ಸತ್ಯ ಹೇಳಿದ ಸೈನಿಕನ ತೇಜೋವಧೆಗೆ ಸಿದ್ಧವಾದ ಬಿಎಸ್ಎಫ್
ನವದೆಹಲಿ, ಜ. 11: ಗಡಿ ಕಾಯುವ ಸೈನಿಕರಿಗೆ ನೀಡಲಾಗುತ್ತಿರುವ ಕಳಪೆ ಆಹಾರ ವ್ಯವಸ್ಥೆಯನ್ನು ಸಾಮಾಜಿಕ ಜಾಲತಾಣದಲ್ಲಿ ಅನಾವರಣಗೊಳಿಸಿರುವ ಬಿಎಸ್ಎಫ್ ಯೋಧ ತೇಜ್ ಬಹದೂರ್ ಯಾದವ್ ಒಬ್ಬ ಹುಚ್ಚ, ಮದ್ಯ ವ್ಯಸನಿ, ಅವಿಧೇಯ ಯೋಧ ಎಂದು ಬಿಎಸ್ಎಫ್ ಹೇಳಿದೆ.
ಯಾದವ್ ಅವರು ಸತ್ಯ ಸ್ಫೋಟಿಸಿರುವ ಬೆನ್ನಲ್ಲೇ, ಅಧಿಕೃತ ಪ್ರಕಟಣೆಯೊಂದನ್ನು ಹೊರಡಿಸಿರುವ ಬಿಎಸ್ಎಫ್, ಆತನ ತೇಜೋವಧಿಗೆ ಮುಂದಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಯಾದವ್ ಅಪ್ ಲೋಡ್ ಮಾಡಿದ್ದ ವೀಡಿಯೋಗಳು ವೈರಲ್ ಆಗಿ, ದೇಶಾದ್ಯಂತ ಆ ಬಗ್ಗೆ ಚರ್ಚೆಗಳಾಗುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಸಚಿವಾಲಯ ತನಿಖೆಗೆ ಆದೇಶ ನೀಡಿದೆ.
ಆದರೆ, ಬಿಎಸ್ ಎಫ್ ಮಾತ್ರ ಯಾದವ್ ಅವರ ಚಾರಿತ್ರ್ಯವನ್ನೇ ವಧೆ ಮಾಡಲು ಹೆಜ್ಜೆಯಿಟ್ಟಿದ್ದು, ಆತನ ವಿರುದ್ಧ ಆರೋಪಗಳನ್ನು ಎಡೆಬಿಡದೇ ಮಾಡುತ್ತಿದೆ.
ಯಾದವ್ ಒಬ್ಬ ಕುಡುಕು, ಅವಿಧೇಯ ಸೈನಿಕ. ಅನುಮತಿ ಇಲ್ಲದೇ ರಜೆ ಪಡೆಯುವಂಥವನು, ಹಿರಿಯ ಅಧಿಕಾರಿಗಳೆಂದರೆ ಈತ ಅಗೌರವ ತೋರುತ್ತಾನೆ. ಹಾಗಾಗಿ, ಈತನಿಗೆ ಅನೇಕ ಬಾರಿ ಛೀಮಾರಿ ಹಾಕಲಾಗಿದೆ. ಈತನಿಗೆ ಬುದ್ಧಿ ಕಲಿಸಲೆಂದೇ ಕ್ಲಿಷ್ಟಕರವಾದ ಜಮ್ಮು-ಕಾಶ್ಮೀರ ಗಡಿಯಲ್ಲಿ ಆತನನ್ನು ಸೇವೆಗೆ ನಿಯೋಜಿಸಲಾಗಿದೆ.
ಬಿಎಸ್ ಎಫ್ ನ ಕ್ರಮಗಳಿಂದಾಗಿ ಹತಾಶೆಗೊಂಡಿರುವ ಆತ ಬಿಎಸ್ ಎಫ್ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾನೆಂದು ದೂರಿದೆ.