ರೈಲು ಪ್ರಯಾಣಿಕರ ಜೀವ ಉಳಿಸಿದ ಪುಟಾಣಿಗಳ ಸಾಹಸಗಾಥೆ
ಇಂದೋರ್, ಜನವರಿ 24: ಅಂದು ಮಧ್ಯಪ್ರದೇಶ ರಾಜ್ಯವಿಡೀ ಭಾಗಶಃ ಹೊತ್ತಿ ಉರಿದಿತ್ತು.
2018ರ ಏಪ್ರಿಲ್ 2ರಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಯ್ದೆಯ ತಿದ್ದುಪಡಿ ಪ್ರಸ್ತಾವನೆ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆದಿತ್ತು.
ರೊಚ್ಚಿಗೆದ್ದಿದ್ದ ಪ್ರತಿಭಟನಾಕಾರರು ಉತ್ತರ ಪ್ರದೇಶ-ಛತ್ತೀಸಗಢ ಎಕ್ಸ್ಪ್ರೆಸ್ ರೈಲನ್ನು ಅಡ್ಡಗಟ್ಟಿ ಮನಬಂದಂತೆ ಕಲ್ಲುತೂರಾಟ ನಡೆಸಿದ್ದರು. ಅದರೊಳಗಿದ್ದ ಪ್ರಯಾಣಿಕರು ಅಕ್ಷರಶಃ ಬಂಧಿಯಾಗಿದ್ದರು.
ಮೊರೆನಾ ನಿಲ್ದಾಣದದಿಂದ 200 ಮೀಟರ್ನಷ್ಟೇ ದೂರದ ಮನೆಯಲ್ಲಿದ್ದ ಅಣ್ಣ-ತಂಗಿ ಕಾರ್ತಿಕ್ ಗೋಯಲ್ (14) ಮತ್ತು ಆದ್ರಿಕಾ ಗೋಯಲ್ಗೆ (10) ರೈಲ್ವೆ ಪ್ರಯಾಣಿಕರ ಪರಿಸ್ಥಿತಿಯ ಅರಿವಾಗಿತ್ತು.
ಅವರಿಗೆ ಆ ಪ್ರತಿಭಟನೆಯ ಹಿಂದಿನ ರಾಜಕೀಯದ ಹಿನ್ನೆಲೆ ಗೊತ್ತಿರಲಿಲ್ಲ. ಹೊರಗಿನಿಂದ ಬೀಳುತ್ತಿದ್ದ ಕಲ್ಲೇಟುಗಳಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದ್ದ ರೈಲ್ವೆ ಪ್ರಯಾಣಿಕರು ಆಹಾರ, ನೀರಿಲ್ಲದೆ ಕಂಗಾಲಾಗಿದ್ದರು. ಇದು ಹೇಗೋ ಆ ಪುಟಾಣಿಗಳಿಗೆ ಅರ್ಥವಾಗಿತ್ತು.
ನೀರು ಆಹಾರ ತಂದುಕೊಟ್ಟರು
ಕೂಡಲೇ ಮನೆಯೊಳಗೆ ಓಡಿದ ಮಕ್ಕಳು ಮನೆಯಲ್ಲಿ ಸಿದ್ಧವಿದ್ದ ಆಹಾರ ಹಾಗೂ ನೀರನ್ನು ಹೊತ್ತುಕೊಂಡು ರೈಲಿನೊಳಗೆ ನುಗ್ಗಿ ಬಳಲಿದ್ದ ಪ್ರಯಾಣಿಕರಿಗೆ ಒದಗಿಸಿದರು.
ಈ ಮಕ್ಕಳಿಗೆ ಪ್ರಯಾಣಿಕರಿಗೆ ಸಹಾಯ ಮಾಡುವುದೊಂದೇ ಗುರಿಯಾಗಿತ್ತು. ಒಂದು ಬೋಗಿಯಿಂದ ಇನ್ನೊಂದಕ್ಕೆ ಓಡುತ್ತಿದ್ದರು. ಅತ್ತ ರೈಲಿನ ಮೇಲೆ ಪ್ರತಿಭಟನಾಕಾರರ ಕಲ್ಲೇಟುಗಳು ಆಗಾಗ ಬೀಳುತ್ತಲೇ ಇದ್ದವು.
