ಇಂದಿನಿಂದ ಬಜೆಟ್ ಅಧಿವೇಶನ: ಹೇಗಿರಲಿದೆ ಈ ಬಾರಿಯ ಕಲಾಪ?
ನವದೆಹಲಿ, ಜನವರಿ 29: ಅನೇಕ ವಿವಾದಗಳು, ಸಮಸ್ಯೆಗಳನ್ನು ಎದುರಿಸುತ್ತಿರುವ ದೇಶದಲ್ಲಿ ಇಂದಿನಿಂದ ಮಹತ್ವದ ಸಂಸತ್ ಬಜೆಟ್ ಅಧಿವೇಶನ ಆರಂಭವಾಗುತ್ತಿದೆ. ಆದರೆ ಮೊದಲ ದಿನದಿಂದಲೇ ಭಾರಿ ಗದ್ದಲ, ಮಾತಿನ ಸಂಘರ್ಷಗಳಿಗೆ ಸಂಸತ್ ಸಾಕ್ಷಿಯಾಗುವ ಸಾಧ್ಯತೆ ಇದೆ. ಶುಕ್ರವಾರ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ ಮಾಡಲಿದ್ದು, ಅದನ್ನು ಬಹಿಷ್ಕರಿಸಲು 18 ವಿರೋಧಪಕ್ಷಗಳು ನಿರ್ಧರಿಸಿವೆ.
ಮೂರು ಕಠಿಣ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಪರವಾಗಿ ನಿಲ್ಲಲು ವಿಪಕ್ಷಗಳು ಸದನ ಬಹಿಷ್ಕಾರದ ನಿರ್ಧಾರ ತೆಗೆದುಕೊಂಡಿವೆ. ಆರ್ಥಿಕ ಬಿಕ್ಕಟ್ಟು, ಉದ್ಯೋಗ ನಷ್ಟ, ಕೋವಿಡ್ ಬಿಕ್ಕಟ್ಟು ನಿರ್ವಹಿಸಿದ ಬಗೆ, ಚೀನಾದೊಂದಿಗಿನ ಎಲ್ಎಸಿ ಗಡಿ ಬಿಕ್ಕಟ್ಟು, ಅರ್ನಬ್ ಗೋಸ್ವಾಮಿ ಅವರ ವಾಟ್ಸಾಪ್ ಚಾಟ್ ಸೋರಕೆ ಪ್ರಕರಣ ಸೇರಿದಂತೆ ಅನೇಕ ವಿಚಾರಗಳು ಸಂಸತ್ನಲ್ಲಿ ಕೋಲಾಹಲ ಸೃಷ್ಟಿಸುವ ಸಂಭವವಿದೆ.
Infographics: ಸಂಸತ್ ಭವನ ಕ್ಯಾಂಟೀನ್ ಹೊಸ ಮೆನು ದರ ಪಟ್ಟಿ
ರಾಷ್ಟ್ರೀಯ ಮಟ್ಟದಲ್ಲಿ ಯಾವ ಪರಿಣಾಮ ಉಂಟಾಗಬಹುದು ಎಂಬ ಪ್ರಜ್ಞೆಯಿಲ್ಲದೆ ಕೇಂದ್ರ ಸರ್ಕಾರವು ಮೂರು ಕೃಷಿ ಕಾಯ್ದೆಗಳನ್ನು ಬಲವಂತವಾಗಿ ಹೇರುತ್ತಿದೆ ಎಂದು ಆರೋಪಿಸಿರುವ ವಿರೋಧಪಕ್ಷಗಳ ಮುಖಂಡರು, ಶುಕ್ರವಾರದ ರಾಷ್ಟ್ರಪತಿಗಳ ಭಾಷಣವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಆದರೆ ಇದು ಅತ್ಯಂತ ದುರದೃಷ್ಟಕರ ನಿರ್ಧಾರ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಮುಂದೆ ಓದಿ.
ಎರಡು ಹಂತಗಳಲ್ಲಿ ಅಧಿವೇಶನ
ರಾಷ್ಟ್ರಪತಿಗಳ ಭಾಷಣದ ಬಳಿಕ ಆರ್ಥಿಕ ಸಮೀಕ್ಷೆಯ ಮಂಡನೆಯಾಗಲಿದೆ. ಜನವರಿ 29ರಿಂದ ಫೆಬ್ರವರಿ 15 ಮತ್ತು ಮಾರ್ಚ್ 8ರಿಂದ ಏಪ್ರಿಲ್ 8ರವರೆಗೆ ಎರಡು ಹಂತಗಳಲ್ಲಿ ಈ ಬಾರಿಯ ಬಜೆಟ್ ಅಧಿವೇಶನ ನಡೆಯಲಿದೆ. ಒಟ್ಟು 33 ದಿನ ಕಲಾಪ ನಡೆಯಲಿದೆ.
ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಮಂಡನೆ ಬಳಿಕ ಎರಡೂ ಸದನಗಳಲ್ಲಿ ರಾಷ್ಟ್ರಪತಿಗಳ ಭಾಷಣದ ಕುರಿತು ವಂದನೆ ನಿರ್ಣಯ ಬಗ್ಗೆ ಚರ್ಚೆ ನಡೆಯಲಿದೆ.
