ಬ್ರಾಹ್ಮಣರು ಹುಟ್ಟಿನಿಂದಲೇ ಶ್ರೇಷ್ಠರು: ಸ್ಪೀಕರ್ ಓಂ ಬಿರ್ಲಾ
ನವದೆಹಲಿ, ಸೆಪ್ಟೆಂಬರ್ 11: 'ಬ್ರಾಹ್ಮಣರು ಹುಟ್ಟಿನಿಂದಲೇ ಶ್ರೇಷ್ಠರು. ಅವರ ತ್ಯಾಗ, ಶ್ರಮ ಮತ್ತು ಇತರೆ ಸಮುದಾಯಗಳಿಗೆ ನೀಡಿರುವ ಮಾರ್ಗದರ್ಶನದಿಂದಾಗಿ ಅವರು ಶ್ರೇಷ್ಠರಾಗಿದ್ದಾರೆ' ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.
ರಾಜಸ್ಥಾನದ ಕೋಟಾದಲ್ಲಿ ನಡೆದ ಅಖಿಲ ಬ್ರಾಹ್ಮಣ ಮಹಾಸಭಾ ಸಭೆಯಲ್ಲಿ ಮಾತನಾಡಿದ ಅವರು, 'ಬ್ರಾಹ್ಮಣ ಸಮುದಾಯವು ಯಾವಾಗಲೂ ಇತರೆ ಸಮುದಾಯದವರಿಗೆ ಮಾರ್ಗದರ್ಶನ ಮಾಡುವ ಕೆಲಸ ಮಾಡುತ್ತದೆ. ಮತ್ತು ಈ ಸಮುದಾಯವು ದೇಶದಲ್ಲಿ ಯಾವಾಗಲೂ ಮಾರ್ಗದರ್ಶಕ ಪಾತ್ರವನ್ನು ನಿರ್ವಹಿಸುತ್ತಿದೆ' ಎಂದು ಹೇಳಿದ್ದಾರೆ.
ಅಸ್ಪೃಶ್ಯತೆ ಶುರುವಾಗಿದ್ದು ಮುಸ್ಲಿಮರು ಬಂದ ಬಳಿಕ: ಆರೆಸ್ಸೆಸ್ ಮುಖಂಡ
ಬಿರ್ಲಾ ಅವರು ಇದೇ ಹೇಳಿಕೆಯನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿಯೂ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ತೀವ್ರ ಟೀಕೆಗಳು ವ್ಯಕ್ತವಾಗಿವೆ.
ಈಗಾಗಲೇ ಜಾತಿ ಪದ್ಧತಿ ಸಮಾಜದಲ್ಲಿ ಒಡಕನ್ನುಂಟು ಮಾಡುತ್ತಿದೆ. ಜಾತಿ ಪದ್ಧತಿಯನ್ನು ಅಳಿಸಿಹಾಕಬೇಕು ಎಂಬ ಪ್ರಯತ್ನಗಳಿಗೆ ಹಿನ್ನಡೆಯುಂಟುಮಾಡುವಂತೆ ಈ ರೀತಿಯ ಹೇಳಿಕೆಗಳನ್ನು ನೀಡಲಾಗುತ್ತಿದೆ. ಯಾವ ಜಾತಿಯೂ ಸರ್ವ ಶ್ರೇಷ್ಠವಾಗಲಾರದು. ಒಂದು ಸಮುದಾಯ ಶ್ರೇಷ್ಠ ಎನ್ನುವುದು ಜಾತಿವಾದಕ್ಕೆ ಪ್ರಚೋದನೆ ನೀಡಿದಂತೆಯೇ ಸರಿ. ಇದರಿಂದ ಸಾಮಾಜಿಕ ಸ್ವಾಸ್ಥ್ಯ ಮತ್ತಷ್ಟು ಹಾಳಾಗುತ್ತದೆ ಎಂದು ವಿರೋಧಿಸಲಾಗಿದೆ.
ಬ್ರಾಹ್ಮಣರ ಪಾತ್ರ ದೊಡ್ಡದು
'ಬ್ರಾಹ್ಮಣ ಸಮುದಾಯವು ಸಮಾಜದಲ್ಲಿ ಶಿಕ್ಷಣ ಮತ್ತು ಮೌಲ್ಯಗಳನ್ನು ಹರಡುವಲ್ಲಿ ಯಾವಾಗಲೂ ಪಾತ್ರ ವಹಿಸುತ್ತಿದೆ. ಇಂದು ಬ್ರಾಹ್ಮಣದ ಒಂದೇ ಒಂದು ಕುಟುಂಬ ಒಂದು ಹಳ್ಳಿ ಅಥವಾ ಪಾಳ್ಯದಲ್ಲಿ ಇದ್ದರೂ ಆ ಬ್ರಾಹ್ಮಣರ ಕುಟುಂಬವು ತಮ್ಮ ಬದ್ಧತೆ ಮತ್ತು ಸೇವೆಗಳ ಮೂಲಕ ಉನ್ನತ ಸ್ಥಾನ ಪಡೆದಿರುತ್ತದೆ. ಹೀಗಾಗಿ ಬ್ರಾಹ್ಮಣರು ತಮ್ಮ ಹುಟ್ಟಿನಿಂದಲೂ ಸಮಾಜದಲ್ಲಿ ಶ್ರೇಷ್ಠರಾಗಿರುತ್ತಾರೆ' ಎಂದು ಬಿರ್ಲಾ ಅಭಿಪ್ರಾಯಪಟ್ಟಿದ್ದಾರೆ.
