ಬಿಜೆಪಿಗೆ ಪಾಠ ಕಲಿಸಿದ ಜನರಿಗೆ ಧನ್ಯವಾದ: ಅಖಿಲೇಶ್ ಯಾದವ್
ಲಕ್ನೋ, ಮೇ 31: "ಉಪಚುನಾವಣೆಗಳಲ್ಲಿ ಬಿಜೆಪಿಗೆ ತಕ್ಕ ಉತ್ತರ ನೀಡಿದ ಮತದಾರರಿಗೆ ನಾನು ತುಂಬು ಧನ್ಯವಾದ ಅರ್ಪಿಸುತ್ತೇನೆ" ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಹೇಳಿದ್ದಾರೆ.
"ನಮಗೆ ಮತಚಲಾಯಿಸಿದ ಎಲ್ಲರಿಗೂ ನಾನು ಕೃತಜ್ಞತೆ ಅರ್ಪಿಸುತ್ತೇನೆ. ಇದು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದವರ ಸೋಲು. ಬಿಜೆಪಿಗೆ ಜನರು ಯೋಗ್ಯ ಉತ್ತರ ನೀಡಿದ್ದಾರೆ" ಎಂದು ಅವರು ಪ್ರತಿಕ್ರಿಯೆ ನೀಡಿದರು.
10 ರಾಜ್ಯಗಳಲ್ಲಿ ಲೋಕಸಭೆ, ವಿಧಾನಸಭೆ ಉಪಚುನಾವಣೆ ಫಲಿತಾಂಶ 2018 LIVE
ಉತ್ತರ ಪ್ರದೇಶದ ಕೈರಾನಾ, ಪಂಜಾಬಿನ ಶಹಕೋಟ್, ಪಶ್ಚಿಮ ಬಂಗಾಳದ ಮಹೆಶ್ತಲ, ಉತ್ತರಾಖಂಡದ ಥರಾಲಿ ಸೇರಿದಂತೆ ಒಟ್ಟು 4 ಲೋಕಸಭಾ ಕ್ಷೇತ್ರ 9 ವಿಧಾನಸಭಾ ಕ್ಷೇತ್ರಗಳಲ್ಲಿ ಮೇ 28 ರಂದು ಚುನಾವಣೆ ನಡೆದಿತ್ತು. ಅದರ ಫಲಿತಾಂಶ ಇಂದು ಪ್ರಕಟವಾಗಿದ್ದು, ಮಹಾರಾಷ್ಟ್ರದ ಪಲ್ಘರ್ ಕ್ಷೇತ್ರವೊಂದನ್ನು ಬಿಟ್ಟರೆ ಮಿಕ್ಕೆಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಸೋತಿದೆ.
"ಗೆಲ್ಲುವುದಕ್ಕೆಂದು ಬಿಜೆಪಿ ಯಾವ ಹಾದಿಯನ್ನು ಅನುಸರಿಸಿತ್ತೋ, ಅದೇ ಹಾದಿಯನ್ನು ಬಳಸಿ ನಾವು ಬಿಜೆಪಿಯನ್ನು ಸೋಲಿಸಿದ್ದೇವೆ. ಇದು ಬಿಜೆಪಿಗೆ ಪಾಠ" ಎಂದು ಸಹ ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿದ್ದಾರೆ.
ಬಿಜೆಪಿಯನ್ನು ಸೋಲಿಸುವುದಕ್ಕೆಂದೇ ಹಲವು ವಿರೋಧ ಪಕ್ಷಗಳು ಒಂದಾಗಿದ್ದು ವಿಶೇಷ.