ಈ ಮಕ್ಕಳ ಸಾಹಸದ ವಿಡಿಯೋ ಮತ್ತು ಫೋಟೊಗಳನ್ನು ಆಗಲೇ ಕೆಲವರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಅದನ್ನು ಕಂಡ ಸ್ಥಳೀಯರು ಅನೇಕರು ಅವರ ಜೊತೆಗೂಡಿ ಪ್ರಯಾಣಿಕರ ನೆರವಿಗೆ ಧಾವಿಸಿದರು.
ಈ ಅಣ್ಣ-ತಂಗಿಯ ಅಪ್ರತಿಮ ಸಾಹಸಕ್ಕೆ ಕೇಂದ್ರ ಸರ್ಕಾರದಿಂದ ಶೌರ್ಯ ಪ್ರಶಸ್ತಿ ದೊರಕಿದೆ. ಟೇಕ್ವೊಂಡೊ ಸಾಹಸ ಕ್ರೀಡೆಯಲ್ಲಿ ವಿಶ್ವದಾಖಲೆಯ ಬರೆದ ಹೆಗ್ಗಳಿಕೆ ಹೊಂದಿರುವ ಆದ್ರಿಕಾ, 'ಹೆಣ್ಣುಮಕ್ಕಳನ್ನು ರಕ್ಷಿಸಿ' ಆಂದೋಲನದ ರಾಯಭಾರಿಯೂ ಹೌದು. ಆಕೆಯ ಅಣ್ಣ ಅತಿ ಕಿರಿಯ ಚಿತ್ರಕಾರನಾಗಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾನೆ.
ಕುಂಟುತ್ತಲೇ 6 ಕಿಮೀ ಓಡಿ ರೈಲು ಅಪಘಾತ ತಪ್ಪಿಸಿದ ಉಡುಪಿಯ ಕೃಷ್ಣ ಪೂಜಾರಿ
|
ಆದ್ರಿಕಾಳ ಬದುಕೇ ಪ್ರೇರಣೆ
ಟೇಕ್ವೊಂಡೊ ಸಾಹಸ ಕ್ರೀಡೆಯಲ್ಲಿ ಸಾಧನೆ ಮಾಡಿರುವ ಆದ್ರಿಕಾಳ ಬದುಕು ಕೂಡ ಸ್ಫೂರ್ತಿದಾಯಕ. ಆಕೆಯ ಮಾನಸಿಕ ದೃಢತೆ, ಗಟ್ಟಿತನ ಎಂತಹವರಲ್ಲಿಯೂ ಅಚ್ಚರಿ ಮೂಡಿಸುತ್ತದೆ. ಒಂದು ಕಾಲದಲ್ಲಿ ಆಕೆಯ ಪರಿಸ್ಥಿತಿ ಹೀಗಿತ್ತೇ ಎಂಬ ಪ್ರಶ್ನೆ, ಕುತೂಹಲ ಮತ್ತು ಪ್ರೇರಣೆಯ ಅಂಶವೂ ಹೌದು.
ಆದ್ರಿಕಾ ವಾಸವಿದ್ದ ಮನೆಯಲ್ಲಿ ಒಮ್ಮೆ ಬೆಂಕಿ ಅವಘಡ ಸಂಭವಿಸಿತ್ತು. ತಪ್ಪಿಸಿಕೊಳ್ಳಲು ಯತ್ನಿಸಿದ್ದರೂ ಆದ್ರಿಕಾಳ ಎರಡೂ ಕಾಲುಗಳಿಗೆ ತೀವ್ರ ಗಾಯವಾಗಿತ್ತು. ಆಗ ಆಕೆಗೆ ಕೇವಲ ಆರು ವರ್ಷ.
ಈ ಘಟನೆ ಆಕೆಯನ್ನು ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಆಘಾತಕ್ಕೀಡುಮಾಡಿತ್ತು. ತನಗೆ ಸರಿಯಾಗಿ ನಡೆಯಲು ಸಾಧ್ಯವಾಗುತ್ತಿಲ್ಲ, ಕಾಲುಗಳು ಸುಟ್ಟುಹೋಗಿವೆ ಎಂದು ಆಕೆ ಖಿನ್ನತೆಗೆ ಜಾರುವ ಅಪಾಯವಿದೆ ಎಂಬುದು ವೈದ್ಯರ ಚಿಂತೆಯಾಗಿತ್ತು.
