ಪ್ರತಿಭಾವಂತ ಅಗರವಾಲ್ ನಿಂದ ಗೇಮಿಂಗ್ ಕೋಡ್ ಬಳಸಿ ರಹಸ್ಯ ರವಾನೆ
ನಾಗಪುರ, ಅಕ್ಟೋಬರ್ 09 : ಭಾರತದ ಕ್ಷಿಪಣಿ 'ಬ್ರಹ್ಮೋಸ್'ಗೆ ಸಂಬಂಧಿಸಿದಂತೆ ಅತ್ಯಂತ ರಹಸ್ಯ ತಾಂತ್ರಿಕ ಮಾಹಿತಿಯನ್ನು ಬಂಧಿತನಾಗಿರುವ ಡಿಆರ್ಡಿಓ ಸಿಬ್ಬಂದಿ ನಿಶಾಂತ್ ಅಗರವಾಲ್ ಐಸಿಸ್ ಉಗ್ರರಿಗೆ ಹೇಗೆ ಹಸ್ತಾಂತರಿಸುತ್ತಿದ್ದ ಎಂಬುದು ಚಿದಂಬರ ರಹಸ್ಯವಾಗಿದೆ.
ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ಭಯೋತ್ಪಾದನೆ ನಿಗ್ರಹ ದಳದವರು ಜಂಟಿ ಕಾರ್ಯಾಚರಣೆ ನಡೆಸಿ, ಬ್ರಹ್ಮೋಸ್ ಏರೋಸ್ಪೇಸ್ ಇಂಜಿನಿಯರ್ ನಿಶಾಂತ್ ಅಗರವಾಲ್ ಎಂಬಾತನನ್ನು ನಾಗಪುರದಲ್ಲಿ ಬಂಧಿಸಲಾಗಿದ್ದು, ಅಧಿಕೃತ ರಹಸ್ಯ ಕಾಯ್ದೆಯಡಿ ಆತನ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಅಗರವಾಲ್ ಬಳಿ ಬ್ರಹ್ಮೋಸ್ ಕ್ಷಿಪಣಿಗೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮವಾದ ಮಾಹಿತಿ ಇರುವುದು ಖಾತ್ರಿಯಾಗಿದೆ. ಜೊತೆಗೆ, ಫೇಸ್ ಬುಕ್ ನಲ್ಲಿ ಆತ ಪಾಕಿಸ್ತಾನಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದರ ಸಂಪೂರ್ಣ ವಿವರ ತಮಗೆ ದಕ್ಕಿದೆ ಎಂದು ತನಿಖೆ ನಡೆಸುತ್ತಿರುವ ಎಟಿಎಸ್ ಐಜಿ ಅಸೀಮ್ ಅರುಣ್ ಅವರು ಹೇಳಿದ್ದಾರೆ.
ಪಾಕಿಸ್ತಾನಕ್ಕೆ ಕ್ಷಿಪಣಿ ರಹಸ್ಯ ಮಾರಾಟ, ಡಿಆರ್ ಡಿಒ ಸಿಬ್ಬಂದಿ ಬಂಧನ
ತನಿಖೆಯಲ್ಲಿ 27 ವರ್ಷದ ಪ್ರತಿಭಾವಂತ ಇಂಜಿನಿಯರ್ ನನ್ನು ಮಹಿಳೆಯರಿಬ್ಬರು ಹನಿಟ್ರ್ಯಾಪ್ ಮಾಡಿ ಆತನಿಂದ ಫೇಸ್ ಬುಕ್ ಮೂಲಕ ರಕ್ಷಣಾ ಇಲಾಖೆಗೆ ಸೇರಿದೆ ಹಲವಾರು ರಹಸ್ಯ ಮಾಹಿತಿ ಪಡೆದುಕೊಂಡಿದ್ದಾರೆ. ದೇಶದ ವಿರುದ್ಧ ಬೇಹುಗಾರಿಕೆ ಮಾಡಿದ ಆರೋಪದ ಮೇಲೆ ಆತನನ್ನು ಸೋಮವಾರ ಬಂಧಿಸಲಾಗಿದೆ.
ಆತ ಈ ಜಾಲದಲ್ಲಿ ಸಿಲುಕಿದ್ದು ಹೇಗೆ? ಆತ ಹೇಗೆ ಮಹಿಳೆಯರಿಬ್ಬರ ಬಲೆಗೆ ಬಿದ್ದು, ದೇಶದ ರಕ್ಷಣೆಗೆ ಸಂಬಂಧಿಸಿದ ರಹಸ್ಯ ಮಾಹಿತಿಯನ್ನು ಪಾಕಿಸ್ತಾನದ ಐಸಿಸ್ ಉಗ್ರರಿಗೆ ರವಾನೆ ಮಾಡಿದ ಎಂಬುದು ನಿಜಕ್ಕೂ ಕುತೂಹಲಕಾರಿಯಾಗಿದೆ.
