ನರೇಂದ್ರ ಮೋದಿಗೆ ನೊಬೆಲ್ ಪುರಸ್ಕಾರ ಸಿಗಬೇಕು: ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಮುಖ್ಯಸ್ಥರ ಒತ್ತಾಯ
ಕೋಲ್ಕತಾ, ಏ. 30: ಕೋವಿಡ್ ಸಂಕಷ್ಟದಲ್ಲಿ ಬಡಜನರಿಗೆ ಉಚಿತ ಆಹಾರದ ವ್ಯವಸ್ಥೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೊಬೆಲ್ ಪಾರಿತೋಷಕ ಯಾಕೆ ಸಿಕ್ಕಿಲ್ಲ ಎಂದು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (BSE- Bombay Stock Exchange) ಮುಖ್ಯಸ್ಥ ಆಶೀಶ್ ಚೌಹಾಣ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರಕಾರ ವಿಶ್ವದಲ್ಲೇ ಅತಿ ದೊಡ್ಡ ಉಚಿತ ಆಹಾರ ಯೋಜನೆ ಜಾರಿ ಮಾಡಿತ್ತು. ಈ ಕಾರ್ಯವನ್ನು ನೊಬೆಲ್ ಶಾಂತಿ ಪಾರಿತೋಷಕ ಸಮಿತಿ ಗಂಭೀರವಾಗಿ ಪರಿಗಣಿಸಲಿ ಎಂದು ಒತ್ತಾಯಿಸಿದ್ದಾರೆ.
ವಿಶ್ವಸಂಸ್ಥೆಯ ಅಹಾರ ಯೋಜನೆ (United Nations World Food Programme) ಅಡಿಯಲ್ಲಿ ಹನ್ನೊಂದೂವರೆ ಕೋಟಿ ಜನರಿಗೆ ಆಹಾರ ಕೊಡಲಾಗಿತ್ತು. ಅದಕ್ಕಾಗಿ 2020ರ ನೊಬೆಲ್ ಶಾಂತಿ ಪುರಸ್ಕಾರ ಸಿಕ್ಕಿತು. ಆದರೆ, ಭಾರತದಲ್ಲಿ 80 ಕೋಟಿ ಮಂದಿಗೆ ಉಚಿತ ಆಹಾರದ ವ್ಯವಸ್ಥೆ ಮಾಡಲಾಗಿತ್ತು ಎಂದು ಬಿಎಸ್ಇ ಎಂಡಿ ಮತ್ತು ಸಿಇಒ ಆಗಿರುವ ಆಶಿಶ್ ಚೌಹಾಣ್ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಸಭೆಯಲ್ಲಿ ಕೇಜ್ರಿವಾಲ್ ಅಸಭ್ಯ ವರ್ತನೆ ತೋರಿದ್ದಕ್ಕೆ ಬಿಜೆಪಿ ಖಂಡನೆ
2019ರಲ್ಲಿ 88 ದೇಶಗಳಲ್ಲಿ ಅತೀ ಆಹಾರ ಕೊರತೆ ಮತ್ತು ಹಸಿವಿನಿಂದ ಬಳಲುತ್ತಿದ್ದ ಸುಮಾರು 9.7 ಕೋಟಿ ಮಂದಿಗೆ ಆಹಾರದ ನೆರವು ಒದಗಿಸಿದ ವಿಶ್ವಸಂಸ್ಥೆ ವಿಶ್ವ ಆಹಾರ ಯೋಜನೆ (WFP) ಸಂಸ್ಥೆಗೆ ನೊಬೆಲೆ ಶಾಂತಿ ಪುರಸ್ಕಾರವನ್ನು ಕೊಡಲಾಗಿತ್ತು. ಆದರೆ, ವಿಶ್ವಸಂಸ್ಥೆಯ ಈ ಕಾರ್ಯಕ್ಕಿಂತಲೂ ಭಾರತ ಕೋವಿಡ್ ಕಾಲಘಟ್ಟದಲ್ಲಿ ಮಾಡಿದ ಕೆಲಸ ಬಹಳ ದೊಡ್ಡದು. ಇದಕ್ಕಾಗಿ ಪ್ರಧಾನಿಗೆ ನೊಬೆಲ್ ಸಿಗಬೇಕು ಎಂಬುದು ಚೌಹಾಣ್ ಅನಿಸಿಕೆ.
