ಮುಂಬೈ-ಅಹಮದಾಬಾದ್ ಬುಲೆಟ್ ರೈಲಿನಿಂದ ಹಲವು ಪರೋಕ್ಷ ಲಾಭಗಳು
ಬೆಂಗಳೂರು, ಸೆಪ್ಟೆಂಬರ್ 11: ಮುಂಬೈ ಮತ್ತು ಅಹಮದಾಬಾದ್ ನಡುವೆ ಸಂಚರಿಸಲಿರುವ ಬಹುನಿರೀಕ್ಷಿತ ಬುಲೆಟ್ ರೈಲು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ಗುರುವಾರ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಶಾಂಘೈ, ಬೀಜಿಂಗ್ ನಡುವೆ ಶೀಘ್ರವೇ ವಿಶ್ವದ ಅತಿ ವೇಗದ ರೈಲು ಸೇವೆ
ಈ ಬುಲೆಟ್ ರೈಲು ಭಾರತದ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲಿದೆ. ಜತೆಗೆ ಭಾರತೀಯ ರೈಲ್ವೇಯ ಅಭಿವೃದ್ಧಿ, ಮೂಲಸೌಕರ್ಯಕ್ಕೆ ಸಂಬಂಧಿಸಿದ ಉದ್ದಿಮೆಗಳ ಬೆಳವಣಿಗೆಗೂ ಇದು ಸಹಾಯಕವಾಗಲಿದೆ.
ಬುಲೆಟ್ ಟ್ರೈನ್ ಯೋಜನೆಗೆ ಗುರುವಾರ ಪ್ರಧಾನಿ ಅಡಿಗಲ್ಲು
ಈ ಬುಲೆಟ್ ರೈಲು ಯೋಜನೆ ಭಾರೀ ಹಣ ಬೇಡುತ್ತದೆ. ಆದರೆ ಈ ತಂತ್ರಜ್ಞಾನದ ಪರಿಣಾಮಗಳು ಬೇರೆ ಕ್ಷೇತ್ರದ ಮೇಲೆಯೂ ಬೀಳುವುದರಿಂದ ಆ ಕ್ಷೇತ್ರಗಳೂ ಅಭಿವೃದ್ಧಿಯಾಗುತ್ತವೆ.
ಸಿಮೆಂಟ್, ಉಕ್ಕು ಉದ್ಯಮಕ್ಕೆ ಉತ್ತೇಜನ
ಉದಾಹರಣೆಗೆ ಈ ರೈಲು ಯೋಜನೆಗೆ ಭಾರೀ ಸಿಮೆಂಟ್ ಮತ್ತು ಉಕ್ಕು ಬೇಕಾಗಿದೆ. ಹೀಗಾಗಿ ಉಕ್ಕು ಮತ್ತು ಸಿಮೆಂಟ್ ಕ್ಷೇತ್ರದಲ್ಲಿ ದೊಡ್ಡಮಟ್ಟಕ್ಕೆ ಬೇಡಿಕೆ ಸೃಷ್ಟಿಯಾಗುತ್ತದೆ. ಇದಲ್ಲದೆ ಇವುಗಳನ್ನು ಸಾಗಣೆ ಮಾಡುವು ಸಾರಿಗೆ ಕ್ಷೇತ್ರದಲ್ಲೂ ವ್ಯವಹಾರ ಕುದುರುತ್ತದೆ.
ಒಂದು ಅಂದಾಜಿನ ಪ್ರಕಾರ 20 ಲಕ್ಷ ಟನ್ ಸಿಮೆಂಟ್ ಮತ್ತು 15 ಲಕ್ಷ ಮೆಟ್ರಿಕ್ ಟನ್ ಉಕ್ಕು ಈ ಯೋಜನೆಗೆ ಬೇಕಾಗಿದೆ.
ಉದ್ಯೋಗ ಸೃಷ್ಟಿ
ಈ ಬುಲೆಟ್ ರೈಲಿನ ಕಾಮಗಾರಿ ವೇಳೆ 20,000 ಜನರಿಗೆ ಉದ್ಯೋಗ ಸಿಗಲಿದೆ. ಒಮ್ಮೆ ರೈಲು ಸೇವೆ ಆರಂಭಗೊಂಡ ನಂತರ 4 ಸಾವಿರ ಜನರು ರೈಲಿನ ನಿರ್ವಹಣೆ ಬೇಕಾಗಿದ್ದು ಅಷ್ಟೂ ಜನರಿಗೆ ಕೆಲಸ ಸಿಗಲಿದೆ. ಇದಲ್ಲದೆ 16,000 ಜನರಿಗೆ ಪರೋಕ್ಷ ಉದ್ಯೋಗ ಸಿಗಲಿದೆ.
ತಂತ್ರಜ್ಞಾನ ಅಭಿವೃದ್ಧಿ
ಉದ್ಯೋಗ ಸೃಷ್ಟಿ ಮಾತ್ರವಲ್ಲದೆ ಬುಲೆಟ್ ರೈಲಿನಿಂದ ಹಲವು ಕ್ಷೇತ್ರಗಳಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನಗಳು ಭಾರತಕ್ಕೆ ಕಾಲಿಡಲಿವೆ. ಟ್ರಾಕ್ ಅಳವಡಿಕೆ, ಸಿಗ್ನಲ್ ಉಪಕರಣಗಳು, ವಿದ್ಯುತ್ ಸರಬರಾಜು, ಸಂವಹನ ತಂತ್ರಜ್ಞಾನಗಳ ಅಳವಡಿಕೆ, ವಿಶ್ವದರ್ಜೆಯ ತಂತ್ರಜ್ಞಾನಗಳ ಬಳಕೆ ಭಾರತದಲ್ಲೂ ಆರಂಭವಾಗಲಿದೆ.
