ಲಂಚ ಪ್ರಕರಣ: ಸಿಬಿಐ ಮಾಜಿ ವಿಶೇಷ ನಿರ್ದೇಶಕ ಆಸ್ತಾನಾಗೆ ಕ್ಲೀನ್ಚಿಟ್
ನವದೆಹಲಿ, ಫೆಬ್ರವರಿ 12: ಲಂಚ ಮತ್ತು ಸುಲಿಗೆ ಆರೋಪಗಳನ್ನು ಎದುರಿಸುತ್ತಿದ್ದ ಸುಪ್ರೀಂಕೋರ್ಟ್ನ ಮಾಜಿ ವಿಶೇಷ ನಿರ್ದೇಶಕ ರಾಕೇಶ್ ಆಸ್ತಾನಾ ಮತ್ತು ಡಿಎಸ್ಪಿ ದೇವೇಂದರ್ ಕುಮಾರ್ ಹಾಗೂ ಇತರರಿಗೆ ಸಿಬಿಐ ಮಂಗಳವಾರ ಕ್ಲೀನ್ ಚಿಟ್ ನೀಡಿದೆ.
ಸಿಬಿಐನ ಮಾಜಿ ನಿರ್ದೇಶಕ ಅಲೋಕ್ ವರ್ಮಾ ನಿರ್ದೇಶನದಂತೆ ಪ್ರಕರಣ ದಾಖಲಿಸಿಕೊಂಡು ಆರೋಪಪಟ್ಟಿ ಸಿದ್ಧಪಡಿಸಲಾಗಿತ್ತು. ಈ ಪ್ರಕರಣದಿಂದ ಅಲೋಕ್ ವರ್ಮಾ ಮತ್ತು ರಾಕೇಶ್ ಆಸ್ತಾನಾ ಅವರ ನಡುವಿನ ಜಗಳ ಬೀದಿಗೆ ಬಂದಿತ್ತು. ಈ ಪ್ರಕರಣದಿಂದ ಸಿಬಿಐ ಇಬ್ಬರೂ ಆರೋಪಿಗಳನ್ನು ಕೈಬಿಟ್ಟಿದೆ.
ಸಿಬಿಐ ವಿವಾದ: ರಾಜಕಾರಣಿಗಳ ನಂಟು ಮತ್ತು ಲಂಚದ ವಿವರ ಬಾಯ್ಬಿಟ್ಟ ಉದ್ಯಮಿ
ಸಿಬಿಐ ವಿಶೇಷ ನ್ಯಾಯಾಧೀಶ ಸಂಜೀವ್ ಕುಮಾರ್ ಎದುರು ಆರೋಪಪಟ್ಟಿ ಸಲ್ಲಿಸಲಾಗಿತ್ತು. ಅದರಲ್ಲಿ ಮಧ್ಯವರ್ತಿ ಮನೋಜ್ ಪ್ರಸಾದ್ ಆರೋಪಿಯಾಗಿದ್ದು, ಆತನ ಸಹೋದರ ಸೋಮೇಶ್ ಪ್ರಸಾದ್ ಮತ್ತು ಇನ್ನೊಬ್ಬ ಆರೋಪಿ ಸುನಿಲ್ ಮಿತ್ತಲ್ ಅವರ ವಿರುದ್ಧದ ತನಿಖೆ ಇನ್ನೂ ಮುಕ್ತಾಯವಾಗಿಲ್ಲ ಎಂದು ಸಿಬಿಐ ತಿಳಿಸಿದೆ.
ಅಧಿಕಾರಿಗಳಿಗೆ ಕ್ಲೀನ್ ಚಿಟ್
ಈ ಪ್ರಕರಣದಲ್ಲಿ ಈಗಿನ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ (ರಾ) ಮುಖ್ಯಸ್ಥ ಸಮಂತ್ ಗೋಯೆಲ್ ವಿರುದ್ಧವೂ ಯಾವುದೇ ಆರೋಪ ದಾಖಲಿಸಿಲ್ಲ. ಮೊದಲು ಪ್ರಸಾದ್ ಸಹೋದರರೊಂದಿಗೆ ಅವರ ಹೆಸರು ಕೇಳಿಬಂದಿತ್ತು.
'ಈ ಪ್ರಕರಣದಲ್ಲಿ ಸಾರ್ವಜನಿಕ ಸೇವಕರ ಯಾವುದೇ ಪಾತ್ರದ ಬಗ್ಗೆ ತನಿಖೆಗಳು ಬಹಿರಂಗಪಡಿಸಿಲ್ಲ' ಎಂದು ಆಸ್ತಾನಾ ಮತ್ತು ದೇವೇಂದರ್ ಕುಮಾರ್ ಅವರಿಗೆ ಕ್ಲೀನ್ ಚಿಟ್ ನೀಡಿರುವುದರ ಕುರಿತು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿದೇಶದಿಂದ ಮಾಹಿತಿ
ಇನ್ನು ಖಾಸಗಿ ವ್ಯಕ್ತಿಗಳಲ್ಲಿ ಒಬ್ಬರ ವಿರುದ್ಧ ಆರೋಪ ನಿಗದಿ ಮಾಡಲಾಗಿದೆ. ಉಳಿದವರ ವಿರುದ್ಧ ತನಿಖೆ ಮುಂದುವರಿದಿದೆ. ಅವರ ವಿರುದ್ಧದ ಸಾಕ್ಷ್ಯಗಳನ್ನು ಕಲೆಹಾಕಲು ಕೆಲವು ವಿದೇಶಗಳಿಗೆ ಕಾನೂನಾತ್ಮಕ ಮಾಹಿತಿ ಕೋರಿದ್ದು, ಅವರಿಂದ ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ದುಬೈ ಹಾಗೂ ವಿವಿಧೆಡೆ ಇರುವ ಉದ್ಯಮಿಗಳೂ ಇದರಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಸಿಬಿಐ ವಿವಾದ: ರಾಕೇಶ್ ಅಸ್ಥಾನಾ ವಿರುದ್ಧದ ಕೇಸುಗಳೇ ನಾಪತ್ತೆ!
