ಕೇಂದ್ರ ಬಜೆಟ್ -2021-22: ಆರೋಗ್ಯಕ್ಕೆ ಮೊದಲ ಆದ್ಯತೆ ಮತ್ತು ನಿರೀಕ್ಷೆಗಳ ಕಥೆ!
ನವದೆಹಲಿ, ಜನವರಿ.22: ಕೊರೊನಾವೈರಸ್ ಸೋಂಕಿನಿಂದ ಸುರಕ್ಷತೆ ಜೊತೆಗೆ ಆರೋಗ್ಯ ಭದ್ರತೆಗೆ ಕೇಂದ್ರ ಸರ್ಕಾರವು ಯಾವ ರೀತಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಕೇಂದ್ರದ 2021-22ನೇ ಸಾಲಿನ ಬಜೆಟ್ ನಲ್ಲಿ ಯಾವ ರೀತಿ ಸುಧಾರಣಾ ನೀತಿಗಳನ್ನು ರೂಪಿಸುತ್ತದೆ ಎಂಬುದು ಸಾಕಷ್ಟು ಕುತೂಹಲ ಕೆರಳಿಸಿದೆ.
ಕೇಂದ್ರ ಸರ್ಕಾರದ 2021-21ನೇ ಸಾಲಿನ ಆಯವ್ಯಯ(ಬಜೆಟ್)ದ ಮೇಲೆ ಇಡೀ ದೇಶದ ಲಕ್ಷ್ಯ ನೆಟ್ಟಿದೆ. ಫೆಬ್ರವರಿ.01ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಲಿದ್ದಾರೆ.
2021-22ನೇ ಕೇಂದ್ರ ಬಜೆಟ್: ಶಿಕ್ಷಣ ವಲಯದಲ್ಲಿ ನಿರೀಕ್ಷೆಗಳೇನು?
ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ವಿರುದ್ಧ ಧೈರ್ಯವಾಗಿ ನಿಂತು ದೇಶವನ್ನು ರಕ್ಷಿಸಿದ ಆರೋಗ್ಯ ಕಾರ್ಯಕರ್ತರಿಗೆ ವಿಶೇಷ ಕೊಡುಗೆ ನೀಡಲಾಗುತ್ತದೆಯೇ. ಕೊರೊನಾವೈರಸ್ ಸೋಂಕಿಗೆ ಕಡಿವಾಣ ಹಾಕುವುದು ಹೇಗೆ, ಲಸಿಕೆ ವಿತರಣೆಗೆ ಎಷ್ಟರ ಮಟ್ಟಿಗೆ ಅನುದಾನವನ್ನು ಮೀಸಲಿರುವುದಕ್ಕೆ ಸಾಧ್ಯವಿದೆ. ಈ ಮೊದಲೆಂದೂ ನೀಡದ ರೀತಿಯಲ್ಲಿ ದಾಖಲೆ ಮಟ್ಟದಲ್ಲಿ ಆರೋಗ್ಯ ವಲಯಕ್ಕೆ ಆದ್ಯತೆ ನೀಡಲಾಗುತ್ತದೆಯಾ ಎಂಬ ಇತ್ಯಾದಿ ಪ್ರಶ್ನೆಗಳು ಹಾಗೂ 2021-22ನೇ ಸಾಲಿನ ಕೇಂದ್ರ ಬಜೆಟ್ ಮೇಲಿನ ನಿರೀಕ್ಷೆಗಳ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.
ಕೊವಿಡ್-19 ಸೋಂಕಿನಿಂದ ಆರೋಗ್ಯಕ್ಕೆ ಆದ್ಯತೆಯ ಪಾಠ
- ಭಾರತದಲ್ಲಿ ಕೊವಿಡ್-19 ಸಾಂಕ್ರಾಮಿಕ ಪಿಡುಗಿನಿಂದಾಗಿ ದೇಶದ ಇತರೆ ವಲಯಗಳಿಗಿಂತ ಅಧಿಕ ಆದ್ಯತೆಯನ್ನು ವೈದ್ಯಕೀಯ ಮತ್ತು ಆರೋಗ್ಯ ಕ್ಷೇತ್ರಕ್ಕೆ ನೀಡಬೇಕು ಎಂಬ ಪಾಠವನ್ನು ಕಲಿಸಿದೆ. ದೇಶದ ಜಿಡಿಪಿಯಲ್ಲಿ ಶೇ.2.5ರಷ್ಟು ಅನುಪಾತವನ್ನು ಸಾರ್ವಜನಿಕ ಆರೋಗ್ಯ ವಲಯಕ್ಕೆ ಮೀಸಲಿರಿಸಲು ಸಾರ್ವತ್ರಿಕ ಸಹಮತವಿದೆ. ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ರಂಗದ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸುಧಾರಣೆಗಳನ್ನು ಜಾರಿಗೊಳಿಸಬೇಕಿದೆ.
- ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ ರಚನೆಯು ಡಿಜಿಟಲ್ ಆರೋಗ್ಯ ತಂತ್ರಜ್ಞಾನಗಳನ್ನು ನಿಯೋಜಿಸುವ ಮೂಲಕ ವೈಯಕ್ತಿಕ ಮತ್ತು ಸಮುದಾಯ ಆರೋಗ್ಯ ಫಲಿತಾಂಶಗಳನ್ನು ಸುಧಾರಿಸುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
- ಆಯುಷ್ಮಾನ್ ಭಾರತ್ ಕಾರ್ಯಕ್ರಮದ ತ್ವರಿತ ಅನುಷ್ಠಾನದ ಜೊತೆಗೆ ಅಭಿವೃದ್ಧಿಪಡಿಸುವುದಕ್ಕೆ ಹೆಚ್ಚಿನ ಒತ್ತು ನೀಡುವುದು
- ವಿಶ್ವದಾದ್ಯಂತ ಆರೋಗ್ಯ ವಲಯದಲ್ಲಿನ ಬದಲಾಣೆಗಳ ಬಗ್ಗೆ ಹಲವು ರಾಷ್ಟ್ರಗಳು ಲಕ್ಷ್ಯವಿಟ್ಟು ನೋಡುತ್ತಿವೆ. ಖಾಸಗಿ ವಲಯದಲ್ಲಿ ವೈದ್ಯಕೀಯ ರಂಗವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುವುದು
ಭಾರತ ಲಾಕ್ ಡೌನ್ ನಿಂದ ನೊಂದವರಿಗೆ ನೆರವು
- ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ಭಾರತದಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. ಬಡವ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ, ದಿವ್ಯಾಂಗ ಚೇತನರಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿ 1000 ರೂಪಾಯಿ ಆರ್ಥಿಕ ನೆರವು ನೀಡಲಾಗಿತ್ತು. ದೇಶಾದ್ಯಂತ ಆರಂಭಿಕ ಹಂತದಲ್ಲಿ ಈ ಯೋಜನೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ)ಯ ವಿನಾಯತಿ ನೀಡದಿರುವುದು ವೈಯಕ್ತಿಕವಾಗಿ ಸಾಕಷ್ಟು ನಷ್ಟ ಉಂಟು ಮಾಡಿತು.
- ಗ್ರಾಮೀಣ ಭಾರತ ಮತ್ತು ನಗರ ಪ್ರದೇಶಗಳಲ್ಲಿನ ದಿವ್ಯಾಂಗ ಚೇತನರು ಮತ್ತು ಎನ್ ಜಿಓ ಸಂಸ್ಥೆಗಳಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ಜಿಎಸ್ ಚಿ ವಿನಾಯಿತಿ ನೀಡುವುಕ್ಕೆ ತೀರ್ಮಾನಿಸುವ ನಿರೀಕ್ಷೆಯಿದೆ,
- ಕೇಂದ್ರ ಸರ್ಕಾರದ ಸಾಕಷ್ಟು ಯೋಜನೆಗಳಿಂದ ಗ್ರಾಮೀಣ ಭಾಗದ ದಿವ್ಯಾಂಗ ಚೇತನರು ದೂರವೇ ಉಳಿದುಕೊಳ್ಳುವಂತೆ ಆಗಿದೆ
- ಉಚಿತ ಶಿಕ್ಷಣ, ಆರೋಗ್ಯ ಮತ್ತು ಎಲ್ಲ ವರ್ಗದ ಜನರಿಗೆ ಉದ್ಯೋಗ ಸೃಷ್ಟಿಸುವ ಗುರಿ ಹಾಕಿಕೊಳ್ಳುವ ನಿರೀಕ್ಷೆಗಳಿವೆ. ಈ ಪೈಕಿ ಶೇಷ ಚೇತನರಿಗೆ ಹೆಚ್ಚಿನ ಆದ್ಯತೆ ನೀಡಬಹುದು ಎಂದು ನಾರಾಯಣ ಸೇವಾ ಸಂಸತ್ ಅಧ್ಯಕ್ಷ ಪ್ರಶಾಂತ್ ಅಗರವಾಲ್ ಹೇಳದ್ದಾರೆ.