ಒಲಿದ ಶೌರ್ಯ ಪ್ರಶಸ್ತಿ
ನಾಲ್ಕು ವರ್ಷದ ಬಳಿಕ ಜನವರಿ 23ರ ಬುಧವಾರ ನಡೆದ ಶೌರ್ಯ ಪ್ರಶಸ್ತಿ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪ್ರಶಸ್ತಿ ಸ್ವೀಕರಿಸಲು ಅಣ್ಣ ಕಾರ್ತಿಕ್ ಜೊತೆ ಹೆಮ್ಮೆಯಿಂದ ಹೆಜ್ಜೆ ಹಾಕಿದ್ದಳು. ಆಕೆಯ ಮುಖದಲ್ಲಿ ನಗು ಅರಳಿತ್ತು. ಅದಕ್ಕೆ ಕಾರಣ ಆಕೆಯ ಛಲದ ಪ್ರಯತ್ನ.
ಆ ಭೀಕರ ಘಟನೆಯಿಂದ ಆದ್ರಿಕಾ ಮಾನಸಿಕ ಆಘಾತಕ್ಕೆ ಒಳಗಾಗಿದ್ದಳು. ವೈದ್ಯಕೀಯ ಚಿಕಿತ್ಸೆಗಳು ವಿಫಲವಾಗುತ್ತಿದ್ದವು. ಹೀಗೆಯೇ ಮುಂದುವರಿದರೆ ಆಕೆ ಮತ್ತೆ ನಡೆಯಲಾರಳು ಎಂದು ವೈದ್ಯರು ಎಚ್ಚರಿಸಿದ್ದರು.
|
ಖಿನ್ನತೆ ಆವರಿಸಿತ್ತು
'ಚಿಕಿತ್ಸೆ ನೀಡಿದ್ದರೂ ನನಗೆ ಸರಿಯಾಗಿ ನಿಲ್ಲಲು ಆಗುತ್ತಿರಲಿಲ್ಲ. ನನ್ನ ಸ್ಥಿತಿಯನ್ನು ಕಂಡು ಅನೇಕರು ಅನುಕಂಪ ವ್ಯಕ್ತಪಡಿಸುತ್ತಿದ್ದರು. ಇದರಿಂದ ನಾನು ಖಿನ್ನತೆಗೆ ಒಳಗಾಗಿದ್ದೆ' ಎಂದು ಆದ್ರಿಕಾ ನೆನಪಿಸಿಕೊಂಡಿದ್ದಾಳೆ.
ಯಾರದ್ದೋ ಸಲಹೆಯಂತೆ ಪೋಷಕರು ಆದ್ರಿಕಾಳನ್ನು ಟೇಕ್ವೊಂಡೊ ತರಗತಿಗೆ ಸೇರಿಸಿದರು. ವೈದ್ಯಕೀಯ ಚಿಕಿತ್ಸೆಗಳಿಂದ ಸಾಧ್ಯವಾಗದ ಪವಾಡ ಮಾರ್ಷಿಯಲ್ ಆರ್ಟ್ಸ್ ನಿಂದ ಸಾಧ್ಯ ಎಂಬ ಭರವಸೆ ಅವರಲ್ಲಿ ಮೂಡಿತ್ತು.
|
ಗೆದ್ದ ಆದ್ರಿಕಾ
ಅದೃಷ್ಟವಶಾತ್ ಟೇಕ್ವೊಂಡೊ ಕೆಲಸ ಮಾಡಿತು. ಆದ್ರಿಕಾಳಲ್ಲಿನ ಆತ್ಮವಿಶ್ವಾಸ ನಿಧಾನವಾಗಿ ಮರಳಿತು. ಆಕೆಯ ಕಾಲುಗಳು ಕಳೆದುಕೊಂಡಿದ್ದ ಸ್ವಾಧೀನವನ್ನು ಮರಳಿ ಪಡೆದುಕೊಂಡವು. ಅಲ್ಲಿಂದ ಮತ್ತೆ ಆಕೆ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ನಾಲ್ಕು ವರ್ಷದ ಬಳಿಕ ಮನೆಯ ಸಮೀಪವೇ ನಡೆದ ಘಟನೆಯಲ್ಲಿ ಅಣ್ಣನ ಜತೆಗೂಡಿ ರೈಲಿನಲ್ಲಿ ಸಿಲುಕಿದ್ದ ಪ್ರಯಾಣಿಕರಿಗೆ ಆಹಾರ, ನೀರು ಒದಗಿಸಿ ಸಾಹಸ ಮೆರೆದಳು.