ಪಾಕಿಸ್ತಾನಕ್ಕೆ ಗಣರಾಜ್ಯೋತ್ಸವ ಸಿಹಿ ಹಂಚದ ಬಿಎಸ್ಎಫ್
ಅತ್ತರಿ, ಜನವರಿ 26: ಭಾರತೀಯ ಸೇನೆಯ ಬಿಎಸ್ಎಫ್ ಪಡೆಯು ಈ ಬಾರಿ ಪಾಕಿಸ್ತಾನದೊಂದಿಗೆ ಗಣರಾಜ್ಯೋತ್ಸವ ದಿನದ ಸಿಹಿ ಹಂಚದಿರಲು ನಿರ್ಧರಿಸಿದೆ.
ಪಾಕಿಸ್ತಾನದಿಂದ ಪದೇ ಪದೇ ಕದನ ವಿರಾಮ ಉಲ್ಲಂಘನೆ ಆಗುತ್ತಿದ್ದು, ಇತ್ತೀಚೆಗಷ್ಟೆ ಪಾಕಿಸ್ತಾನವು ಬಿಎಸ್ಎಫ್ ಸೇನೆ ನೆಲೆಯನ್ನೇ ಗುರಿಯಾಗಿರಿಸಿಕೊಂಡು ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಬಿಎಸ್ಎಫ್ ಜವಾನರು ಅಸು ನೀಗಿದ್ದರು. ಹೀಗಾಗಿ ಬಿಎಸ್ಎಫ್ ಈ ನಿರ್ಧಾರಕ್ಕೆ ಬಂದಿದೆ.
ಯಾವುದೇ ಧಾರ್ಮಿಕ ಹಬ್ಬ ಅಥವಾ ರಾಷ್ಟ್ರೀಯ ಹಬ್ಬದ ಸಂದರ್ಭದಲ್ಲಿ ಭಾರತೀಯ ಸೇನೆಯು ಪಾಕಿಸ್ತಾನ ಸೇನೆಗೆ ಸಿಹಿ ನೀಡುವುದು ಸಂಪ್ರದಾಯವಾಗಿ ನಡೆದು ಬಂದಿದೆ, ಆದರೆ ಈ ಬಾರಿ ಪಾಕಿಸ್ತಾನದ ದ್ವೇಷ ನೀತಿಯಿಂದ ಬಾಂಧವ್ಯದ ಸಂಪ್ರದಾಯವೊಂದು ಕಡಿದಂತಾಗಿದೆ.
ಈ ರೀತಿ ಸಿಹಿ ಹಂಚಿಕೊಳ್ಳದಿರುವುದು ಇದು ಮೊದಲಲ್ಲ, ಪಾಕಿಸ್ತಾನವು ಕದನ ವಿರಾಮ ಉಲ್ಲಂಘನೆ ಮಾಡಿದಾಗಲೆಲ್ಲಾ ಭಾರತೀಯ ಸೇನೆಯು ಪಾಕಿಸ್ತಾನದೊಂದಿಗೆ ಸಿಹಿ ಹಂಚಿಕೊಂಡಿಲ್ಲ, ಕಳೆದ ದೀಪಾವಳಿ ಸಂದರ್ಭದಲ್ಲಿ ಭಾರತೀಯ ಸೇನೆ ನೀಡಿದ್ದ ಸಿಹಿಯನ್ನು ಪಾಕಿಸ್ತಾನ ತಿರಸ್ಕರಿಸಿತ್ತು.
ಈ ಸಿಹಿ ಹಂಚುವ ಸಂಪ್ರದಾಯ ಮುಖ್ಯವಾಗಿ ನಡೆಯುವುದು ಪಂಜಾಬಿನ ಭಾರತ-ಪಾಕಿಸ್ತಾನದ ಚೆಕ್ಪೋಸ್ಟ್ ಗಡಿಯಲ್ಲಿ.