ಪ್ರಶಸ್ತಿ ಹಿಂದಿರುಗಿಸುತ್ತಿರುವವರಿಗೆ ವಿದ್ಯಾ ಬಾಲನ್ ಟಾಂಗ್ ನೀಡಿದ್ದು ಹೀಗೆ
ನವದೆಹಲಿ, ಮುಂಬೈ ಅ 30: ಪ್ರಶಸ್ತಿ ಹಿಂದಿರುಗಿಸುತ್ತಿರುವ ದೇಶದ ಸಾಹಿತಿಗಳಿಗೆ, ನಿರ್ಮಾಪಕರಿಗೆ ರಾಷ್ಟ್ರಪಶಸ್ತಿ ವಿಜೇತ ನಟಿ ವಿದ್ಯಾ ಬಾಲನ್ ತನ್ನ ಖಡಕ್ ನಿರ್ಧಾರದ ಮೂಲಕ ಸಂದೇಶ ರವಾನಿಸಿದ್ದಾರೆ.
ನನಗೆ ಪ್ರಶಸ್ತಿ ಸಿಕ್ಕಿರುವುದು ನನ್ನ ದೇಶದಿಂದಲೇ ಹೊರತು, ಯಾವುದೇ ಸರಕಾರದಿಂದಲ್ಲ. ಹಾಗಾಗಿ, ಪ್ರಶಸ್ತಿ ಹಿಂದಿರುಗುಸುವ ಯಾವ ಯೋಜನೆಯೂ ನನಗಿಲ್ಲ ಎಂದು ವಿದ್ಯಾ ಬಾಲನ್ ಹೇಳಿದ್ದಾರೆ.
ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಘಟನೆಗಳು ಮತ್ತು ಎಫ್ಟಿಐಐ ಮುಖ್ಯಸ್ಥರ ನೇಮಕಾತಿ ವಿಚಾರದಲ್ಲಿ ಕೇಂದ್ರ ಸರಕಾರದ ನಿರ್ಧಾರದ ವಿರುದ್ದ ಸಾಹಿತಿಗಳು, ವಿಜ್ಞಾನಿಗಳು ಮತ್ತು ನಿರ್ಮಾಪಕರು ರಾಷ್ಟ್ರೀಯ ಪ್ರಶಸ್ತಿಗಳನ್ನು ವಾಪಸ್ ಮಾಡುತ್ತಿದ್ದಾರೆ. (ನಾಡಿನ ಸಾಹಿತಿಗಳಿಗೆ 6 ಪ್ರಶ್ನೆಗಳು)
ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಿದ್ದ ವಿದ್ಯಾ ಬಾಲನ್, ನನ್ನ ದೇಶ ನನಗೆ ಪ್ರಶಸ್ತಿ ನೀಡಿದೆಯೇ ಹೊರತು ಯಾವುದೇ ಸರಕಾರವಲ್ಲ, ನಾನು ಕೇಂದ್ರ ಸರಕಾರಕ್ಕೆ ಪ್ರಶಸ್ತಿ ಹಿಂದಿರುಗಿಸುವುದಿಲ್ಲ ಎಂದಿದ್ದಾರೆ.
ಗಲ್ಲಾಪೆಟ್ಟಿಗೆಯನ್ನು ಲೂಟಿ ಹೊಡೆದಿದ್ದ 'ದಿ ಡರ್ಟಿ ಪಿಚ್ಚರ್' ಚಿತ್ರದ ನಟನೆಗಾಗಿ 2012ರಲ್ಲಿ ವಿದ್ಯಾ ಬಾಲನ್ ಗೆ ರಾಷ್ಟ್ರ ಪ್ರಶಸ್ತಿ ಬಂದಿತ್ತು. ಎಫ್ಟಿಐಐ ವಿಚಾರದಲ್ಲಿ 140ದಿನದಿಂದ ವಿದ್ಯಾರ್ಥಿಗಳು ನಡೆಸುತ್ತಿದ್ದ ಧರಣಿ ಕಳೆದ ಬುಧವಾರ (ಅ 28) ಅಂತ್ಯಗೊಂಡಿತ್ತು.
ವಿದ್ಯಾರ್ಥಿಗಳ ಧರಣಿ ಅಂತ್ಯಗೊಂಡ ನಂತರ ಹನ್ನೆರಡಕ್ಕೂ ಹೆಚ್ಚು ಚಿತ್ರ ನಿರ್ಮಾಪಕರು ಪ್ರತಿಭಟನೆಯನ್ನು ಮುಂದುವರಿಸಿಕೊಂಡು ಹೋಗಲು ನಿರ್ಧರಿಸಿದ್ದಾರೆ.
