ಕಳಪೆ ಆಹಾರ ಪೂರೈಕೆ, ಯೋಧನಿಗೆ ಮಾನಸಿಕ, ದೈಹಿಕ ಹಿಂಸೆ ಆರೋಪ!
ರೇವಾರಿ, ಫೆಬ್ರವರಿ 2: ಬಿಎಸ್ ಎಫ್ ಯೋಧ ತೇಜ್ ಬಹಾದ್ದೂರ್ ಪತ್ನಿ ಶರ್ಮಿಳಾ ಯಾದವ್, ನನ್ನ ಪತಿಯನ್ನು ಬಂಧನದಲ್ಲಿ ಇರಿಸಿದ್ದಾರೆ. ನಿವೃತ್ತಿ ಪಡೆಯುವಂತೆ ಬಲವಂತ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮಾಧ್ಯಮವೊಂದರ ಜೊತೆ ಮಾತನಾಡಿದ ಅವರು, ನನ್ನ ಪತಿಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದಿದ್ದಾರೆ. "ನನ್ನ ಪತಿ ಜನವರಿ 31ರಂದು ಬರುತ್ತಾರೆ ಎಂದು ಕಾದೆ. ಆದರೆ ಬರಲಿಲ್ಲ. ಅವರು ಕರೆ ಮಾಡಿ, ನಾನು ಬರುತ್ತಿಲ್ಲ. ನಿವೃತ್ತನಾಗುವಂತೆ ಒತ್ತಡ ಹೇರುತ್ತಿದ್ದಾರೆ ಎಂದರು. ಆ ನಂತರ ಒಂದು ಗಂಟೆ ಬಿಟ್ಟು ಮತ್ತೆ ಕರೆ ಮಾಡಿ, ನಿವೃತ್ತಿ ಬೇಡ ಎನ್ನುತ್ತಿದ್ದಾರೆ ಎಂದು ಹೇಳಿದರು. ಆಮೇಲೆ ಬಂಧನದಲ್ಲಿ ಇರಿಸಿದ್ದಾರೆ" ಎಂದು ಆಕೆ ಆರೋಪಿಸಿದ್ದಾರೆ.[ಅವ್ಯವಸ್ಥೆ ವಿರುದ್ಧ ಸಿಡಿದೆದ್ದ ಯೋಧನ ವಿರುದ್ಧ ಬಿಎಸ್ಎಫ್ ಕಿಡಿ]
ಬೇರೊಬ್ಬರ ಫೋನಿನಿಂದ ಕರೆ ಮಾಡಿದ ನನ್ನ ಪತಿ, ನನಗೆ ಹೆದರಿಸುತ್ತಿದ್ದಾರೆ. ಮಾನಸಿಕ-ದೈಹಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದ್ದಾಗಿ ಶರ್ಮಿಳಾ ಯಾದವ್ ತಿಳಿಸಿದ್ದಾರೆ. ಈ ಮಧ್ಯೆ ಬಿಎಸ್ ಎಫ್ ಮೂಲಗಳು ಮಾತನಾಡಿ, ತೇಜ್ ಬಹಾದ್ದೂರ್ ನನ್ನು ಬಂಧಿಸಿಲ್ಲ. ಆತ ತಪ್ಪಿತಸ್ಥ ಎಂದು ಸಾಬೀತಾಗಿದೆ. ಆತನ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದ್ದು, ಅದಕ್ಕೆ ಇನ್ಣೂ ಒಪ್ಪಿಗೆ ಸಿಕ್ಕಿಲ್ಲ ಎಂದಿದ್ದಾರೆ.[ಸತ್ಯ ಹೇಳಿದ ಸೈನಿಕನ ತೇಜೋವಧೆಗೆ ಸಿದ್ಧವಾದ ಬಿಎಸ್ಎಫ್]
ಕಳಪೆ ಆಹಾರ ಪೂರೈಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದ ಬಿಎಸ್ ಎಫ್ ಯೋಧ ತೇಜ್ ಬಹಾದ್ದೂರ್, ಆ ಬಗ್ಗೆ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದರು. ಆ ವಿಷಯ ದೇಶದಾದ್ಯಂತ ಚರ್ಚೆಯಾಗಿತ್ತು.