲ್ಲಿ ನಡೆಯದಿದ್ದರೆ, ನಾವು ಈ ಮಸೂದೆಯನ್ನು ತರುತ್ತಿರಲಿಲ್ಲ. ಈ ಮಸೂದೆಯ ಬಗ್ಗೆ ವ್ಯಂಗ್ಯಮಾಡುವುದು, ಬಹಳ ಸುಲಭ. ಆದರೆ, ನಿಮ್ಮ ವ್ಯಂಗ್ಯವನ್ನು ದೇಶದ ಕೋಟ್ಯಾಂತರ ಜನ ನೋಡುತ್ತಿದ್ದಾರೆ ಎನ್ನುವ ಅರಿವು ನಿಮಗಿರಲಿ" ಎಂದು ಅಮಿತ್ ಶಾ, ವಿರೋಧ ಪಕ್ಷಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಪೌರತ್ವ ತಿದ್ದುಪಡಿ ಮಸೂದೆ ಪಾಸ್; ಯಾರು, ಏನು ಹೇಳಿದರು?
ಈಗ ಯಾವ ಲೋಕಸಭಾ ಚುನಾವಣೆಯಿದೆ
"ವೋಟ್ ಬ್ಯಾಂಕಿಗಾಗಿ ಬಿಜೆಪಿ ಈ ಮಸೂದೆಯನ್ನು ಮಂಡಿಸುತ್ತಿದೆ ಎಂದು ಕೆಲವರು ಆಪಾದನೆ ಮಾಡಿದ್ದಾರೆ. ಈಗ ಯಾವ ಲೋಕಸಭಾ ಚುನಾವಣೆಯಿದೆ. ಇನ್ನು, ನಾಲ್ಕುವರೆ ವರ್ಷದ ನಂತರ ಚುನಾವಣೆಯಿರುವುದು. ಮೋದಿ ಸರಕಾರ ಇಲ್ಲಿ ಬರೀ ಸರಕಾರ ನಡೆಸಲು ಇಲ್ಲಿಲ್ಲ, ಕೆಲಸ ಮಾಡಲು ಇದೆ" ಎಂದು ಅಮಿತ್ ಶಾ ಹೇಳಿದರು.
ನಿಮ್ಮ ಆತ್ಮವನ್ನು ಒಮ್ಮೆ ನೀವು ಪ್ರಶ್ನಿಸಿಕೊಳ್ಳಿ
"ಮಸೂದೆ ವೋಟಿಗೆ ಹೋಗುವ ಮುನ್ನ, ನಿಮ್ಮಲ್ಲಿ ನನ್ನ ಒಂದು ಪ್ರಾರ್ಥನೆ. ಇಂದು ರಾತ್ರಿ, ಕತ್ತಲಲ್ಲಿ, ನಿಮ್ಮ ಆತ್ಮವನ್ನು ಒಮ್ಮೆ ನೀವು ಪ್ರಶ್ನಿಸಿಕೊಳ್ಳಿ. ಕಾಂಗ್ರೆಸ್ ಸರಕಾರದಲ್ಲಿ ವಿಭಜನೆಯಾಗದಿದ್ದರೆ, ಐವತ್ತು ವರ್ಷದ ಹಿಂದೆ ಈ ಮಸೂದೆ ಬಂದಿದ್ದರೆ, ಪರಿಸ್ಥಿತಿ ಇಷ್ಟು ವಿಕೋಪಕ್ಕೆ ಹೋಗುತ್ತಿರಲಿಲ್ಲ. ಜೊತೆಗೆ, ನಾವಿಂದು ಮಸೂದೆ ಮಂಡಿಸುವ ಅವಶ್ಯಕತೆ ಬರುತ್ತಿತ್ತೇ" ಎಂದು, ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದ್ದಾರೆ.
ಬಿಜೆಪಿಯ ಸಿದ್ದಾಂತವಲ್ಲ, ಅಮಿತ್ ಶಾ ಗುಡುಗು
"ದೇಶದ ವಿಭಜನೆಯ ನಂತರ ಬಂದ ಸರಕಾರ, ಆಗಿರುವ ತಪ್ಪನ್ನು ಸರಿಪಡಿಸಿದ್ದರೆ, ಈ ಮಸೂದೆ ಮಂಡನೆ ಮಾಡುವ ಅವಶ್ಯಕತೆಯಿರಲಿಲ್ಲ. ಈ ಮಸೂದೆಯಿಂದ ವಿವಾದ ಎದ್ದೇಳುತ್ತದೆ ಎಂದು ನಮಗೆ ತಿಳಿದಿದೆ. ಬೇರೆ ಸರಕಾರದ ರೀತಿಯಲ್ಲಿ ಐದು ವರ್ಷದ ಜನಾದೇಶವನ್ನು ನಾವು ಅನುಭವಿಸಬಹುದಿತ್ತು. ಆದರೆ, ಅದು ಬಿಜೆಪಿಯ ಸಿದ್ದಾಂತವಲ್ಲ" ಎಂದು, ಅಮಿತ್ ಶಾ ಗುಡುಗಿದ್ದಾರೆ.