ವೈದ್ಯಕೀಯ ರಂಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆ
- ಕೊರೊನಾವೈರಸ್ ಸೋಂಕಿನಿಂದ ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಕೊವಿಡ್-19 ಲಸಿಕೆಗಳ ಉತ್ಪಾದನೆ ಮತ್ತು ವಿತರಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ವೈದ್ಯಕೀಯ ವಲಯ, ಸಂಶೋಧನೆ ಮತ್ತು ಆರೋಗ್ಯ ರಂಗದಲ್ಲಿ 2021ನೇ ಸಾಲಿನ ಬಜೆಟ್ ಹೊಸ ಮೈಲಿಗಲ್ಲು ಸ್ಥಾಪಿಸುವ ನಿರೀಕ್ಷೆಗಳು ಹೆಚ್ಚಾಗಿವೆ.
- 2021-22ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಆರೋಗ್ಯಾಭಿವೃದ್ಧಿ ಮೇಲೆ ಬೆಳಕು ಚೆಲ್ಲುವ ನಿರೀಕ್ಷೆಗಳಿವೆ. ಕತ್ತಲಿನಲ್ಲಿರುವ ವೈದ್ಯಕೀಯ ಸಿಬ್ಬಂದಿ ಮತ್ತು ಆರೋಗ್ಯ ಭದ್ರತೆಯನ್ನು ನೀಡುವ ನಿಟ್ಟಿನಲ್ಲಿ ಪ್ರಮುಖ ಬದಲಾವಣೆಗಳನ್ನು ಅನುಷ್ಠಾನಕ್ಕೆ ತರುವ ನಿರೀಕ್ಷೆಗಳು ಹೆಚ್ಚಿವೆ.
- ವೈದ್ಯಕೀಯ ರಂಗದಲ್ಲಿ ಮೂಲಭೂತ ಸೌಕರ್ಯ, ಸಾವಿನ ಪ್ರಮಾಣ ಮತ್ತು ಮೃತರ ಕುಟುಂಬಕ್ಕೆ ಅಗತ್ಯ ನೆರವು ನೀಡುವ ಕುರಿತು ನೀತಿ ರೂಪಿಸುವ ಸಾಧ್ಯತೆಗಳು ಹೆಚ್ಚಾಗಿವೆ.
- ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಡುತ್ತಿರುವ ಮೊದಲ ಸಾಲಿನ ಯೋಧರಿಗೆ ಸುರಕ್ಷತೆ ನೀಡುವ ನಿಟ್ಟಿನಲ್ಲಿ ಯೋಜನೆ ಜಾರಿಗೊಳಿಸುವುದು.
- ಆರೋಗ್ಯ ವಲಯವನ್ನು ಡಿಜಿಟಲೀಕರಣಗೊಳಿಸುವುದು ಹಾಗೂ ಹೊಸ ಆವಿಷ್ಕಾರಗಳಿಗೆ ಅಗತ್ಯ ಆರ್ಥಿಕ ನೆರವು ನೀಡುವುದು
ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು
- ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ದೇಶದಲ್ಲಿ ಆರೋಗ್ಯ ಭದ್ರತಾ ವ್ಯವಸ್ಥೆಯು ಎಷ್ಟೊಂದು ಸೂಕ್ಷ್ಮವಾಗಿದೆ ಎಂಬುದನ್ನು ಸಾಬೀತುಪಡಿಸಿತು. ತುರ್ತು ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಸ್ಪತ್ರೆಗಳಿಗೆ ತೆರಳಿದರೆ ಸಾಮಾನ್ಯ ಚಿಕಿತ್ಸೆ ನೀಡುವುದಕ್ಕೂ ಆಗದ ಸ್ಥಿತಿಯಲ್ಲಿ ಆಸ್ಪತ್ರೆಯ ವ್ಯವಸ್ಥೆಯಿರುವುದು ಬೆಳಕಿಗೆ ಬಂದಿತು.
