ರೇಷ್ಮೆ ಸೀರೆ ಹಸಿರು ಕುಪ್ಪುಸದಲ್ಲಿ ಕಂಗೊಳಿಸಿದ ತೆರೇಸಾ
ಬೆಂಗಳೂರು, ನವೆಂಬರ್, 8: ಬ್ರಿಟನ್ ಪ್ರಧಾನ ಮಂತ್ರಿ ತೆರೇಸಾ ಮೇ ಅವರು ಚಿನ್ನದ ಬಣ್ಣದ ರೇಷ್ಮೆ ಸೀರೆಗೆ ಹಸಿರು ಬಣ್ಣದ ಕುಪ್ಪಸ ತೊಟ್ಟು ಸೋಮೇಶ್ವರ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿದರು.
ಅಪ್ಪಟ ಭಾರತೀಯ ನಾರಿಯಂತೆ ಚಿನ್ನದ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದ ಬ್ರಿಟನ್ ಪ್ರಧಾನಿಯವರು ಇಂದು ಮಧ್ಯಾಹ್ನ ಹಲಸೂರಿನಲ್ಲಿರುವ ಐತಿಹಾಸಿಕ ಸೋಮೇಶ್ವರ ದೇವಸ್ಥಾನಕ್ಕೆ ಆಗಮಿಸಿದಾಗ, ದೇವಸ್ಥಾನ ದ್ವಾರದಲ್ಲಿ ಮಲ್ಲಿಗೆ ಹಾರಹಾಕಿ, ನಾದಸ್ವರ ನುಡಿಸಿ ಅವರಿಗ ಸ್ವಾಗತ ಕೋರಲಾಯಿತು.
ಒಂದು ದಿನದ ಬೆಂಗಳೂರು ಭೇಟಿಗಾಗಿ ಆಗಮಿಸಿದ್ದ ಅವರಿಗೆ ನಗರದ ಪುರಾತನ ದೇವಸ್ಥಾನಗಳಲ್ಲಿ ಒಂದಾದ ಈ ದೇವಸ್ಥಾನವನ್ನು ತೋರಿಸಲು ಅನುವು ಮಾಡಿಕೊಡಲಾಗಿತ್ತು.
ದೇವಸ್ಥಾನ ಪ್ರವೇಶಿಸುತ್ತಿದ್ದಂತೆ ದೇವಸ್ಥಾನದ ಇಬ್ಬರು ಪ್ರಧಾನ ಅರ್ಚಕರೊಂದಿಗೆ ದೇವಸ್ಥಾನವನ್ನು ಪ್ರದಕ್ಷಿಣೆ ಮಾಡುತ್ತಾ ಅವರಿಂದಲೇ ಈ ದೇವಸ್ಥಾನದ ಇತಿಹಾಸದ ಕುರಿತು ಮಾಹಿತಿಯನ್ನು ಪಡೆದುಕೊಂಡರು.
ಪ್ರದಕ್ಷಿಣೆ ಮುಗಿದ ಕೂಡಲೇ ಗರ್ಭಗುಡಿಯಲ್ಲಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ನಂತರ ಉಯ್ಯಾಲೆ ಮಂಟಪದಲ್ಲಿರುವ ಸೋಮೇಶ್ವರನಿಗೆ ಪೂಜೆ ಸಲ್ಲಿಸಿ, ದೇವರಿಗೆ ಕೈಮುಗಿದು ನಮಸ್ಕಾರ ಮಾಡಿದ ನಂತರ ಮಂಗಳಾರತಿಯನ್ನು ಸ್ವೀಕರಿಸಿ ದೇವರ ದರ್ಶನ ಪಡೆದರು.
ಸೋಮೇಶ್ವರನ ದರ್ಶನ ಮುಗಿಸಿ ತೆರಳುವ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ಮುಜರಾಯಿ ಇಲಾಖೆಯ ಆಯುಕ್ತರಾದ ಎಸ್. ಪಿ. ಷಡಕ್ಷರಿಸ್ವಾಮಿ ಮತ್ತು ನಗರ ಜಿಲ್ಲಾಧಿಕಾರಿ ವಿ. ಶಂಕರ್ ಅವರು ತೆರೇಸಾ ಮೇ ಅವರಿಗೆ ಶಾಲು ಹೊದಿಸಿ ನಟರಾಜನ ಗಂಧದ ಪ್ರತಿಮೆಯನ್ನು ನೀಡಿ ಗೌರವ ಸಲ್ಲಿಸಿದರು.