ಉಪಚುನಾವಣೆ: ಬಿಜೆಪಿ ಸೋಲಿಗೆ ಕಾರಣಗಳೇನು?
ನವದೆಹಲಿ, ಸೆ. 16 : ಮೂರು ಲೋಕಸಭಾ ಕ್ಷೇತ್ರ ಸೇರಿದಂತೆ 9 ರಾಜ್ಯಗಳ 32 ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಲೋಕಸಭಾ ಚುನಾವಣೆ ನಂತರ ನೀಡಿದ ದೊಡ್ಡ ಜನಾಭಿಪ್ರಾಯ ಹಳೆಯ ಟ್ರೆಂಡ್ ಬದಲಾಗಿರುವುದನ್ನು ಸ್ಪಷ್ಟವಾಗಿ ತಿಳಿಸಿದೆ. ಬಿಜೆಪಿ ತನ್ನ ಶಕ್ತಿ ಕಳೆದುಕೊಂಡಿದ್ದು ಕಾಂಗ್ರೆಸ್ ಮತ್ತು ಸಮಾಜವಾದಿ ಪಾರ್ಟಿಗಳು ತಮ್ಮ ಹಳೆ ನೆಲೆ ಕಂಡುಕೊಳ್ಳುವತ್ತ ಚಿತ್ತ ಹರಿಸಿದ್ದು ಸ್ಪಷ್ಟವಾಗಿದೆ.
ಕೇವಲ ನರೇಂದ್ರ ಮೋದಿ ಒಬ್ಬರನ್ನೇ ನೆಚ್ಚಿಕೊಂಡರೆ ಮುಂದಿನ ದಿನಗಳಲ್ಲಿ ಆತಂಕ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಮತದಾರ ಪ್ರಭು ಬಿಜೆಪಿ ನಾಯಕರಿಗೆ ರವಾನಿಸಿದ್ದಾನೆ. ಅಲ್ಲದೇ ಸೋತು ಸುಣ್ಣವಾಗಿದ್ದ ಕಾಂಗ್ರೆಸ್ಗೆ ಇದು ಟಾನಿಕ್ ನೀಡಿದೆ.
ನಿರಂತರ ಆರೋಪಗಳಿಂದ ನೊಂದಿದ್ದ ಸಮಾಜವಾದಿ ಪಕ್ಷಕ್ಕೆ ನಾವಿನ್ನೂ ಜನರ ವಿಶ್ವಾಸ ಕಳೆದುಕೊಂಡಿಲ್ಲ ಎಂಬ ಭಾವನೆ ಮೂಡಿದ್ದು ಲೋಕಸಭಾ ಚುನಾವಣೆಯಲ್ಲಿ ಕಳೆದುಕೊಂಡ ಅಸ್ತಿತ್ವ ಹುಡುಕಿಕೊಂಡಂತಾಗಿದೆ.(ಯಾರಿಗೆ ಲಾಭ? ಯಾರಿಗೆ ನಷ್ಟ? ಲೆಕ್ಕಾಚಾರ ಶುರು)
ಒಟ್ಟಿನಲ್ಲಿ ಬಿಜೆಪಿ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. ಲೋಕಸಭಾ ಕ್ಷೇತ್ರಗಳ ಫಲಿತಾಂಶದಲ್ಲಿ ಯಾವ ವ್ಯತ್ಯಾಸಗಳಾಗದಿದ್ದರೂ ಆಡಳಿತರೂಢ ನರೇಂದ್ರ ಮೋದಿ ಸರ್ಕಾರಕ್ಕೆ ಇದು ಹಿನ್ನಡೆ ಎಂದೇ ಹೇಳಬಹುದು.(ಚುನಾವಣಾ ಫಲಿತಾಂಶ 2014: ಪಕ್ಷಗಳ ಬಲಾಬಲ)
ಗುಜರಾತ್, ರಾಜಸ್ಥಾನ, ಪಶ್ಚಿಮ ಬಂಗಾಳ ಸೇರಿದಂತೆ ಈಶಾನ್ಯ ರಾಜ್ಯಗಳ ಫಲಿತಾಂಶವನ್ನು ಒಟ್ಟು ಲೆಕ್ಕ ಹಾಕಿದರೆ ಬಿಜೆಪಿಗೆ 13 ಸ್ಥಾನಗಳ ನಷ್ಟವಾಗಿದೆ. ಸಮಾಜವಾದಿ ಪಾರ್ಟಿ 7 ಮತ್ತು ಕಾಂಗ್ರೆಸ್ 3 ಸ್ಥಾನಗಳ ಲಾಭ ಪಡೆದುಕೊಂಡಿವೆ.
