ಸಿಎಎ ಕುರಿತು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಹೇಳಿದ್ದೇನು?
ನವದೆಹಲಿ, ಜನವರಿ 14: ಭಾರತದ ನೂತನ ಪೌರತ್ವ ತಿದ್ದುಪಡಿ ಕಾಯ್ದೆಯು ಕೆಟ್ಟದ್ದು ಮತ್ತು ದುಃಖಕರವಾಗಿದೆ ಎಂದು ಮೈಕ್ರೋಸಾಫ್ಟ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯ ನಾದೆಲ್ಲಾ ಪ್ರತಿಕ್ರಿಯಿಸಿದ್ದಾರೆ.
ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ದೇಶದಾದ್ಯಂತ ವ್ಯಾಪಕ ಚರ್ಚೆಗೆ ಒಳಗಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ಟೆಕ್ ಲೋಕದ ದಿಗ್ಗಜರ ಮೊದಲ ಪ್ರತಿಕ್ರಿಯೆ ಇದಾಗಿದೆ.
ನಾದೆಲ್ಲಾ ಅಭಿಪ್ರಾಯಕ್ಕೆ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ನಾದೆಲ್ಲಾ ಈಗ ಅಮೆರಿಕದ ವಲಸಿಗನಾಗಿರುವುದರಿಂದ ಈ ರೀತಿ ಹೇಳಿದ್ದಾರೆ ಎಂದು ಕೆಲವರು ಟೀಕಿಸಿದ್ದಾರೆ. ಇನ್ನು ಅನೇಕರು, ಅವರು ವಲಸಿಗರ ಕುರಿತು ಹೇಳಿದ್ದಾರೆಯೇ ವಿನಾ, ಅಕ್ರಮ ವಲಸಿಗರ ಬಗ್ಗೆ ಅಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಸತ್ಯ ನಾದೆಲ್ಲಾ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ ಮೈಕ್ರೋಸಾಫ್ಟ್ನ ಭಾರತದ ಟ್ವಿಟ್ಟರ್ ಖಾತೆಯಲ್ಲಿ ನಾದೆಲ್ಲಾ ಅವರ ಮತ್ತೊಂದು ಹೇಳಿಕೆಯನ್ನು ಹಂಚಿಕೊಳ್ಳಲಾಗಿದೆ. ಅದರಲ್ಲಿ ನಾದೆಲ್ಲಾ ಅಭಿಪ್ರಾಯವನ್ನು ವಿಸ್ತರಿಸಿ ಬರೆಯಲಾಗಿದೆ.
ಸತ್ಯ ನಾದೆಲ್ಲಾ ಉತ್ತರ
ಸಿಎಎ ಕುರಿತು ಭಾರತದಲ್ಲಿ ಉದ್ಭವವಾಗಿರುವ ವಿವಾದಕ್ಕೆ ಸಂಬಂಧಿಸಿದಂತೆ ಬಜ್ಫೀಡ್ ಸಂಪಾದಕ ಬೆನ್ ಸ್ಮಿತ್ ಅವರ ಪ್ರಶ್ನೆಗೆ ಸತ್ಯ ನಾದೆಲ್ಲಾ ಈ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಬೆನ್ ಸ್ಮಿತ್, 'ಸಿಎಎ ಕುರಿತು ಸತ್ಯ ನಾದೆಲ್ಲಾ. ಅವರು ಹೇಳುತ್ತಾರೆ, ಏನಾಗುತ್ತಿದೆಯೋ ಅದು ಖೇದನೀಯ. ಅದು ಕೆಟ್ಟದ್ದು. ಬಾಂಗ್ಲಾದೇಶದಿಂದ ಭಾರತಕ್ಕೆ ಬಂದ ವಲಸಿಗರು ಭಾರತದಲ್ಲಿ ಸಾಧನೆ ಮಾಡುವುದು ಅಥವಾ ಇನ್ಫೋಸಿಸ್ನ ಮುಂದಿನ ಸಿಇಓ ಆಗುವುದನ್ನು ನೋಡಲು ಬಯಸುತ್ತೇನೆ' ಎಂದು ಹೇಳಿದ್ದಾರೆ.
