'ವೀಸಾಗಾಗಿ ಲಂಚ' ಬೋಗಸ್ ಪ್ರಕರಣ: ಕಾರ್ತಿ ಚಿದಂಬರಂ
ನವದೆಹಲಿ, ಮೇ 26: ವೀಸಾ ನೀಡಲು ಲಂಚ ಪಡೆದ ಆರೋಪ ಪ್ರಕರಣ ಸಂಬಂಧ ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಪುತ್ರ ಸಂಸದ ಕಾರ್ತಿ ಚಿದಂಬರಂ ಗುರುವಾರ ಕೇಂದ್ರ ತನಿಖಾ ದಳ (CBI) ಪ್ರಧಾನ ಕಚೇರಿಗೆ ಹಾಜರಾಗಿದ್ದಾರೆ. ಪ್ರಕರಣ ಕುರಿತಂತೆ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.
ಸುಪ್ರೀಂಕೋರ್ಟ್ ಅನುಮತಿ ಪಡೆದು ಕಾರ್ತಿ ಇಂಗ್ಲೆಂಡ್, ಯೂರೋಪ್ಗೆ ತೆರಳಿದ್ದರು. ಬ್ರಿಟನ್ನಿಂದ ವಾಪಸ್ ಭಾರತಕ್ಕೆ ಬಂದ 16 ಗಂಟೆಗಳ ಒಳಗಾಗಿ ಕಾರ್ತಿ ಚಿದಂಬರಂ ಸಿಬಿಐ ತನಿಖೆಗೆ ಹಾಜರಾಗಬೇಕು ಎಂದು ವಿಶೇಷ ನ್ಯಾಯಾಲಯ ಆದೇಶ ನೀಡಿತ್ತು.
ಕಾರ್ತಿ ಚಿದಂಬರಂ ತಂದೆ ಪಿ.ಚಿದಂಬರಂ ಗೃಹ ಸಚಿವರಾಗಿದ್ದ ವೇಳೆ ಚೀನಾ ಪ್ರಜೆಗಳಿಗೆ ವೀಸಾ ನೀಡಲು ಲಂಚ ಪಡೆದಿದ್ದಾರೆ ಎಂದು ಸಿಬಿಐ ಆರೋಪ ಮಾಡಿದೆ. ಪ್ರಕರಣ ಸಂಬಂಧ ಕಾರ್ತಿ ಚಿದಂಬರಂ ಮನೆ, ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ, ಶೋಧ ನಡೆಸಿದ್ದರು.
ಪ್ರಕರಣ ದಾಖಲಿಸಿದ ಜಾರಿ ನಿರ್ದೇಶನಾಲಯ
2011 ರಲ್ಲಿ ಪಿ.ಚಿದಂಬರಂ ಕೇಂದ್ರ ಗೃಹ ಸಚಿವರಾಗಿದ್ದಾಗ 263 ಚೀನಿ ಪ್ರಜೆಗಳಿಗೆ ವೀಸಾ ನೀಡಿದ ಪ್ರಕರಣ ಸಂಬಂಧ ಚಿದಂಬರಂ ಪುತ್ರ, ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ, ಭಾಸ್ಕರರಾಮನ್ ಮತ್ತು ಇತರರ ವಿರುದ್ಧ ಜಾರಿ ನಿರ್ದೇಶನಾಲಯ(ಇಡಿ) ಬುಧವಾರ ಅಕ್ರಮ ಹಣ ವರ್ಗಾವಣೆ (ಪಿಎಂಎಲ್ಎ) ಅಡಿ ಪ್ರಕರಣ ದಾಖಲಿಸಿದೆ.
ಮೇ 17ರಂದು ಕಾರ್ತಿ ಚಿದಂಬರಂ ಆಪ್ತ ಎಸ್.ಭಾಸ್ಕರ ರಾಮನ್ರನ್ನು ಸಿಬಿಐ ಬಂಧಿಸಿತ್ತು. ಪಂಜಾಬ್ನಲ್ಲಿ ಪವರ್ ಪ್ಲಾಂಟ್ ಸ್ಥಾಪಿಸುತ್ತಿರುವ ವೇದಾಂತ ಗ್ರೂಪ್ ಕಂಪನಿ, ತಲ್ವಾಂಡಿ ಸಾಬೋ ಪವರ್ ಲಿಮಿಟೆಡ್ನ ಉನ್ನತ ಅಧಿಕಾರಿಯಿಂದ ಲಂಚ ಪಡೆದಿದ್ದಾರೆ ಎನ್ನುವ ಆರೋಪ ಕಾರ್ತಿ ಮೇಲಿದೆ.