ಕೇಂದ್ರ ಸರಕಾರಕ್ಕೆ ಪ್ರಶಸ್ತಿ ಹಿಂದಿರುಗಿಸಿದ ಪ್ರಮುಖ ನಿರ್ಮಾಪಕ/ನಿರ್ದೇಶಕರ ಪಟ್ಟಿ ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.. (ಮಾಹಿತಿ : ಇಂಡಿಯನ್ ಎಕ್ಸ್ ಪ್ರೆಸ್)
ವಿದ್ಯಾ ಬಾಲನ್
ಕೇರಳ ಪಾಲಕ್ಕಾಡ್ ನಲ್ಲಿ ಜನಿಸಿದ ವಿದ್ಯಾ ಬಾಲನ್ ಗೆ ಡರ್ಟಿ ಪಿಚ್ಚರ್ ಚಿತ್ರದಲ್ಲಿನ ಅಭಿನಯಕ್ಕಾಗಿ 2011ರಲ್ಲಿ ಅತ್ಯುತ್ತಮ ನಟಿ (ರಾಷ್ಟ್ರ ಪ್ರಶಸ್ತಿ) ಲಭಿಸಿತ್ತು. ಇದಲ್ಲದೆ, ಐದು ಫಿಲಂಫೇರ್ ಮತ್ತು ಸ್ಕ್ರೀನ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಜೊತೆಗೆ ಪದ್ಮ ಪ್ರಶಸ್ತಿಯನ್ನೂ ವಿದ್ಯಾ ಬಾಲನ್ ಪಡೆದಿದ್ದಾರೆ.
ದಿಬಾಕರ್ ಬ್ಯಾನರ್ಜಿ
ದಿಬಾಕರ್ ಬ್ಯಾನರ್ಜಿ ಪ್ರೊಡಕ್ಷನ್ ಎನ್ನುವ ಹೆಸರಿನಲ್ಲಿ ಸ್ವಂತ ನಿರ್ಮಾಣ ಕಂಪೆನಿಯನ್ನು ಹೊಂದಿರುವ ನಿರ್ಮಾಪಕ ದಿಬಾಕರ್ ಬ್ಯಾನರ್ಜಿ, ಕೋಸ್ಲಾ ಕಾ ಗೋಸ್ಲಾ, ಲವ್ ಸೆಕ್ಸ್ ಆರ್ ಧೋಖಾ ಮುಂತಾದ ಚಿತ್ರವನ್ನು ನಿರ್ಮಿಸಿದ್ದರು. 2007 ಮತ್ತು 2009ರಲ್ಲಿ ಇವರಿಗೆ ಎರಡು ಪ್ರಶಸ್ತಿ ಲಭಿಸಿತ್ತು.
ಆನಂದ್ ಪಟ್ವರ್ಧನ್
ಡಾಕ್ಯುಮೆಂಟರಿ ಚಿತ್ರ ನಿರ್ಮಾಪಕ, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಆನಂದ್ ಪಟ್ವರ್ಧನ್, ನರ್ಮದಾ ಡೈರಿ, ವಾರ್ ಎಂಡ್ ಪೀಸ್ ಮುಂತಾದ ಚಿತ್ರವನ್ನು ನಿರ್ಮಿಸಿದ್ದಾರೆ. ಪಟ್ವರ್ಧನ್ ಕಟ್ಟಾ ಹಿಂದುತ್ವ ವಿರೋಧಿ. ವಿ ಶಾಂತಾರಾಂ ಪ್ರಶಸ್ತಿ ಸೇರಿದಂತೆ ಹಲವು ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಇವರು ಪಡೆದಿದ್ದಾರೆ.
ನಿಶಿತಾ ಜೈನ್
ಗುಲಾಬಿ ಗ್ಯಾಂಗ್ ಎನ್ನುವ ಡಾಕ್ಯುಮೆಂಟರಿ ಮೂಲಕ ಹೆಸರು ಪಡೆದಿರುವ ನಿಶಿತಾ ಜೈನ್, ಎಟ್ ಮೈ ಡೋರ್ ಸ್ಟೆಪ್, ಲಕ್ಷ್ಮೀ ಎಂಡ್ ಮಿ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಭಾರತ, ಸ್ಪೈನ್, ಯುಕೆ ಮುಂತಾದ ದೇಶಗಳ ಪ್ರಶಸ್ತಿಯನ್ನು ನಿಶಿತಾ ಪಡೆದಿದ್ದಾರೆ.
