ಭಾರತಕ್ಕೂ ಕಾಲಿಟ್ಟ ಐಸಿಸ್ ಭಯೋತ್ಪಾದನೆ, ಕಾಶ್ಮೀರದಲ್ಲಿ ಮೊದಲ ದಾಳಿ
ಕಾಶ್ಮೀರ, ನವೆಂಬರ್ 19: ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ದಾಳಿ ನಡೆಸಿರುವುದಾಗಿ ಭಯೋತ್ಪಾದಕ ಸಂಘಟನೆ ಐಸಿಸ್ ಹೇಳಿಕೊಂಡಿದೆ. ಶ್ರೀನಗರದಲ್ಲಿ ನಡೆದ ದಾಳಿಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದು ಇನ್ನೊಬ್ಬರು ಗಾಯಗೊಂಡಿದ್ದಾರೆ. ತನ್ನ ಸಂಘಟನೆಯೇ ಈ ದಾಳಿ ನಡೆಸಿದ್ದಾಗಿ ಐಸಿಸ್ ಮಾಧ್ಯಮ ಸಂಸ್ಥೆ ಅಮಾಕ್ ಹೇಳಿದೆ.
ವಿಷ ಹಾಕಿ, ಲಾರಿ ಹರಿಸಿ ಸಾಯಿಸುವ ಐಸಿಸ್ ನ ವಿಕೃತ ಯೋಜನೆ ಬಯಲು!
ಇದೊಂದು ಪ್ರಮುಖ ತಿರುವು ಎಂಬುದಾಗಿ ಗುಪ್ತಚರ ಇಲಾಖೆ ಅಧಿಕಾರಿಗಳು ವಿಶ್ಲೇಷಿಸಿದ್ದಾರೆ. ಕಣಿವೆ ರಾಜ್ಯದಲ್ಲಿ ತನ್ನ ಕಾರ್ಯಾಚರಣೆ ಆರಂಭಿಸುವುದಾಗಿ ಐಸಿಸ್ ಹೇಳುತ್ತಾ ಬಂದಿತ್ತು. ಐಸಿಸ್ ಮುಖ್ಯಸ್ಥ ಅಬುಬಕರ್ ಅಲ್ ಬಗ್ದಾದಿ ಗ್ಲೋಬಲ್ ಇಸ್ಲಾಮಿಕ್ ಕೌನ್ಸಿಲ್ ಬಗ್ಗೆ ಮಾತನಾಡುವಾಗ ಕಾಶ್ಮೀರ ಮತ್ತು ಗುಜರಾತ್ ಬಗ್ಗೆಯೂ ಮಾತನಾಡಿದ್ದ.
ಇದೀಗ ಮೊದಲ ದಾಳಿಯ ವಾರ್ತೆ ಬಂದಿದ್ದು, ಇದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದನ್ನು ಐಸಿಸ್ ನಿಜವಾಗಿಯೂ ನಡೆಸಿದೆಯಾ ಅಥವಾ ಹಿಜ್ಬುಲ್ ಮುಜಾಹಿದ್ದೀನ್ ತೊರೆದು ತನ್ನದೇ ಗುಂಪು ಕಟ್ಟಿಕೊಂಡಿರುವ ಝಾಕೀರ್ ಮೂಸಾ ಈ ದಾಳಿ ನಡೆಸಿದ್ದಾನಾ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಈ ಹಿಂದೆ ಹಲವು ಬಾರಿ ಕಾಶ್ಮೀರ ಕಣಿವೆಯಲ್ಲಿ ಐಸಿಸ್ ಧ್ವಜ ಪ್ರದರ್ಶನ ನಡೆದಿತ್ತು. ಕೆಲವು ದಾಳಿಗಳಿಗೂ ಯೋಜನೆ ರೂಪಿಸಲಾಗಿತ್ತು. ಆದರೆ ದಾಳಿ ನಡೆಸಿದ್ದೇವೆ ಎಂದು ಐಸಿಸ್ ಘೋಷಿಸಿಕೊಂಡಿದ್ದು ಮಾತ್ರ ಇದೇ ಮೊದಲು.