- ವೈದ್ಯಕೀಯ ವಲಯದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಅಗತ್ಯವಿರುವ ತುರ್ತು ಸೌಲಭ್ಯವನ್ನು ನೀಡುವುದಕ್ಕಾಗಿ ಅಲ್ಪಾವಧಿಯಲ್ಲಿ ಹಣಕಾಸು ನೆರವು ಘೋಷಿಸುವುದು
- ಆರೋಗ್ಯ ಸಂರಕ್ಷಣಾ ಸಲಕರಣೆಗಳು, ಹೆಚ್ಚಿನ ಆಸ್ಪತ್ರೆಗಳ ಜೊತೆಗೆ ಸರ್ವಾಂಗೀಣ ಮೂಲಸೌಕರ್ಯಗಳ ಅಭಿವೃದ್ಧಿಗೆ ದೀರ್ಘಾವಧಿಯಲ್ಲಿ ಹಣಕಾಸು ಘೋಷಿಸುವುದು
- ಜಾಗತಿಕ ಮಟ್ಟದಲ್ಲಿ ಸಿಗುವ ಲಸಿಕೆಗಳ ಗುಣಮಟ್ಟವನ್ನು ಉನ್ನತೀಕರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವುದು
ಕೇಂದ್ರ ಬಜೆಟ್ ಒಳಗೊಂಡಿರುವ ಮಹತ್ವದ ಭಾಗಗಳು
- ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ನಡುವೆ ಕೇಂದ್ರ ಸರ್ಕಾರವು 2021-22ನೇ ಸಾಲಿನ ಬಜೆಟ್ ಮಂಡನೆ ಮಾಡಲಿದೆ. ಈ ಆರ್ಥಿಕ ಸಾಲಿನ ಬಜೆಟ್ ನಲ್ಲಿ ಆರೋಗ್ಯ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಸ್ವಚ್ಛ ಭಾರತ್, ಆಯುಷ್ಮಾನ್ ಭಾರತ್, ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ ಮತ್ತು ಇತ್ತೀಚಿನ "ಮಿಷನ್ ಕೊವಿಡ್ ಸುರಕ್ಷಾ" ಯೋಜನೆಗಳು ಕೇಂದ್ ಬಜೆಟ್ ನಲ್ಲಿರುವ ದೀರ್ಘಾವಧಿ ಹೂಡಿಕೆಯ ಭಾಗವಾಗಿರಲಿದೆ
- ಕೊರೊನಾವೈರಸ್ ಕುರಿತಾದ ಹೆಚ್ಚಿನ ಸಂಶೋಧನೆ ಮತ್ತು ವೈದ್ಯಕೀಯ ಪರೀಕ್ಷೆಗಳಿಗೆ ಅಗತ್ಯವಿರುವ ಕೇಂದ್ರಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಗಣನೀಯ ಪ್ರಮಾಣದ ಹೂಡಿಕೆ ಮಾಡುವುದು
- ಹಕ್ಕಿಜ್ವರ, ಸಾರ್ಸ್, ಮಾರ್ಸ್ ಮತ್ತು ಎಬೋಲಾದ ರೀತಿಯ ಸಾಂಕ್ರಾಮಿಕ ಪಿಡುಗುಗಳ ಬಗ್ಗೆ ಮುನ್ನೆಚ್ಚರಿಕೆ ನೀಡುವಂತೆ ವ್ಯವಸ್ಥೆ ಅಭಿವೃದ್ಧಿಪಡಿಸುವುದು
- ಬ್ಯಾಕ್ಟಿರಿಯಾಗಳು ಹೆಚ್ಚು ಅಪಾಯಕಾರಿ ಆಗುತ್ತಿದ್ದು ಮುಂದಿನ ದಿನಗಳಲ್ಲಿ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಂದಲೇ ಸಾವು ಸಂಭವಿಸುವ ಅಪಾಯವಿರುತ್ತದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವುದಕ್ಕೆ ಕೇಂದ್ರ ಸರ್ಕಾರವು ದೀರ್ಘಾವಧಿಯಲ್ಲಿ ಸಂಶೋಧನೆಗಳ ಮೇಲೆ ಗಣನೀಯ ಪ್ರಮಾಣದ ಹೂಡಿಕೆ ಮಾಡಲಿದೆ.