ಟೂಲ್ ಕಿಟ್ ಪ್ರಕರಣ; ಶಂತನುಗೆ ನಿರೀಕ್ಷಣಾ ಜಾಮೀನು ನೀಡಿದ ಕೋರ್ಟ್
ನವದೆಹಲಿ, ಫೆಬ್ರುವರಿ 16: ಗ್ರೆಟಾ ಥನ್ಬರ್ಗ್ ಟ್ವಿಟ್ಟರ್ ಟೂಲ್ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ನ ಔರಂಗಾಬಾದ್ ಪೀಠ ಮಂಗಳವಾರ ಪರಿಸರ ಕಾರ್ಯಕರ್ತ ಶಂತನು ಮುಲುಕ್ ಅವರಿಗೆ 10 ದಿನಗಳ ಅವಧಿ ನಿರೀಕ್ಷಣಾ ಜಾಮೀನು ನೀಡಿದೆ.
ಗ್ರೆಟಾ ಥನ್ಬರ್ಗ್ ಹಂಚಿಕೊಂಡ ಟೂಲ್ಕಿಟ್ನಲ್ಲಿನ ವಿವರಗಳಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದೆಹಲಿ ನ್ಯಾಯಾಲಯ ಹೊರಡಿಸಿದ್ದ ಜಾಮೀನುರಹಿತ ವಾರಂಟ್ ವಿರುದ್ಧ ಶಂತನು ಮುಲುಕ್ ಸೋಮವಾರ ಬಾಂಬೆ ಹೈಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನಿಗೆ ಮನವಿ ಸಲ್ಲಿಸಿದ್ದರು. ಮಂಗಳವಾರ ಈ ಅರ್ಜಿ ವಿಚಾರಣೆ ನಡೆಸಿದ ವಿಭಾ ಕಂಕನವಾಡಿ ಅವರು ಮಂಗಳವಾರ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ.
ಟೂಲ್ ಕಿಟ್ ಟ್ವೀಟ್ ಅಳಿಸಿ ಹಾಕಲು ಗ್ರೆಟಾಗೆ ಹೇಳಿದ್ದೇ ದಿಶಾ ರವಿ; ದೆಹಲಿ ಪೊಲೀಸರು
ಶಂತನು ಪರಿಸರ ಸಂಬಂಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಎಕ್ಸ್ಆರ್ ಇಂಡಿಯಾದ ಸಂಸ್ಥಾಪಕರಾಗಿದ್ದು, ಕೃಷಿ ಕಾಯ್ದೆ ವಿರುದ್ಧ ರೈತರ ಪ್ರತಿಭಟನೆ ಸೂಕ್ತ ರೀತಿ ನಡೆಯಲು ಮತ್ತು ಶಾಂತಿಯುತವಾಗಿ ಸಾಗುವಂತೆ ಎಕ್ಸ್ಆರ್ ಮೀಡಿಯಾ ಮಾಹಿತಿ ರವಾನಿಸುವ ವೇದಿಕೆ ಸೃಷ್ಟಿಸಿತ್ತು ಎಂದು ಅವರು ಹೇಳಿದ್ದರು. ಟೂಲ್ ಕಿಟ್ ಪ್ರಕರಣದಲ್ಲಿ ನಮ್ಮನ್ನು ದೇಶದ್ರೋಹಿ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ದೂರಿದ್ದರು.
ತಮ್ಮ ಮೂಲ ಪಟ್ಟಣ ಬೀಡ್ನಲ್ಲಿ ದೆಹಲಿ ಪೊಲೀಸರು ಕಳೆದ ಮೂರು ದಿನಗಳಿಂದ ಬೀಡುಬಿಟ್ಟಿದ್ದು, ಸೂಕ್ತ ಪ್ರಕ್ರಿಯೆ ಅನುಸರಿಸದೇ ನಮ್ಮ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂದು ಆರೋಪಿಸಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ನಾನು ಹಾಗೂ ನನ್ನ ಸಹವರ್ತಿಗಳು ನಿರ್ದೋಷಿಗಳು. ಸುಮ್ಮನೆ ನಮ್ಮನ್ನು ಪ್ರಕರಣದಲ್ಲಿ ಎಳೆದು ತರಲಾಗುತ್ತಿದೆ ಎಂದು ಆಕ್ಷೇಪಿಸಿದ್ದರು.
ಟೂಲ್ ಕಿಟ್ ರಚನೆಗೆ ಸಂಬಂಧಿಸಿದಂತೆ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿ ವಕೀಲೆ ನಿಖಿತಾ ಜೇಕಬ್ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ಬುಧವಾರ ನಡೆಯಲಿದೆ.