"ಮುಂದುವರಿದ ದೇಶಗಳಿಗಿಂತ ನಮ್ಮ ತಲಾದಾಯ 10-30 ಪಟ್ಟು ಕಡಿಮೆ ಇದ್ದರೂ ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯನ್ನು ನಾವು ಉತ್ತಮವಾಗಿ ನಿಭಾಯಿಸಿದ್ದೇವೆ. ಇದಕ್ಕೆ ನಾವು ಹೆಮ್ಮೆ ಪಡಬೇಕು" ಎಂದು ಐಐಎಂ-ಕಲ್ಕತ್ತಾದ ಪದವಿಪ್ರದಾನ ಸಮಾರಂಭದ ವೇಳೆ ಅವರು ತಿಳಿಸಿದ್ದಾರೆ.
ಟೋಕಿಯೋದಲ್ಲಿ ನಡೆಯುವ ಕ್ವಾಡ್ ಸಮ್ಮೇಳನದಲ್ಲಿ ಬೈಡನ್-ಮೋದಿ
ಐಐಎಂ-ಕಲ್ಕತ್ತಾದ ಹಳೆಯ ವಿದ್ಯಾರ್ಥಿಯೂ ಆಗಿರುವ ಆಶಿಶ್ ಚೌಹಾಣ್ ಅವರು ನೊಬೆಲ್ ಶಾಂತಿ ಪುರಸ್ಕಾರಕ್ಕೆ ಮೋದಿ ಅವರ ಹೆಸರನ್ನು ಸಮಿತಿಯವರು ಪರಿಗಣಿಸಲಿ ಎಂದು ಒತ್ತಾಯಿಸಿದ್ದಾರೆ.
"ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ದೇಶದ 80 ಕೋಟಿ ಜನರಿಗೆ ಎರಡು ವರ್ಷ ಉಚಿತವಾಗಿ ಆಹಾರ ವ್ಯವಸ್ಥೆ ಮಾಡಲಾಗಿತ್ತು. 80 ಕೋಟಿ ಸಂಖ್ಯೆಗೆ ಅನೇಕ ದೇಶಗಳ ಜನಸಂಖ್ಯೆಯನ್ನ ಒಟ್ಟು ಸೇರಿಸಬೇಕು. ಇಂಥ ಮಹತ್ಕಾರ್ಯ ಮಾಡಿದ ಮೋದಿ ಅವರನ್ನ ನೊಬೆಲ್ ಪ್ರೈಜ್ ಕಮಿಟಿಯವರು ಗಂಭೀರವಾಗಿ ಪರಿಗಣಿಸುತ್ತಾರಾ ಎಂದು ಕಾದುನೋಡಬೇಕು" ಎಂದಿದ್ದಾರೆ.
ಬಿಎಸ್ಇ ಮುಖ್ಯಸ್ಥರಾದ ಅವರು ಕೋವಿಡ್ ಸಂದರ್ಭದಲ್ಲಿ ಬಹಳ ಶ್ರಮಿಸಿದ ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು, ವೈದ್ಯರು ಮೊದಲಾದವರನ್ನು ಬಹಳ ಪ್ರಶಂಸಿಸಿದ್ದಾರೆ. "ನಾವು ಸಾಮಾನ್ಯವಾಗಿ ರಾಜಕಾರಣಿಗಳಿಗೆ ಶಾಪ ಹಾಕತ್ತೇವೆ. ಆದರೆ ಈ ಸಂದರ್ಭದಲ್ಲಿ ಅವರು ಜನರ ಸೇವೆಗಾಗಿ ತಮ್ಮ ಜವಾಬ್ದಾರಿ ತೋರಿದರು" ಎಂದು ಅವರು ಹೇಳಿದ್ದಾರೆ.
ಆಶಿಶ್ ಚೌಹಾಣ್ ಅವರು ಎರಡು ಬಾರಿ ಬಿಎಸ್ಇ ಮುಖ್ಯಸ್ಥ ಹುದ್ದೆ ಅನುಭವಿಸಿದ್ದಾರೆ. ಇದೇ ನವೆಂಬರ್ನಲ್ಲಿ ಅವರ ಈ ಎರಡನೇ ಅಧಿಕಾರ ಅವಧಿ ಅಂತ್ಯ ಆಗುತ್ತದೆ.
(ಒನ್ಇಂಡಿಯಾ ಸುದ್ದಿ)