ದೆಹಲಿ, ಉತ್ತರಪ್ರದೇಶದಲ್ಲಿ ಸಿಕ್ಕಿಬಿದ್ದ ಉಗ್ರರ ಗುಂಪು ಮಾಡಿದ್ದು ಅಂಥಿಂಥ ಪ್ಲಾನಾ!
ನವದೆಹಲಿ, ಡಿಸೆಂಬರ್ 26: ದೆಹಲಿ, ಉತ್ತರಪ್ರದೇಶದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ಬುಧವಾರ ನಡೆಸಿದ ಕಾರ್ಯಾಚರಣೆ ಇಷ್ಟು ದೊಡ್ಡ ಪ್ರಮಾಣದ ರಹಸ್ಯ ಕಾರ್ಯಾಚರಣೆಯನ್ನು ಬಯಲಿಗೆ ಎಳೆಯುತ್ತದೆ ಎಂಬ ಅಂದಾಜೇ ಇದ್ದಿರಲಿಲ್ಲ. ಹತ್ತು ಶಂಕಿತ ಉಗ್ರರನ್ನು ಬಂಧಿಸಿದ್ದು, ಅದರಲ್ಲಿ ಹರ್ಕತ್-ಉಲ್-ಹರ್ಬ್-ಇ-ಇಸ್ಲಾಮ್ ನ ಮಾಸ್ಟರ್ ಮೈಡ್ ಸಹ ಇದ್ದಾನೆ.
ಜಮ್ಮು-ಕಾಶ್ಮೀರದಲ್ಲಿ 6 ಉಗ್ರರನ್ನು ಬಲಿಹಾಕಿದ ಭಾರತೀಯ ಸೇನೆ
ಅಷ್ಟೇ ಅಲ್ಲ, ಪ್ರವಚನಕಾರ ಹಾಗೂ ಸಿವಿಲ್ ಎಂಜಿನಿಯರ್ ಮತ್ತು ಕಾಲೇಜು ವಿದ್ಯಾರ್ಥಿ ಸಹ ಇದ್ದಾನೆ ಎಂಬ ಸಂಗತಿ ಬಯಲಾಗಿದೆ. ಈ ಗ್ಯಾಂಗ್ ನ ಮುನ್ನಡೆಸುತ್ತಿದ್ದವನ ಹೆಸರು ಮುಫ್ತಿ ಸೊಹೇಲ್. ಆತ ದೆಹಲಿಯಲ್ಲೇ ವಾಸಿಸುತ್ತಿದ್ದ. ಮೂಲತಃ ಉತ್ತರಪ್ರದೇಶದವನಾದ ಸೊಹೇಲ್, ದೆಹಲಿಯಲ್ಲಿ ಮಸೀದಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.
ಈ ಅಪಾಯಕಾರಿ ಗುಂಪಿನಿಂದ ದೊರೆತಿರುವ ಮಾಹಿತಿ ಪ್ರಕಾರ, ಇವರ ಗುರಿ ರಾಜಕಾರಣಿಗಳೇ ಆಗಿದ್ದರು. ಆ ನಂತರ ಮುಖ್ಯವಾದ ವ್ಯಕ್ತಿಗಳ ಹತ್ಯೆ ಮತ್ತು ಭದ್ರತಾ ವ್ಯವಸ್ಥೆಯನ್ನು ನಾಶಪಡಿಸುವ ಉದ್ದೇಶ ಹೊಂದಿದ್ದರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯ ಐಜಿ ಅಲೋಕ್ ಮಿತ್ತಲ್ ಮಾಹಿತಿ ನೀಡಿದ್ದಾರೆ.
ಕಟ್ಟರ್ ಮೂಲಭೂತವಾದಿಗಳು
ಈ ಶಂಕಿತರು ಕಟ್ಟರ್ ಮೂಲಭೂತವಾದಿಗಳಾದಿದ್ದು, ಈ ಭಯೋತ್ಪಾದನಾ ಮಾದರಿಯು ಕಳೆದ ನಾಲ್ಕು ತಿಂಗಳಿಂದ ಕಾರ್ಯಾಚರಣೆ ಆರಂಭಿಸಿತ್ತು. ಆತ್ಮಹತ್ಯಾ ದಾಳಿ ಹಾಗೂ ರಿಮೋಟ್ ಕಂಟ್ರೋಲ್ಡ್ ಬಾಂಬ್ ಸ್ಫೋಟವನ್ನು ಕೂಡ ಈ ಗುಂಪು ಯೋಜಿಸಿತ್ತು ಎಂದು ತಿಳಿದುಬಂದಿದೆ.