ಸಿಎಎಗೆ ವಿರೋಧ: ಬಿಜೆಪಿ ತೊರೆದ ಅಲ್ಪಸಂಖ್ಯಾತ ಘಟಕದ ಸದಸ್ಯರು
ಅಸ್ಪಷ್ಟವಾಗಿರುವ ಹೇಳಿಕೆ
ಅವರು ಸಿಎಎಯನ್ನು ಕೆಟ್ಟದ್ದು ಮತ್ತು ವಿಷಾದನೀಯ ಸಂಗತಿ ಎಂದು ಕರೆದರೋ ಅಥವಾ ಅದರ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಹಾಗೆ ಪ್ರತಿಕ್ರಿಯಸಿದ್ದಾರೆಯೋ ಎಂಬುದು ಸ್ಪಷ್ಟವಾಗಿಲ್ಲ. ಸ್ಮಿತ್ ಅವರ ಟ್ವೀಟ್ ಮೂಲಕವಷ್ಟೇ ಈ ಮಾಹಿತಿ ಸಿಕ್ಕಿದ್ದು, ಅದರ ಹಿನ್ನೆಲೆ ಮತ್ತು ಇತರೆ ವಿವರಗಳ ಮಾಹಿತಿ ಇಲ್ಲ. ಆದರೆ ವಲಸಿಗರಲ್ಲಿಯೂ ಪ್ರತಿಭೆ ಇರುತ್ತದೆ. ಅವರಿಗೆ ಸೂಕ್ತ ಅವಕಾಶ ಸಿಗಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸಿಎಎ; ಯುಪಿಯಲ್ಲಿ 40 ಸಾವಿರ ಹಿಂದೂ ವಲಸಿಗರು
ಗಡಿಯೊಳಗೆ ಚರ್ಚೆ ನಡೆಯುತ್ತವೆ
'ಪ್ರತಿ ದೇಶವೂ ತನ್ನ ಗಡಿಯನ್ನು ವ್ಯಾಖ್ಯಾನಿಸಲೇಬೇಕು, ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸಬೇಕು ಮತ್ತು ಅದಕ್ಕೆ ಅನುಗುಣವಾಗಿ ವಲಸೆ ನೀತಿಯನ್ನು ಸಿದ್ಧಪಡಿಸಬೇಕು. ಪ್ರಜಾಪ್ರಭುತ್ವದಲ್ಲಿ ಈ ಗಡಿಯೊಳಗೆ ಜನರು ಮತ್ತು ಅವರ ಸರ್ಕಾರಗಳು ಚರ್ಚಿಸುತ್ತವೆ ಮತ್ತು ವ್ಯಾಖ್ಯಾನಿಸುತ್ತವೆ' ಎಂದು ಸತ್ಯ ಹೇಳಿಕೆಯನ್ನು ಹಂಚಿಕೊಳ್ಳಲಾಗಿದೆ.
ವಲಸಿಗನೊಬ್ಬ ಸ್ಟಾರ್ಟ್ಅಪ್ ಆರಂಭಿಸಬೇಕು
'ನಾನು ನನ್ನ ಭಾರತದ ಪರಂಪರೆಯಿಂದ ರೂಪುಗೊಂಡವನು. ಭಾರತದ ಬಹುಸಂಸ್ಕೃತಿಯೊಳಗೆ ಬೆಳೆದವನು. ಮತ್ತು ನನ್ನ ವಲಸೆ ಅನುಭವ ಇರುವುದು ಅಮೆರಿಕದಲ್ಲಿ. ವಲಸಿಗನೊಬ್ಬ ಭಾರತದಲ್ಲಿ ಸಮೃದ್ಧಿಯ ನವೋದ್ಯಮವನ್ನು ಸ್ಥಾಪಿಸಬೇಕು ಅಥವಾ ಭಾರತೀಯ ಸಮಾಜ ಮತ್ತು ಆರ್ಥಿಕತೆಗೆ ಬಹುದೊಡ್ಡ ಪ್ರಮಾಣದಲ್ಲಿ ಪ್ರಯೋಜನವಾಗುವಂತೆ ಬಹುರಾಷ್ಟ್ರೀಯ ಸಂಸ್ಥೆಯೊಂದನ್ನು ನಡೆಸುವಂತಾಗಬೇಕು ಎಂಬ ಬಯಕೆ ಹೊಂದಬೇಕು ಎನ್ನುವುದು ನನ್ನ ಆಶಯವಾಗಿದೆ' ಎಂದು ವಿವರಣೆ ನೀಡಿದ್ದಾರೆ.