ಇದೆಲ್ಲ ಆರಂಭವಾಗಿದ್ದು ಹೇಗೆ?
ರಾಜಸ್ತಾನ ಮತ್ತು ಹರ್ಯಾಣ ಗಡಿಯಲ್ಲಿರುವ ಮೇವಾತ್ ಎಂಬಲ್ಲಿ ಗಡಿ ಭದ್ರತಾ ಪಡೆಯ ಜವಾನ ಅಚ್ಯುತಾನಂದ ಮಿಶ್ರಾ ಎಂಬಾತನ ಬಂಧನದೊಂದಿಗೆ ಈ ರಹಸ್ಯ ಕಾರ್ಯಾಚರಣೆಯ ಕಥೆ ಅನಾವರಣಗೊಳ್ಳುತ್ತಾ ಸಾಗಿದೆ. ತಾನು ಡಿಫೆನ್ಸ್ ವರದಿಗಾರ್ತಿ ಎಂದು ಹೇಳಿಕೊಂಡಿದ್ದ ಮಹಿಳೆಯೊಬ್ಬರಿಂದ ಆತ ಹನಿಟ್ರ್ಯಾಪ್ ಆಗಿದ್ದ. ಪೊಲೀಸ್ ಅಕಾಡೆಮಿಗೆ ಸಂಬಂಧಿಸಿದ ಮಹತ್ವದ ಮಾಹಿತಿಯನ್ನು ಆತ ಸೋರಿಕೆ ಮಾಡಲು ಆರಂಭಿಸಿದ್ದ. ಜವಾನ ಅಚ್ಯುತಾನಂದ ಮಿಶ್ರಾನನ್ನು ನೋಯ್ಡಾದಲ್ಲಿ ಬಂಧಿಸಲಾಗಿದೆ.
ಆತನ ವಿಚಾರಣೆ ನಡೆಸುವಾಗ ನಿಶಾಂತ್ ಅಗರವಾಲ್ ನ ಹೆಸರು ಬಹಿರಂಗವಾಗಿದೆ. ಇನ್ನೂ ಇಬ್ಬರು ಮಹಿಳೆಯರ ಫೇಸ್ ಬುಕ್ ಪ್ರೊಫೈಲ್ ಬಗ್ಗೆ ಪ್ರಸ್ತಾಪವಾಗಿದೆ. ಈ ಫೇಸ್ ಬುಕ್ ಪ್ರೊಫೈಲ್ ನ ಭಾಗವಾಗಿದ್ದು ಮತ್ತೊಬ್ಬ ಮಹಿಳೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದ. ಅಗರವಾಲ್ ನನ್ನು ಸಂಪರ್ಕಿಸಿದ ಈ ಮಹಿಳೆಯರಿಬ್ಬರು ಆತನಿಗೆ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದರು. ಅವೆರಡು ಐಪಿ ಅಡ್ರೆಸ್ ಗಳು ಪಾಕಿಸ್ತಾನಕ್ಕೆ ಸೇರಿದ್ದು ಎಂದು ಒನ್ಇಂಡಿಯಾಗೆ ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಇದೇ ತನಿಖೆಯಲ್ಲಿ ಇನ್ನಿಬ್ಬರ ಹೆಸರು ಕೂಡ ತಳಕು ಹಾಕಿಕೊಂಡಿದ್ದು, ಅವರ ವಿರುದ್ಧ ಬಲವಾದ ಸಾಕ್ಷ್ಯಗಳು ಇನ್ನೂ ಸಿಗದ ಕಾರಣ ಅವರ ಗುರುತನ್ನು ಬಹಿರಂಗ ಪಡಿಸಿಲ್ಲ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಈ ಜಾಲ ಇನ್ನೂ ದೊಡ್ಡದಾಗಿದ್ದು, ತನಿಖೆ ಮುಂದುವರಿದಂತೆ ಇನ್ನೂ ಹಲವಾರು ಹೆಸರುಗಳು ಕೇಳಿಬರುವ ಸಾಧ್ಯತೆ ಇದೆ ಎಂದು ಎಟಿಎಸ್ ಮೂಲಗಳು ತಿಳಿಸಿವೆೇ.
ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿ ಯಶಸ್ವಿ ಪರೀಕ್ಷೆ
ಅಗರವಾಲ್ ಬಳಿ ಸಿಕ್ಕಿದ್ದು ಏನು?
ನಿಶಾಂತ್ ಅಗರವಾಲ್ ನ ಲ್ಯಾಪ್ ಟಾಪ್ ನಲ್ಲಿ ರಕ್ಷಣಾ ಇಲಾಖೆ ಮತ್ತು ಭದ್ರತೆಗೆ ಸಂಬಂಧಿಸಿದ ಹಲವಾರು ಗುಪ್ತ ಮಾಹಿತಿ ಇರುವುದು ತಿಳಿದುಬಂದಿದೆ. ಎಷ್ಟು ಮಾಹಿತಿ ಸೋರಿಕೆಯಾಗಿದೆ ಎಂಬುದು ಇನ್ನೂ ತನಿಖೆಯಿಂದ ತಿಳಿದುಬರಬೇಕಾದರೂ, ಐಸಿಸಿ ಉಗ್ರರೊಂದಿಗೆ ಹಂಚಿಕೊಳ್ಳಲಾಗಿರುವ ಮಾಹಿತಿ ಮಾತ್ರ ಅತ್ಯಂತ ರಹಸ್ಯದ್ದು ಮತ್ತು ಮಹತ್ವದ್ದಾಗಿದೆ. ಇಂಥ ಮಾಹಿತಿ ಲ್ಯಾಪ್ ಟಾಪ್ ನಲ್ಲಿ ಏಕೆ ಇಡಲಾಗಿದೆ ಎಂಬ ಪ್ರಶ್ನೆಗೆ ಅಗರವಾಲ್ ತೃಪ್ತಿಕರವಾದ ಉತ್ತರ ನೀಡಿಲ್ಲ. ಆತ ಮಹಿಳೆಯರೊಂದಿಗೆ ಎರಡು ವರ್ಷಗಳಿಂದ ನಡೆಸಿರುವ ಸಂಭಾಷಣೆಯ ಅಧ್ಯಯನ ಕೈಗೊಳ್ಳಲಾಗಿದ್ದು, ಅದರಿಂದ ಈ ಮಾಹಿತಿ ಎಲ್ಲೆಲ್ಲಿ ತಲುಪಿಗೆ ಎಂಬುದು ತಿಳಿದುಬರಲಿದೆ.
ಸುಖೋಯ್ ಯುದ್ಧ ವಿಮಾನದಿಂದ ಬ್ರಹ್ಮೋಸ್ ಕ್ಷಿಪಣಿ ಯಶಸ್ವಿ ಉಡಾವಣೆ
ರಹಸ್ಯ ಮಾಹಿತಿ ರವಾನೆಗೆ ಕೋಡಿಂಗ್ ಗೇಮ್ ಬಳಕೆ
ನಾಗಪುರ ಮತ್ತು ಪಿಲಾನಿಯಲ್ಲಿ ಆತ ಬ್ರಹ್ಮೋಸ್ ಗೆ ಸಂಬಂಧಿಸಿದ ಹೊಸ ಪ್ರಾಜೆಕ್ಟ್ ನ ಸುಪರ್ವೈಸರ್ ಆಗಿ ಕೆಲಸ ಮಾಡುತ್ತಿದ್ದ. ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿ ಪಡಿಸುತ್ತಿದ್ದ ಹೊಸ ತಂತ್ರಜ್ಞಾನದ ಮಾಹಿತಿಯನ್ನು ಕೂಡ ಆತ ಉಗ್ರರೊಂದಿಗೆ ಹಂಚಿಕೊಂಡಿದ್ದಾನೆ. ಈ ರಹಸ್ಯ ಮಾಹಿತಿಯನ್ನು ಐಸಿಸ್ ಜೊತೆ ಮಾತ್ರವಲ್ಲ ಬೇರೊಂದಿ ವಿದೇಶಿ ಸಂಸ್ಥೆಯೊಂದಿಗೆ ಕೂಡ ಆತ ಹಂಚಿಕೊಂಡಿದ್ದಾನೆ. ಸೋಮವಾರ ಆತನ ಬಂಧನವಾಗುತ್ತಿದ್ದಂತೆ, ಆತ ಅಮೆರಿಕದ ಸಂಸ್ಥೆಯೊಂದಿಗೆ ಕೂಡ ಸಂಪರ್ಕದಲ್ಲಿರುವುದು ತಿಳಿದುಬಂದಿದೆ.