ವಿರೋಧ ಪಕ್ಷಗಳ ಬಹಿಷ್ಕಾರ
ಸಂಸತ್ನಲ್ಲಿ ಎನ್ಡಿಎ ಮೈತ್ರಿಕೂಟದ ವಿರುದ್ಧ 20 ವಿರೋಧಪಕ್ಷಗಳ ಸದಸ್ಯರು ಇದ್ದಾರೆ. ಅವುಗಳಲ್ಲಿ ಕಾಂಗ್ರೆಸ್, ಎನ್ಸಿಪಿ, ಶಿವಸೇನಾ, ಡಿಎಂಕೆ, ಟಿಎಂಸಿ, ಸಿಪಿಐ, ಸಿಪಿಎಂ, ಆರ್ಜೆಡಿ ಹಾಗೂ ಇತರೆ ಕೆಲವು ಪಕ್ಷಗಳು ರಾಷ್ಟ್ರಪತಿಗಳ ಭಾಷಣವನ್ನು ಬಹಿಷ್ಕರಿಸಲು ನಿರ್ಧರಿಸಿವೆ. ಎಎಪಿ ಮತ್ತು ಎಸ್ಎಡಿ ಕೂಡ ಬಹಿಷ್ಕಾರದ ನಿರ್ಧಾರ ಪ್ರಕಟಿಸಿವೆ. ಎಲ್ಲ ರಾಜಕೀಯ ಪಕ್ಷಗಳಿಗಿಂತಲೂ ರಾಷ್ಟ್ರಪತಿ ದೊಡ್ಡವರು. ಹೀಗಾಗಿ ಬಹಿಷ್ಕಾರದ ನಿರ್ಧಾರವನ್ನು ಮರುಪರಿಶೀಲಿಸಿ ಅಧಿವೇಶನದಲ್ಲಿ ಪಾಲ್ಗೊಳ್ಳುವಂತೆ ಜೋಶಿ ಮನವಿ ಮಾಡಿದ್ದಾರೆ.
ಬಜೆಟ್ 2021; ರಾಷ್ಟ್ರಪತಿ ಭಾಷಣ ಬಹಿಷ್ಕರಿಸಲು 16 ಪಕ್ಷಗಳ ತೀರ್ಮಾನ
ಎರಡು ಪಾಳಿಗಳಲ್ಲಿ ಕಲಾಪ
ಈ ಅಧಿವೇಶನವು ಕೋವಿಡ್ ಶಿಷ್ಟಾಚಾರ ನಿಯಮಗಳಿಗೆ ಅನುಗುಣವಾಗಿ ನಡೆಯಲಿದೆ. ರಾಜ್ಯಸಭೆ ಮತ್ತು ಲೋಕಸಭೆಗಳು ತಲಾ ಐದು ಗಂಟೆಗಳಂತೆ ಪಾಳಿಗಳಲ್ಲಿ ಸಭೆ ನಡೆಸಲಿವೆ. ಮೇಲ್ಮನೆಯಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆ ಮತ್ತು ಲೋಕಸಭೆಯಲ್ಲಿ ಮಧ್ಯಾಹ್ನ 3 ರಿಂದ ರಾತ್ರಿ 8 ಗಂಟೆಯವರೆಗೆ ಅಧಿವೇಶನ ನಡೆಯಲಿದೆ. ಇದೇ ಮೊದಲ ಬಾರಿಗೆ ಎರಡೂ ಸದನಗಳ ಚೇಂಬರ್ ಹಾಗೂ ಸೆಂಟ್ರಲ್ ಹಾಲ್ಗಳಲ್ಲಿ ಕೂಡ ಸದಸ್ಯರು ಕುಳಿತುಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ.
ಪ್ರಶ್ನೋತ್ತರ ಅವಧಿ ವಾಪಸ್
ಕಳೆದ ಮುಂಗಾರು ಅಧಿವೇಶನದಲ್ಲಿ ಬಿಟ್ಟುಬಿಡಲಾಗಿದ್ದ ಪ್ರಶ್ನೋತ್ತರ ಅವಧಿಯನ್ನು ಮರಳಿ ಸೇರಿಸಲಾಗಿದೆ. ಮುಂಗಾರು ಅಧಿವೇಶನದಲ್ಲಿ ಎರಡೂ ಸದನಗಳು ಶನಿವಾರ ಮತ್ತು ಭಾನುವಾರ ಕೂಡ ಕಾರ್ಯನಿರ್ವಹಿಸಿದ್ದವು. ಆದರೆ ಬಜೆಟ್ ಅಧಿವೇಶನದಲ್ಲಿ ವಾರಾಂತ್ಯದಲ್ಲಿ ಸಂಸತ್ ಕಲಾಪ ಇರುವುದಿಲ್ಲ.
ಫೆಬ್ರವರಿಯಿಂದ ಬದಲಾಗಲಿವೆ ಈ 5 ಪ್ರಮುಖ ನಿಯಮಗಳು
ಕಾನೂನುಗಳ ಪರಿವರ್ತನೆ
ಅಧಿವೇಶನದ ವೇಳೆ ಕೇಂದ್ರ ಸರ್ಕಾರವು ತನ್ನ ಇತ್ತೀಚಿನ ಕೆಲವು ಸುಗ್ರೀವಾಜ್ಞೆಗಳನ್ನು ಕಾನೂನಾಗಿ ಪರಿವರ್ತಿಸಲು ಮುಂದಾಗಲಿದೆ. ಯಾವುದೇ ಸುಗ್ರೀವಾಜ್ಞೆಯು ಅಧಿವೇಶನ ಆರಂಭವಾದ 42 ದಿನಗಳ ಒಳಗೆ ಕಾನೂನಾಗಿ ಪರಿವರ್ತನೆಯಾಗಬೇಕು. ಇಲ್ಲವಾದರೆ ಅದು ಅಸಿಂಧುವಾಗುತ್ತದೆ.