ಉತ್ತರ ಪ್ರದೇಶದಲ್ಲಿ ನಡೆಯದ ಮ್ಯಾಜಿಕ್
ಈ ಬಾರಿ ಅಮಿತ್ ಷಾ ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದರೂ ಉತ್ತರ ಪ್ರದೇಶದಲ್ಲಿ ಬಿಜೆಪಿ ಸಂಪೂರ್ಣ ನೆಲಕಚ್ಚಿದೆ. ಲೋಕಸಭಾ ಸ್ಥಾನವನ್ನೂ ಸೇರಿ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಸೈಕಲ್ ಸವಾರಿ ಮಾಡಿದೆ. ಲೋಕಸಭಾ ಚುನಾವಣೆಯಲ್ಲಿ 80ರಲ್ಲಿ 71 ಸ್ಥಾನ ಗಳಿಸಿದ್ದ ಬಿಜೆಪಿಗೆ ಈ ಬಾರಿ ಕೇವಲ ಮೂರು ಸ್ಥಾನ ಪಡೆಯಲು ಸಾಧ್ಯವಾಗಿದ್ದು ಒಟ್ಟು ಏಳು ಕ್ಷೇತ್ರಗಳ ನಷ್ಟ ಮಾಡಿಕೊಂಡಿದೆ.
ರಾಜಸ್ಥಾನದಲ್ಲಿ ಮುದುಡಿದ ಕಮಲ
26 ಲೋಕಸಭಾ ಕ್ಷೇತ್ರಗಳಲ್ಲಿ 25ನ್ನು ಬುಟ್ಟಿಗೆ ಹಾಕಿಕೊಂಡಿದ್ದ ಕಮಲಕ್ಕೆ ಈ ಬಾರಿ ಜನರು ನಿರಾಸೆ ಮಾಡಿದ್ದಾರೆ. ಒಟ್ಟು ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು 'ಕೈ' ವಶವಾಗಿದೆ. ಇಲ್ಲಿ ಬಿಜೆಪಿ ಒಂದು ಸ್ಥಾನ ಕಳೆದುಕೊಂಡಿದೆ.
ಅದೇ ರಾಗ ಅದೇ ಹಾಡು
ಉತ್ತರ ಪ್ರದೇಶದ ಕಳಪೆ ಸಾಧನೆಗೆ ಬಿಜೆಪಿಯ ಸ್ವಯಂಕೃತ ಅಪರಾಧವೇ ಕಾರಣ. ಲೋಕಸಭಾ ಚುನಾವಣೆಯಲ್ಲಿ ಕಂಡು ಬಂದ ಒಗ್ಗಟ್ಟು, ವಾರಣಾಸಿಯಲ್ಲಿ ಮೋದಿಯೇ ನಿಂತಿದ್ದರಿಂದ ಕಂಡು ಬಂದ ಉತ್ಸಾಹ ಈ ಬಾರಿ ಮರೆಯಾಗಿತ್ತು. ಅಲ್ಲದೇ ಸ್ವಾಮಿ ಆದಿತ್ಯನಾಥ್ ಅಂಥವರ ವಿವಾದಾತ್ಮಕ ಹೇಳಿಕೆ, ಲವ್ ಜೀಹಾದ್ ಕುರಿತ ಬಿಜೆಪಿ ನಿಲುವು ಎಲ್ಲವೂ ಮುಳುವಾಗಿ ಪರಿಣಮಿಸಿತು.
ಸಂಘಟನೆ ಎಲ್ಲಿ ಹೋಯಿತು?