ಸಂವಿಧಾನಕ್ಕೆ ವಿರುದ್ಧ
ಬಿರ್ಲಾ ಅವರು ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದುಕೊಳ್ಳುವಂತೆ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ರಾಜ್ಯಾಧ್ಯಕ್ಷೆ ಕವಿತಾ ಶ್ರೀವಾಸ್ತವ ಆಗ್ರಹಿಸಿದ್ದಾರೆ. ಯಾವುದೇ ಸಮುದಾಯವು ಶ್ರೇಷ್ಠ ಎಂದು ಹೇಳುವುದು ಸಂವಿಧಾನ 14ನೇ ವಿಧಿಗೆ ವಿರುದ್ಧವಾಗಿದೆ. ಅವರ ಹೇಳಿಕೆಯು ಇತರೆ ಜಾತಿಗಳನ್ನು ಕೀಳಾಗಿ ಕಂಡಂತೆ ಮತ್ತು ಜಾತೀಯತೆಯನ್ನು ಉತ್ತೇಜಿಸಿದಂತೆ ಆಗಿದೆ ಎಂದಿರುವ ಕವಿತಾ, ಇದರ ವಿರುದ್ಧ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
ಗುಂಡ್ಲುಪೇಟೆಯಲ್ಲಿ ದಲಿತರು ಬೌದ್ಧ ಧರ್ಮ ಸ್ವೀಕರಿಸಿದ್ದೇಕೆ?
ನಮ್ಮನ್ನು ಅಪಹಾಸ್ಯ ಮಾಡುವಂತಿದೆ
'ಭಾರತೀಯ ಜಾತಿ ವ್ಯವಸ್ಥೆಯನ್ನು ಸಂಭ್ರಮಿಸುವುದು ಖಂಡನಾರ್ಹ ಮಾತ್ರವಲ್ಲ, ಆಕ್ಷೇಪಾರ್ಹ ಕೂಡ. ಅವರಂತಹ ಜಾತಿವಾದಿ ಲೋಕಸಭೆ ಸ್ಪೀಕರ್ ಆಗಿರುವುದು ನಮ್ಮನ್ನು ಅಪಹಾಸ್ಯ ಮಾಡಿದಂತೆ ಆಗುತ್ತಿದೆ. ತಮ್ಮ ಈ ನಿಲುವಿಗೆ ಅವರು ಸಾರ್ವಜನಿಕವಾಗಿ ಕ್ಷಮೆ ಕೋರಬೇಕು. ಅಂತಹ ಜನರು ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಬೇಕೆಂದುಕೊಂಡಿರುವ ಸಂವಿಧಾನದ ಮೂಲಕವೇ ಪ್ರಮಾಣವಚನ ಸ್ವೀಕರಿಸಿರುವುದು ದುರಂತ ' ಎಂದು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಹೇಳಿದ್ದಾರೆ.
ಅಸಂಬದ್ಧ ಹೇಳಿಕೆ
ಸರ್, ನಾನೊಬ್ಬ ಬ್ರಾಹ್ಮಣ. ಆದರೆ ನೀವು ಹೇಳಿರುವುದು ಜಾತಿಯನ್ನು ಮತ್ತು ಜಾತಿ ವರ್ಗೀಕರಣಗಳನ್ನು ಶಾಶ್ವತವಾಗಿರಿಸುವ ಅಸಂಬದ್ಧ ಹಾಗೂ ಇನ್ನೊಂದು ಜಾತಿಯ ಮೇಲೆ ಮತ್ತೊಂದು ಜಾತಿಯ ಹಿಡಿತವನ್ನು ಸಮರ್ಥಿಸುವಂತಿದೆ. ಇದು ಕಾಲಕ್ಕೆ ವಿರುದ್ಧವಾದುದು. ಇದು ಸಮಾಜವನ್ನು ಒಡೆಯುವ ಮತ್ತು ಜಾತಿ ಹಿಂಸಾಚಾರವನ್ನು ಉತ್ತೇಜಿಸುವಂತಿದೆ ಎಂದು ಸಂಜಯ್ ಝಾ ಖಂಡಿಸಿದ್ದಾರೆ.
ಜನಿವಾರ ಧರಿಸುವ ನಿಮ್ಮ ಮನೆಯಲ್ಲಿ ಏಸುವಿನ ಶಿಲುಬೆ ಏಕೆ? ಮಾಧವನ್ ಖಡಕ್ ಉತ್ತರ ಹೀಗಿತ್ತು!