ರಾಕೇಶ್ ಶರ್ಮಾ
ಮುಂಬೈನಲ್ಲಿ ವಾಸವಾಗಿರುವ ಡಾಕ್ಯುಮೆಂಟರಿ ಫಿಲ್ಮ್ ಮೇಕರ್. ಗುಜರಾತ್ ಗಲಭೆಯ ಬಗ್ಗೆ ಫೈನಲ್ ಸೊಲ್ಯೂಷನ್ ಎನ್ನುವ ಸಿನಿಮಾವನ್ನು ನಿರ್ಮಿಸಿದ್ದರು. ಬರ್ಲಿನ್ ಅಂತರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ ಈ ಸಿನಿಮಾಕ್ಕೆ ಎರಡು ಪ್ರಶಸ್ತಿ ಲಭಿಸಿತ್ತು. ಇದಲ್ಲದೇ ರಾಷ್ಟ್ರೀಯ ಚಿತ್ರ ಪ್ರಶಸ್ತಿಯನ್ನೂ ಪಡೆದಿತ್ತು.
ಹರ್ಷವರ್ಧನ್ ಕುಲ್ಕರ್ಣಿ
ಹಸೀ ತೋ ಪಸಿ, ಹಂಟರರ್ ಮುಂತಾದ ಚಿತ್ರವನ್ನು ನಿರ್ಮಿಸಿರುವ ಹರ್ಷವರ್ಧನ್ ಕುಲ್ಕರ್ಣಿ ಅತ್ಯುತ್ತಮ ಪ್ರಮೋಷನಲ್, ಅತ್ಯುತ್ತಮ ಸಂಭಾಷಣೆ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಗಳಿಸಿದ್ದರು.
ಹರಿ ನಾಯರ್
ಕೇರಳ ಮೂಲದ ಹರಿ ನಾಯರ್ ಸಿನಿಮಾಟೋಗ್ರಾಫರ್. 1994ರಲ್ಲಿ (ಸ್ವಾತಂ) ಮತ್ತು 1997ರಲ್ಲಿ (ಎನ್ನ ಸ್ವಾತಂ ಜಾನಕೀಕುಟ್ಟಿ) ಚಿತ್ರದ ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ಇವರಿಗೆ ಪ್ರಶಸ್ತಿ ಲಭಿಸಿತ್ತು.
ಕೃತಿ ನಖ್ವಾ
2000ರಲ್ಲಿ ಬಿಡುಗಡೆಯಾದ ಲಾಸ್ಟ್ ಎಂಡ್ ಫೌಂಡ್ ಕೃತಿ ನಖ್ವಾ ನಿರ್ಮಿಸಿದ ಮೊದಲ ಚಿತ್ರ. ಇವರು ಪಡೆದ ಪ್ರಶಸ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.
ಲಿಪಿಕಾ ಸಿಂಗ್ ದರಾಯಿ
ಒರಿಸ್ಸಾ ಮೂಲದ ಲಿಪಿಕಾ ಸಿಂಗ್ ಅವರಿಗೆ 61ನೇ ರಾಷ್ಟ್ರೀಯ ಪ್ರಶಸ್ತಿ ಲಭಿಸಿತ್ತು. ಕಂಕೀ ಓ ಸಾಪೋ ಎನ್ನುವ ಒರಿಯಾ ಚಿತ್ರದ ಉತ್ತಮ ನಿರೂಪಣೆ ವಿಭಾಗದಲ್ಲಿ ಇವರಿಗೆ ಪ್ರಶಸ್ತಿ ಲಭಿಸಿತ್ತು. ಇತರ ಇಬ್ಬರು ಪ್ರಮುಖ ಚಿತ್ರ ನಿರ್ಮಾಪಕರು/ನಿರ್ದೇಶಕರೆಂದರೆ ಇಂದ್ರನೀಲ್ ಲಾಹಿರಿ ಮತ್ತು ಪರೇಶ್ ಕಾಂದಾರ್ (ಚಿತ್ರದಲ್ಲಿ ಲಿಪಿಕಾ ಸಿಂಗ್)