ಹಲವಾರು ರಹಸ್ಯ ಮಾಹಿತಿಗಳ ನಡುವೆ, ಸ್ವದೇಶದಲ್ಲಿ ನಿರ್ಮಾಣವಾಗಿರುವ ಸೂಪರ್ ಸಾನಿಕ್ ಕ್ರೂಸ್ ಮಿಸೈಲ್ ಬ್ರಹ್ಮೋಸ್ ಬಗ್ಗೆ ಪಾಕಿಸ್ತಾನದಲ್ಲಿರುವ ಉಗ್ರರೊಂದಿಗೆ ಹಂಚಿಕೊಂಡಿದ್ದಾನಾ ಎಂಬ ಬಗ್ಗೆ ದೃಢಪಡಿಸಿಕೊಳ್ಳುತ್ತಿದ್ದಾರೆ ತನಿಖಾಧಿಕಾರಿಗಳು. ಆತ ಈ ಮಾಹಿತಿಯನ್ನು ರಹಸ್ಯವಾಗಿ ರವಾನಿಸಲು ಕೋಡ್ ಇರುವಂಥ ಆಟವನ್ನು ಬಳಸಿಕೊಳ್ಳುತ್ತಿದ್ದ. ಆ ಗೇಮಿಂಗ್ ಕೋಡ್ ಅನ್ನು ಡಿಕೋಡ್ ಮಾಡಿದ ನಂತರ ಆತನ ಹಕೀಕತ್ತು ತಿಳಿದುಬರಲಿದೆ.
ನೆಲ್ಲೂರು ಮೂಲದ ವಿಜ್ಞಾನಿ ಡಿಅರ್ ಡಿಒ ಚೇರ್ಮನ್
ಅಗರವಾಲ್ ಬಗ್ಗೆ ಇನ್ನೂ ಏನೇನು ಮಾಹಿತಿಯಿದೆ?
ಆತ ಕುರುಕ್ಷೇತ್ರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಧ್ಯಯನ ಮಾಡಿದ್ದಾನೆ ಎಂಬ ಮಾಹಿತಿ ಫೇಸ್ ಬುಕ್ ಪುಟದಿಂದ ಲಭ್ಯವಾಗಿದೆ. ಐಐಟಿ ರೂರ್ಕಿಯಲ್ಲಿ ರಿಸರ್ಚ್ ಇಂಟರ್ನ್ ಆಗಿ ಕೂಡ ಕೆಲಸ ಮಾಡಿದ್ದ. ಬ್ರಹ್ಮೋಸ್ ಏರೋಸ್ಪೇಸ್ ನಲ್ಲಿ ನಿಶಾಂತ್ ಅಗರವಾಲ್ ಹೈಡ್ರಾಲಿಕ್ಸ್-ನ್ಯುಮ್ಯಾಟಿಕ್ಸ್ ಅಂಡ್ ವಾರ್ ಹೆಡ್ ಇಂಟಿಗ್ರೇಷನ್ (ಉತ್ಪಾದನಾ ವಿಭಾಗ) ನ ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದ.
ಸಿಸ್ಟೆಂಸ್, ರಿಸರ್ಚ್ ಮತ್ತು ಡೆವಲಪ್ಮೆಂಟ್ ಗ್ರೂಪ್, ಇಂಜಿನಿಯರುಗಳು, ತಾಂತ್ರಿಕ ವರ್ಗದವರು ಸೇರಿದಂತೆ 40 ಜನ ಆತನ ಕೈಕೆಳಗೆ ಕೆಲಸ ಮಾಡುತ್ತಿದ್ದರು. ಉತ್ತರಾಖಂಡದ ಮೂಲದವನಾದ 27 ವರ್ಷದ ನಿಶಾಂತ್ ಅಗರವಾಲ್ ಇತ್ತೀಚೆಗೆ 'ಯಂಗ್ ಸೈಂಟಿಸ್ಟ್ ಅವಾರ್ಡ್'ಗೆ ಕೂಡ ಭಾಜನನಾಗಿದ್ದ. ನಾಗಪುರದ ವರ್ಧಾ ರಸ್ತೆಯಲ್ಲಿ ಕಳೆದೊಂದು ವರ್ಷದಿಂದ ಬಾಡಿಗೆ ಮನೆಯಲ್ಲಿ ಇದ್ದ. ಕೇವಲ 2 ತಿಂಗಳ ಹಿಂದೆ ಮದುವೆಯಾಗಿದ್ದ ಅಗರವಾಲ್ ತನ್ನ ಹೆಂಡತಿಯೊಂದಿಗೆ ವಾಸವಿದ್ದ.