ಆಲೂಗಡ್ಡೆ ಬೆಳೆದ ರೈತರನ್ನು ಕೋರ್ಟಿಗೆಳೆದ ಪೆಪ್ಸಿಕೋ ಬಹಿಷ್ಕಾರಕ್ಕೆ ಅಭಿಯಾನ
ಅಹಮದಾಬಾದ್, ಏಪ್ರಿಲ್ 26: ತಮಗೆ ಅರಿಯದೆ ಮಾಡಿದ ತಪ್ಪಿಗೆ ಗುಜರಾತ್ನ ಕೆಲವು ರೈತರು ಕೋರ್ಟ್ ಮೆಟ್ಟಿಲೇರುವಂತಾಗಿದೆ. ಕೇವಲ ಐದಾರು ಎಕರೆ ಜಮೀನು ಹೊಂದಿರುವ ಈ ರೈತರು ಮಾಡಿದ ತಪ್ಪು ಅನುಮತಿಯಿಲ್ಲದೆ ಬೇರೆ ತಳಿಯ ಅಲೂಗಡ್ಡೆ ಬೆಳೆದಿದ್ದು. ಅದಕ್ಕೆ ಪ್ರತಿಯೊಬ್ಬರೂ ತೆರಬೇಕಾಗಿರುವ ದಂಡ ಬರೋಬ್ಬರಿ 1.05 ಕೋಟಿ ರೂ.
ಈ ರೈತರನ್ನು ಕೋರ್ಟ್ಗೆ ಎಳೆದಿರುವುದು ದೈತ್ಯ ಕಂಪೆನಿ ಪೆಪ್ಸಿಕೋ. ಮೊದಲೇ ಸಂಕಷ್ಟದಲ್ಲಿರುವ ರೈತರಿಗೆ ಆಘಾತ ಉಂಟುಮಾಡಿರುವ ಕಂಪೆನಿ ವಿರುದ್ಧ ರೈತ ಪರ ಮನಸ್ಸುಗಳು ಸಿಡಿದೆದ್ದಿವೆ. ರೈತರನ್ನು ಉಳಿಸಲು ಪೆಪ್ಸಿಕೋ ಮತ್ತು ಲೇಸ್ ಬಹಿಷ್ಕರಿಸಿ ಎಂಬ ಅಭಿಯಾನ ಆರಂಭಿಸಿದ್ದಾರೆ.
#WeDontWantThisJunk #BoycottPepsi #BoycottLays #StandWithFarmers #UnitedForOurselves ಎಂಬ ಹ್ಯಾಷ್ಟ್ಯಾಗ್ ಬಳಸಿ ಟ್ವಿಟ್ಟರ್, ಫೇಸ್ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಆಂದೋಲನ ಆರಂಭಿಸಲಾಗಿದೆ. ಭಾರತೀಯ ಕುಲಾಂತರಿ ವಿರೋಧಿ ಮೈತ್ರಿಕೂಟ ಈ ಅಭಿಯಾನದ ನೇತೃತ್ವ ವಹಿಸಿದೆ. ಇದಕ್ಕೆ ಅನೇಕ ರೈತ ಸಂಘಟನೆಗಳು ಕೈಜೋಡಿಸಿದ್ದು, ಪೆಪ್ಸಿಕೋದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಒತ್ತಾಯಿಸಿವೆ.
12 ವರ್ಷ ಬಳಿಕ ಪೆಪ್ಸಿಕೋಗೆ 'ಸಿಇಒ' ಇಂದ್ರಾ ನೂಯಿ ಗುಡ್ ಬೈ!
ನಮ್ಮ ನೆಲ ಮತ್ತು ನೀರನ್ನು ಬಳಸಿಕೊಂಡು ಪೆಪ್ಸಿಕೋ ನಮಗೆ ವಿಷವುಣಿಸುತ್ತಿದೆ. ಅದರ ಜತೆಗೆ ನಮ್ಮದೇ ಬಡ ರೈತರ ಮೇಲೆ ಪ್ರಹಾರ ನಡೆಸುತ್ತಿದೆ. ಹೀಗಾಗಿ ಅದರ ಎಲ್ಲ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂದು ಆಗ್ರಹಿಸಿದ್ದಾರೆ.
ಆಗಿರುವುದು ಏನು?
ಗುಜರಾತ್ನ ಅಹ್ಮದಾಬಾದ್ನ ಕೆಲವು ಸಣ್ಣ ರೈತರು ತಮ್ಮ ಬಳಿ ಇರುವ 3-4 ಎಕರೆ ಜಮೀನಿನಲ್ಲಿ ಆಲೂಗಡ್ಡೆ ಬೆಳೆದಿದ್ದರು. ಇವರಲ್ಲಿ ನಾಲ್ಕು ಮಂದಿಯ ವಿರುದ್ಧ ಈ ತಿಂಗಳ ಆರಂಭದಲ್ಲಿ ಪೆಪ್ಸಿಕೋ ದಾವೆ ಹೂಡಿತ್ತು. ಈ ರೈತರು ಬೆಳೆದು, ಮಾರಾಟ ಮಾಡಿದ ಆಲೂಗಡ್ಡೆ ತನ್ನ 'ಲೇಸ್' ಉತ್ಪನ್ನಕ್ಕೆ ಬಳಸುವ ಪೇಟೆಂಟ್ ಹೊಂದಿರುವ ತಳಿಯಾಗಿದೆ. ತನ್ನ ಬಳಿ ಇರುವ ಪೇಟೆಂಟ್ ತಳಿಯ ಅಲೂಗಡ್ಡೆಯನ್ನು ಬೆಳೆದಿರುವುದಕ್ಕೆ ಉಂಟಾದ ನಷ್ಟವನ್ನು ಭರಿಸಲು ರೈತರು ತಲಾ 1.05 ಕೋಟಿ ರೂ. ಪರಿಹಾರ ನೀಡಬೇಕು ಎಂದು ಅದು ವಾದಿಸಿದೆ.