ಇದನ್ನು ಮುಂದೆ ಭಾರತೀಯ ರೈಲ್ವೇಯಲ್ಲೂ ಅಳವಡಿಸಿಕೊಳ್ಳಬಹುದಾಗಿದೆ.
ಸುಲಭ ಸಂಚಾರ, ಸಣ್ಣ ನಗರಗಳ ಅಭಿವೃದ್ಧಿ
ಬುಲೆಟ್ ರೈಲಿನಂದ ಸಂಚಾರ ಸುಲಭ ಮತ್ತು ಸುಗಮವಾಗಲಿದ್ದು ನಗರದ ಹೊರಗೆಯೂ ಜನರು ಆರಾಮವಾಗಿ ಜೀವಿಸಬಹುದಾಗಿದೆ. ಹೀಗಾಗಿ ಪ್ರಮುಖ ನಗರಗಳ ಜತೆಗೆ ಬುಲೆಟ್ ರೈಲು ನಿಲ್ದಾಣಗಳ ಸುತ್ತ ಮುತ್ತಲೂ ನಗರಗಳು ಅಭಿವೃದ್ಧಿಯಾಗಲಿವೆ. ಇವು ನಗರಗಳ ಸಂಚಾರ ದಟ್ಟಣೆ, ಒತ್ತಡವನ್ನು ಕಡಿಮೆ ಮಾಡಲಿದೆ.
ಇಷ್ಟಲ್ಲದೆ, ಇಂಧನ ಉಳಿತಾಯವಾಗುತ್ತದೆ. ಪರಿಸರ ಮಾಲಿನ್ಯವೂ ಕಡಿಮೆಯಾಗುತ್ತದೆ.
ಸಮಯ ಉಳಿತಾಯ
ಬುಲೆಟ್ ರೈಲಿನಿಂದ ಸಮಯ ದೊಡ್ಡ ಮಟ್ಟಕ್ಕೆ ಉಳಿತಾಯವಾಗಲಿದೆ. ಮುಂಬೈ-ಅಹಮದಾಬಾದ್ ನಡುವಿನ ರೈಲಿನಿಂದ ಮುಂಬೈ ಮತ್ತು ಸಾಬರಮತಿ ನಡುವಿನ ಪ್ರಯಾಣದ ಅವಧಿ 2 ಗಂಟೆಗೆ ಇಳಿಕೆಯಾಗಲಿದೆ. ಸದ್ಯ ಇದೇ ದೂರವನ್ನು ಕ್ರಮಿಸಲು ಸಾಮಾನ್ಯ ರೈಲುಗಳು 8 ಗಂಟೆಗಳನ್ನು ತೆಗೆದುಕೊಳ್ಳುತ್ತಿವೆ.
ಸದ್ಯ ಈ ಮಾರ್ಗದಲ್ಲಿ 40,000 ಜನರು ಪ್ರಯಾಣಿಸುತ್ತಿದ್ದು ಇನ್ನು ಮುಂದೆ ಪ್ರತಿದಿನ 1,56,000 ಜನರು ಪ್ರಯಾಣಿಸಲಿದ್ದಾರೆ.
ಪ್ರಯಾಣಿಕರ ಸುರಕ್ಷತೆಗೆ ಒತ್ತು
ಜಪಾನಿನ ಶಿಂಕಾನ್ಸೆನ್ ಕಂಪೆನಿ ಇದರ ವಿನ್ಯಾಸ ಮಾಡಲಿದೆ. ಈ ಕಂಪನಿ ಕಳೆದ 50 ವರ್ಷಗಳಲ್ಲಿ ಒಂದೇ ಒಂದು ಅಪಘಾತಕ್ಕೆ ಗುರಿಯಾಗದ ದಾಖಲೆಯನ್ನು ಹೊಂದಿದೆ. ಸದ್ಯದ ಯೋಜನೆಯಲ್ಲೂ ಪ್ರಾಕೃತಿಕ ವಿಕೋಪಗಳನ್ನು ಮೆಟ್ಟಿ ನಿಲ್ಲುವ ವಿನ್ಯಾಸವನ್ನು ಮಾಡಲಾಗುತ್ತದೆ.
ಯಾವುದೇ ಲೆವೆಲ್ ಕ್ರಾಸಿಂಗ್ ಗಳಿರುವುದಿಲ್ಲ. ಭೂಕಂಪ ಉಂಟಾದಾಗ ಮೊದಲೇ ಸೂಚನೆ ನೀಡುವ ವ್ಯವಸ್ಥೆಯೂ ಇದರಲ್ಲಿದೆ. ಈ ಸಂದರ್ಭದಲ್ಲಿ ರೈಲು ತನ್ನಿಂತಾನೆ ನಿಲ್ಲುತ್ತದೆ.