50 ಲಕ್ಷ ಲಂಚ ಪಡೆದ ಆರೋಪ
ವೀಸಾ ಪ್ರಕರಣದಲ್ಲಿ ಕಾರ್ತಿ ಚಿದಂಬರಂ ಹಾಗೂ ಅವರ ನಿಕಟವರ್ತಿ ಎಸ್ ಭಾಸ್ಕರರಾಮನ್ಗೆ 50 ಲಕ್ಷ ರೂ. ಕಿಕ್ಬ್ಯಾಕ್ ನೀಡಲಾಗಿದೆ ಎಂದು ಆರೋಪಿಸಿ ಸಿಬಿಐ ಎಫ್ಐಆರ್ ದಾಖಲಿಸಿದೆ.
ಸಿಬಿಐ ಅಧಿಕಾರಿಗಳ ಪ್ರಕಾರ ವಿದ್ಯುತ್ ಯೋಜನೆಯನ್ನು ಕಾರ್ಯಗತಗೊಳಿಸುತ್ತಿರುವ ಚೀನಾದ ಕಂಪನಿ, ತನ್ನ 263 ಚೀನಾ ಮೂಲದ ಕಾರ್ಮಿಕರಿಗೆ ಪ್ರಾಜೆಕ್ಟ್ ವೀಸಾಗಳನ್ನು ನೀಡಲು ಲಂಚ ನೀಡಿತ್ತು ಎಂದು ಆರೋಪಿಸಿದ್ದಾರೆ.
ಬೋಗಸ್ ಪ್ರಕರಣ ಎಂದ ಕಾರ್ತಿ
"ನಾನು ಒಬ್ಬನೇ ಒಬ್ಬ ಚೀನೀ ಪ್ರಜೆಗೂ ವೀಸಾ ಪಡೆಯಲು ಅನುಕೂಲ ಮಾಡಿಲ್ಲ, ನನ್ನ ವಿರುದ್ಧ ದಾಖಲಾಗಿರುವ ಪ್ರತಿಯೊಂದು ಪ್ರಕರಣವೂ ಬೋಗಸ್ ಆಗಿದೆ. ಒಂದು ಬೋಗಸ್ ಇನ್ನೊಂದು ಬೋಗಸ್. ಇದು ಅತ್ಯಂತ ಬೋಗಸ್" ಎಂದು ದೆಹಲಿಯ ಸಿಬಿಐ ಪ್ರಧಾನ ಕಚೇರಿಯ ಹೊರಗೆ ಕಾರ್ತಿ ಚಿದಂಬರಂ ಹೇಳಿದ್ದಾರೆ.
ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಕಾರ್ತಿ ನಿರಾಕರಿಸಿದ್ದು, "ನಮಗೆ ಕಿರುಕುಳ ನೀಡುವ ಉದ್ದೇಶದಿಂದ, ಗುರಿಯಾಗಿಸಿ ಈ ರೀತಿ ಮಾಡಲಾಗುತ್ತಿದೆ" ಎಂದು ಆರೋಪಿಸಿದ್ದಾರೆ.
ಕೇಂದ್ರದ ವಿರುದ್ಧ ಕಾರ್ತಿ ಆರೋಪ
ಪ್ರಕರಣ ಕುರಿತಂತೆ ಮಂಗಳವಾರ ಹೇಳಿಕೆ ನೀಡಿದ್ದ ಕಾರ್ತಿ, "ಎರಡು ವಾರಗಳ ಹಿಂದೆ ಇಂಗ್ಲೆಂಡ್ ಮತ್ತು ಯೂರೋಪ್ಗೆ ಕುಟುಂಬಸ್ಥರ ಭೇಟಿ, ವೈಯಕ್ತಿಕ ಕೆಲಸಕ್ಕಾಗಿ ಹೋಗಿದ್ದೆ, ಮೊದಲೇ ನಿರ್ಧರಿಸಿದಂತೆ ಮನೆಗೆ ಹಿಂತಿರುಗುತ್ತೇನೆ, ಕೇಂದ್ರ ಸರ್ಕಾರ ದುರುದ್ದೇಶದಿಂದ ನನ್ನ ಮೇಲೆ ಆರೋಪ ಹೊರಿಸಲು, ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲು ತನ್ನ ಏಜೆನ್ಸಿಗಳನ್ನು ಬಳಸಿಕೊಳ್ಳುತ್ತಿದೆ" ಎಂದು ಆರೋಪಿಸಿದ್ದಾರೆ.
ನನ್ನ ಮೇಲೆ ಪ್ರಕರಣ ದಾಖಲಿಸುವ ಮೂಲಕ ತನ್ನ ತಂದೆಯನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಾರ್ತಿ ವಾಗ್ದಾಳಿ ನಡೆಸಿದ್ದಾರೆ.