ಇಪ್ಪತ್ತೈದು ಕೇಜಿ ರಾಸಾಯನಿಕ ವಸ್ತು ಪತ್ತೆ
ಈ ಗುಂಪಿನಿಂದ ದೇಶಿ ನಿರ್ಮಿತ ರಾಕೆಟ್ ಲಾಂಚರ್, ಹನ್ನೆರಡು ಪಿಸ್ಟಲ್, ಸ್ಫೋಟಕ ತಯಾರಿಸಲು ಬಳಸುವ ಇಪ್ಪತ್ತೈದು ಕೇಜಿ ರಾಸಾಯನಿಕ ವಸ್ತು, ಆತ್ಮಹತ್ಯಾ ದಾಳಿಗೆ ಬಳಸುವ ಬೆಲ್ಟ್, ಟೈಮರ್ ಬಾಂಬ್ ಗಾಗಿ ಬಳಸುವ ನೂರು ಅಲಾರ್ಮ್ ಗಡಿಯಾರ, ರಿಮೋಟ್ ಡಿಟೋನೇಷನ್ ಗಾಗಿ ಬಳಸಲು ನೂರಕ್ಕೂ ಹೆಚ್ಚು ಮೊಬೈಲ್ ಫೋನ್ ಗಳು ಮತ್ತು ನೂರಾ ಮೂವತ್ತೈದು ಸಿಮ್ ಕಾರ್ಡ್ಸ್ ವಶಕ್ಕೆ ಪಡೆಯಲಾಗಿದೆ.
ದೇಶಿ ನಿರ್ಮಿತ ರಾಕೆಟ್ ಲಾಂಚರ್ ವಶಕ್ಕೆ
ದೆಹಲಿಯ ಸೀಲಮ್ ಪುರ್, ಉತ್ತರಪ್ರದೇಶದ ಅಮ್ರೋಹ್, ಹಾಪುರ್, ಮೀರತ್ ಹಾಗೂ ಲಖನೌನಲ್ಲಿ ಶೋಧ ಕಾರ್ಯಾಚರಣೆ ಭಾರೀ ದೊಡ್ಡ ಮಟ್ಟದಲ್ಲಿ ನಡೆದಿದೆ. ದೊಡ್ಡ ಪ್ರಮಾಣದಲ್ಲಿ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಶಸ್ತ್ರಾಸ್ತ್ರಗಳು, ನಾಡ ಪಿಸ್ತೂಲ್, ದೇಶಿ ನಿರ್ಮಿತ ರಾಕೆಟ್ ಲಾಂಚರ್ ವಶಪಡಿಸಿಕೊಳ್ಳಲಾಗಿದೆ ಎಂದು ಮಿತ್ತಲ್ ತಿಳಿಸಿದ್ದಾರೆ.
ವಿದೇಶದಲ್ಲಿ ಕೂತ ವ್ಯಕ್ತಿಯಿಂದ ಸಲಹೆ-ಸೂಚನೆ
ಇಡೀ ಯೋಜನೆಗೆ ವಿದೇಶದಲ್ಲಿ ಕೂತ ವ್ಯಕ್ತಿಯೊಬ್ಬ ಸಲಹೆ-ಸೂಚನೆ, ಸಹಾಯ ನೀಡುತ್ತಿರುವುದು ಗೊತ್ತಾಗಿದೆ. ಆದರೆ ಆರಾ ಗುರುತು ಪತ್ತೆಯಾಗಬೇಕಿದೆ. ಶಂಕಿತರು ತಮ್ಮ ಮಧ್ಯದ ಸಂದೇಶಗಳ ರವಾನೆ ಹಾಗೂ ಸ್ವೀಕಾರಕ್ಕೆ ವಾಟ್ಸ್ ಆಫ್ ಹಾಗೂ ಟೆಲಿಗ್ರಾಮ್ ನಂಥ ಅಪ್ಲಿಕೇಷನ್ ಗಳನ್ನು ಬಳಕೆ ಮಾಡುತ್ತಿದ್ದದ್ದು ತಿಳಿದುಬಂದಿದೆ.