ತಮಿಳುನಾಡಿನಲ್ಲಿ ಪೆಪ್ಸಿ, ಕೋಕಾಕೋಲಾಗೆ ನಿಷೇಧ
ಪೆಪ್ಸಿಕೋ ವಿರುದ್ಧ ಆಕ್ರೋಶ
ಮೊದಲೇ ಸಂಕಷ್ಟದಲ್ಲಿರುವ ರೈತರ ಮೇಲೆ ವಿದೇಶಿ ಕಂಪೆನಿಯೊಂದು ಈ ರೀತಿ ದಾಳಿ ಮಾಡಿರುವುದು ಕೃಷಿ ವಲಯದಲ್ಲಿ ತೀವ್ರ ಆಘಾತ ಮೂಡಿಸಿದೆ. ಬಡ ರೈತರ ಮೇಲೆ ಆರ್ಥಿಕ ಹೊರೆ ಹೇರಲು ಮುಂದಾಗಿರುವ ಪೆಪ್ಸಿಕೋ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಇದರ ಉತ್ಪನ್ನಗಳನ್ನು ನಿಷೇಧಿಸುವಂತೆ ಅಭಿಯಾನ ಆರಂಭಿಸಲಾಗಿದೆ. ಈ ಅಭಿಯಾನಕ್ಕೆ ರೈತರು ಮಾತ್ರವಲ್ಲದೆ, ವಿವಿಧ ಸಂಘಟನೆಗಳ ಕಾರ್ಯಕರ್ತರು, ಹೋರಾಟಗಾರರು ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಸರ್ಕಾರದ ಹಸ್ತಕ್ಷೇಪಕ್ಕೆ ಆಗ್ರಹಿಸಿದ್ದಾರೆ.
|
ನೀರಿಗೂ ದಾವೆ ಹೂಡದಿದ್ದರೆ ಸಾಕು
ಲೇಸ್ ಚಿಪ್ಸ್ಗಳಲ್ಲಿ ಬಳಸುವ ಆಲೂಗಡ್ಡೆ ತಳಿಯನ್ನು ಬೆಳೆಯುವ ತನ್ನ ಹಕ್ಕಿಗೆ ಧಕ್ಕೆ ತಂದಿರುವುದಕ್ಕೆ ಪೆಪ್ಸಿಕೋ ನಾಲ್ವರು ಗುಜರಾತಿ ರೈತರು 1.05 ಕೋಟಿ ರೂ ನೀಡುವಂತೆ ದಾವೆ ಹೂಡಿದೆ. ಪೆಪ್ಸಿಯಲ್ಲಿ ಬಳಸಿದ ಇದೇ ನೆಲದ ನೀರನ್ನು ಬಳಸುತ್ತಿರುವುದಕ್ಕೆ ಜನರ ಮೇಲೆ ಪೆಪ್ಸಿಕೋ ದಾವೆ ಹೂಡಲಾರದು ಎಂದು ಆಶಿಸೋಣ ಎಂದು ರವಿ ನಾಯರ್ ಎಂಬುವವರು ಹೇಳಿದ್ದಾರೆ.
|
ರೈತರು ಬೇಕೇ ವಿನಾ, ವಿಷವಲ್ಲ
ಬೈ ಬೈ ಪೆಪ್ಸಿ. ನಮಗೆ ನಮ್ಮ ರೈತರು ಮತ್ತು ಅವರ ಒಳಿತು ಮುಖ್ಯವೇ ಹೊರತು ನಿಮ್ಮ ವಿಷವಲ್ಲ. ನಿಮ್ಮ ಗಂಟುಮೂಟೆ ಕಟ್ಟಿ ತೊಲಗಿ ಎಂದು ಮಾನ್ಸಿ ಸಿಂಗ್ ಎಂಬುವವರು ಟ್ವೀಟ್ ಮಾಡಿದ್ದಾರೆ.
|
ಹಾಸ್ಯಾಸ್ಪದ
ಆಲೂಗಡ್ಡೆ ಬೆಳೆದಿರುವುದಕ್ಕೆ ತಲಾ ಒಂದು ಕೋಟಿ ರೂ. ದಾವೆ! ಪೆಪ್ಸಿ ಇಂಡಿಯಾ ಬಿಲಿಯನ್ ಸಂಪಾದಿಸಲು ನಮ್ಮ ಜನ ಸಂಪನ್ಮೂಲವನ್ನು, ನಮ್ಮ ಭೂಮಿಯನ್ನು ಮತ್ತು ನಮ್ಮ ಜನರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಬಳಿಕ ಹಾಸ್ಯಾಸ್ಪದ ದಾವೆಗಳ ಮೂಲಕ ನಮ್ಮ ಜನರನ್ನೇ ಕಾನೂನು ಸಮರಕ್ಕೆ ಸಿಲುಕಿಸುತ್ತಿದೆ ಎಂದು ಮೀತ್ ಗೋಯಲ್ ಎಂಬುವವರು ಕಿಡಿಕಾರಿದ್ದಾರೆ.