ಎರಡು ಬಾರಿ ವಿಸ್ತರಣೆ
ಆಸ್ತಾನಾ ಅವರು ಲಂಚ ನೀಡುವಂತೆ ಕೇಳಿರುವ ಅಥವಾ ಅವರಿಗೆ ಲಂಚ ನೀಡಿರುವುದನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ ಎಂದು ಸಿಬಿಐ ಹೇಳಿದೆ. ಕಳೆದ ವರ್ಷ ಮೇ 31ರಂದು ನ್ಯಾಯಾಲಯವು, ಈ ಪ್ರಕರಣದ ತನಿಖೆ ನಡೆಸಲು ನಾಲ್ಕು ತಿಂಗಳ ಸಮಯ ನೀಡಿತ್ತು. ಬಳಿಕ 2019ರ ಅಕ್ಟೋಬರ್ 9ರಂದು ಎರಡನೆಯ ಬಾರಿ ಗಡುವು ವಿಸ್ತರಣೆ ಮಾಡಿತ್ತು. ತನಿಖೆ ಪೂರ್ಣಗೊಳಿಸಲು ಮತ್ತೆ ಸಮಯ ವಿಸ್ತರಣೆ ಮಾಡುವುದಿಲ್ಲ ಎಂದು ತಿಳಿಸಿತ್ತು.
ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ಆಸ್ತಾನಾ
ತಮ್ಮ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದುಗೊಳಿಸುವಂತೆ ಆಸ್ತಾನಾ, ದೇವೇಂದರ್ ಕುಮಾರ್ ಮತ್ತು ಪ್ರಸಾದ್ ನ್ಯಾಯಾಲಯದ ಮೆಟ್ಟಿಲೇರಿದ್ದರು. 2019ರ ಜನವರಿಯಲ್ಲಿ ಅವರ ಅರ್ಜಿಯನ್ನು ವಜಾಗೊಳಿಸಿದ್ದ ಕೋರ್ಟ್, ಹತ್ತು ವಾರಗಳಲ್ಲಿ ಅವರ ವಿರುದ್ಧದ ತನಿಖೆ ಪೂರ್ಣಗೊಳ್ಳಬೇಕು ಎಂದು ಸೂಚಿಸಿತ್ತು.
ಸಿಬಿಐ ವಿವಾದ: ಇಷ್ಟು ದಿನ ಏನು ಮಾಡುತ್ತಿದ್ದಿರಿ? ಕೇಂದ್ರಕ್ಕೆ ಸುಪ್ರೀಂ ತರಾಟೆ
2.95 ಕೋಟಿ ರೂ ಲಂಚ
ಹವಾಲಾ ವ್ಯವಹಾರ ನಡೆಸಿದ ಆರೋಪ ಹೊತ್ತಿರುವ ಮೋಯಿನ್ ಖುರೇಷಿಗೆ ಕ್ಲೀನ್ ಚಿಟ್ ನೀಡಿ ಪ್ರಕರಣ ಕೈಬಿಡುವಂತೆ ಪ್ರಸಾದ್ ಸಹೋದರರ ಮೂಲಕ ಆಸ್ತಾನಾ ಅವರಿಗೆ 2.95 ಕೋಟಿ ರೂ ಲಂಚ ನೀಡಲಾಗಿತ್ತು ಎಂದು 2018ರ ಅ. 15ರಂದು ಸಿಬಿಐ ನಿರ್ದೇಶಕರಾಗಿದ್ದ ಅಲೋಕ್ ವರ್ಮಾ ಎಫ್ಐಆರ್ ದಾಖಲಿಸಿದ್ದರು. ಉದ್ಯಮಿ ಸತೀಶ್ ಸನಾ ಬಾಬು ಎಂಬುವವರು, ದುಬೈ ಮೂಲದ ಉದ್ಯಮಿ ಮನೋಜ್ ಪ್ರಸಾದ್ ಸಲಹೆಯಂತೆ ಹಣ ನೀಡಿದ್ದರು ಎಂದು ಆರೋಪಿಸಲಾಗಿದೆ. ಸತೀಶ್ ಅವರನ್ನು ಸಿಬಿಐ ಪ್ರಮುಖ ಸಾಕ್ಷಿಯನ್ನಾಗಿ ಹೆಸರಿಸಿತ್ತು.