ಪ್ರಧಾನಿಯಾದ ನರೇಂದ್ರ ಮೋದಿ ವಿದೇಶ ಪ್ರವಾಸಗಳಲ್ಲಿ ಮಗ್ನರಾದರು. ಇತ್ತ ಪಕ್ಷದಲ್ಲೂ ಅನೇಕ ಬದಲಾವಣೆಗಳಾಗಿ ಹಿರಿಯ ಬಿಜೆಪಿಗರು ಸ್ಥಾನ ಕಳೆದುಕೊಂಡರು. ಯಾವ ನಾಯಕರು ಒಗ್ಗಟ್ಟು ಪ್ರದರ್ಶಿಸುವ ಮಟ್ಟಕ್ಕೆ ಹೋಗಲಿಲ್ಲ. ಅದು ಉತ್ತರ ಪ್ರದೇಶ, ರಾಜಸ್ಥಾನ ಎಲ್ಲೆಡೆಯೂ ಒಂದೇ ಆಗಿತ್ತು.
ಹೊಡೆತ ನೀಡಿದ ಸ್ಥಳೀಯ ಸಮಸ್ಯೆಗಳು
ಸ್ಥಳೀಯ ಜನರ ಮನಸ್ಥಿತಿ ಮತ್ತು ಸಮಸ್ಯೆಗಳನ್ನು ಅರಿಯುವಲ್ಲಿ ಬಿಜೆಪಿ ನಾಯಕರು ಸಂಪೂರ್ಣ ವಿಫಲರಾದರು. ಆಡಳಿತ ಪಕ್ಷದವರ ಮೇಲೆ ಆರೋಪ ಮಾಡುವುದರಲ್ಲೇ ಕಾಲ ಕಳೆದರೇ ವಿನಃ ಜನರ ಮನಸ್ಥಿತಿ ಅರಿಯಲಿಲ್ಲ. ಪಶ್ಚಿಮ ಬಂಗಾಳದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗೋಜಿಗೂ ಹೋಗದಿರುವುದರ ಪರಿಣಾಮ ಸೋಲು ಕಾಣಬೇಕಾಯಿತು.
ಅತಿಯಾದ ಆತ್ಮವಿಶ್ವಾಸ
ಲೋಕಸಭಾ ಚುನಾವಣೆಯ ಅಭೂತಪೂರ್ವ ಗೆಲುವಿನಿಂದ ಬಿಜೆಪಿ ನಾಯಕರು ಮೈ ಮರೆತಿದ್ದರೆಂದೇ ಹೇಳಬಹುದು. ಎಲ್ಲೇ ಹೋದರೂ ಮೋದಿ ಅಲೆ ಇದೆ ಗೆಲುವು ನಮ್ಮದೇ ಎಂದುಕೊಂಡವರಿಗೆ ಚುನಾವಣೆ ಫಲಿತಾಂಶ ಸ್ಪಷ್ಟ ಸಂದೇಶ ರವಾನಿಸಿದೆ.
ತಳಮಟ್ಟದ ಸಂಘಟನೆಯೇ ಪರಿಹಾರ
ಬಿಜೆಪಿ ಮುಂದಿರುವ ಆಯ್ಕೆ ತಳಮಟ್ಟದ ಸಂಘಟನೆ ಒಂದೇ. ಅಧಿಕಾರದ ಅಮಲನ್ನು ಮರೆತು ಕಾರ್ಯಕರ್ತರನ್ನು, ಜನರನ್ನು ಹತ್ತಿರ ಇಟ್ಟುಕೊಂಡು ಮುಖ್ಯವಾಗಿ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಿದರೆ ಚೇತರಿಕೆ ಸಾಧ್ಯ.
ಕರ್ನಾಟಕದ ಮೇಲೆ ಯಾವ ಪರಿಣಾಮ?
ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದಿದ್ದ ಉಪಚುನಾವಣೆ ಫಲಿತಾಂಶವೇ ಇಲ್ಲಿಯೂ ಕಂಡುಬಂದಂತಿದೆ. ರಾಜ್ಯ ರಾಜಕಾರಣದ ಮೇಲೆ ಗಂಭೀರ ಪರಿಣಾಮ ಬೀರದಿದ್ದರೂ ಬಿಜೆಪಿ ನಾಯಕರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂಬುದನ್ನು ಸೂಚಿಸಿದೆ. ಮುಂದೆ ಎದುರಾಗಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಿಜೆಪಿಗೆ ಅಗ್ನಿ ಪರೀಕ್ಷೆಯಾಗಬಹುದು ಎಂಬುದನ್ನು ಹೇಳಿದೆ.