ಮಧ್ಯ ಪ್ರದೇಶ, ಒಡಿಶಾ ಉಪಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಮುಖಭಂಗ
ಭೋಪಾಲ್/ಭುವನೇಶ್ವರ, ಮಾರ್ಚ್ 1: ಮಧ್ಯ ಪ್ರದೇಶದ 2 ಮತ್ತು ಒಡಿಶಾದ 1 ವಿಧಾನಸಭೆ ಕ್ಷೇತ್ರದ ಮತಎಣಿಕೆ ಬುಧವಾರ ಪೂರ್ಣಗೊಂಡಿದ್ದು ಕಾಂಗ್ರೆಸ್ 2 ಮತ್ತು ಬಿಜೆಡಿ ಒಂದು ಸ್ಥಾನವನ್ನು ಗೆದ್ದುಕೊಂಡಿದೆ. ಮೂರರಲ್ಲಿ ಒಂದೂ ಕ್ಷೇತ್ರವನ್ನು ಗೆಲ್ಲಲಾಗದೆ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ.
ಮಧ್ಯ ಪ್ರದೇಶದ ಮುಂಗೌಲಿಯಲ್ಲಿ ಕಾಂಗ್ರೆಸ್ ನ ಬ್ರಜೇಂದ್ರ ಸಿಂಗ್ ಯಾದವ್ ಬಿಜೆಪಿಯ ಬೈಸಹಾಬ್ ಯಾದವ್ ರನ್ನು 2,124 ಮತಗಳಿಂದ ಸೋಲಿಸಿದರೆ, ಕೊಲಾರಸ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಹೇಂದ್ರ ಸಿಂಗ್ ಯಾದವ್ ಬಿಜೆಪಿಯ ದೇವೇಂದ್ರ ಸಿಂಗ್ ರನ್ನು 8,083 ಮತಗಳಿಂದ ಸೋಲಿಸಿದ್ದಾರೆ.
ಈ ಹಿಂದೆ ಈ ಎರಡೂ ಕ್ಷೇತ್ರಗಳು ಕಾಂಗ್ರೆಸ್ ತೆಕ್ಕೆಯಲ್ಲೇ ಇದ್ದವು. ಎರಡೂ ಸ್ಥಾನಗಳನ್ನು ತನ್ನಲ್ಲೇ ಉಳಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಆಡಳಿತರೂಢ ಬಿಜೆಪಿಗೆ ತನ್ನ ಸಾಮರ್ಥ್ಯದ ಬಗ್ಗೆ ಎಚ್ಚರಿಕೆ ನೀಡಿದೆ. ರಾಜ್ಯದಲ್ಲಿ ಇದೇ ವರ್ಷದ ಅಂತ್ಯದಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಈಗಾಗಲೇ ಆಡಳಿತ ವಿರೋಧಿ ಅಲೆಯಿಂದ ನಲುಗುತ್ತಿರುವ ಬಿಜೆಪಿಗೆ ಈ ಸೋಲು ಎಚ್ಚರಿಕೆಯ ಗಂಟೆಯಾಗಿದೆ.
ಇನ್ನೊಂದು ಕಡೆ ಒಡಿಶಾದಲ್ಲಿ ಕಾಂಗ್ರೆಸ್ ತನ್ನ ಸ್ಥಾನವನ್ನು ಬಿಜೆಡಿಗೆ ಬಿಟ್ಟುಕೊಟ್ಟಿದೆ. ಬಿಜಾಪುರ್ ಕ್ಷೇತ್ರದಲ್ಲಿ ಆಡಳಿತರೂಢ ಬಿಜು ಜನತಾದಳದ ಅಭ್ಯರ್ಥಿ ರಿತಾ ಸಾಹು ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಪನಿಗ್ರಾಹಿಯನ್ನು 41,933 ಮತಗಳಿಂದ ಸೋಲಿಸಿದ್ದಾರೆ. ಕಾಂಗ್ರೆಸ್ ಇಲ್ಲಿ ಠೇವಣಿ ಕಳೆದುಕೊಂಡಿರುವುದು ವಿಶೇಷ.
ಒಡಿಶಾದಲ್ಲಿ 2019ರ ಆರಂಭದಲ್ಲಿ ಚುನಾವಣೆ ನಡೆಯಲಿದ್ದು ಬಿಜೆಪಿ ಈಗಾಗಲೇ ತನ್ನ ಪ್ರಚಾರವನ್ನು ರಾಜ್ಯದಲ್ಲಿ ಆರಂಭಿಸಿದೆ. ಕಳೆದ 18 ವರ್ಷಗಳಿಂದ ಒಡಿಶಾದಲ್ಲಿ ಭದ್ರವಾಗಿ ನೆಲೆನಿಂತಿರುವ ನವೀನ್ ಪಟ್ನಾಯಕ್ ಸರಕಾರವನ್ನು ಕಿತ್ತೊಗೆಯಲು ಬಿಜೆಪಿ ಪಣತೊಟ್ಟಿದೆ. ಇದರ ಮಧ್ಯೆ ಬಿಜಾಪುರ್ ನಲ್ಲಿ ಸೋತಿದ್ದು ಕೇಸರಿ ಪಕ್ಷಕ್ಕೆ ಮುಜುಗರ ತಂದೊಡ್ಡಿದೆ.