ನಾನಾ ಪಾಟೇಕರ್ ನಮ್ಮ ರಾಜಕಾರಣಿಗಳಿಗೆ ಮಾದರಿಯಾಗಲಿ
ಸಮಾಜಸೇವೆ ಮಾಡಲು ಜನಪ್ರತಿನಿಧಿಗಳಾಗಬೇಕಾಗಿಲ್ಲ, ಸಚಿವರಾಗಬೇಕಾಗಿಲ್ಲ, ನಿಗಮ ಮಂಡಳಿ ಅಧ್ಯಕ್ಷರಾಗಬೇಕೆಂದೂ ಇಲ್ಲ. ಸಮಾಜಸೇವೆ ಮಾಡಲು ಮೊದಲು ಬೇಕಾಗಿರುವುದು ಮನಸ್ಸು ಎನ್ನುವುದನ್ನು ಬಾಲಿವುಡ್ ನಟ ನಾನಾ ಪಟೇಕರ್ ತೋರಿಸಿಕೊಟ್ಟಿದ್ದಾರೆ.
ಚಿತ್ರನಟನೆಂದರೆ ಅವನಿಗೆ ಒಂದಿಷ್ಟು ಅಭಿಮಾನಿಗಳು ಹಾಗೂ ಅಭಿಮಾನಿ ಸಂಘಗಳು ಇರುವುದು ಸಾಮಾನ್ಯ. ಅವರು ಹೋದಲ್ಲಿ ಬಂದಲ್ಲಿ ಮಾಧ್ಯಮದವರು ಬೆನ್ನು ಹತ್ತುತ್ತಾರೆ, ಅಲ್ಲದೇ ಅವರ ಮನೆಯಲ್ಲಿ ನಾಯಿ , ಮರಿ ಇಟ್ಟರೂ ಅದು ದೊಡ್ಡ ಸುದ್ಧಿಯಾಗುತ್ತದೆ. (ಮಕ್ಕಳ ಆರೈಕೆ ಕೇಂದ್ರಗಳತ್ತ ಫ್ಲಿಪ್ ಕಾರ್ಟ್ ಚಿತ್ತ)
ಆದರೆ ಇಂತಹ ಪ್ರಚಾರಗಳಿಂದ ದೂರ ಉಳಿದು ಸರಳ ಜೀವನ ನಡೆಸಿ, ಸಮಾಜಸೇವೆ ಮಾಡುತ್ತಿರುವ ಬಾಲಿವುಡ್ ನಟ ನಾನಾ ಪಾಟೇಕರ್ ಪ್ರಮುಖವಾಗಿ ರಾಜಕಾರಣಿಗಳಿಗೆ ಆದರ್ಶಪ್ರಾಯರಾಗಿದ್ದಾರೆ. ಸದ್ದಿಲ್ಲದೇ ಸಮಾಜಸೇವೆಯಲ್ಲಿ ತೊಡಗಿರುವ ನಾನಾ, ತನ್ನ ಕೈಲಾದ ಮಟ್ಟಿಗೆ ನೊಂದ ಜೀವಗಳಿಗೆ ಸಾಂತ್ವನ ನೀಡುತ್ತಿದ್ದಾರೆ.
ತಿಂಗಳಿಗೆ ಕೇವಲ 35 ರೂಪಾಯಿಗಳಿಗೆ ಸಿನಿಮಾ ಪೋಸ್ಟರ್, ಚಿತ್ರ ಬಿಡಿಸುವ, ರಸ್ತೆಯ ವಿಭಜಕಗಳಿಗೆ ಮತ್ತು ಝೀಬ್ರಾ ಕ್ರಾಸಿಂಗ್ ಗಳಿಗೆ ಬಣ್ಣ ಬಳಿಯುವ ವೃತ್ತಿ ಮಾಡುತ್ತಿದ್ದ ನಾನಾ, ತದನಂತರ ತನ್ನ ಅದ್ಭುತ ಪ್ರತಿಭೆಯಿಂದಾಗಿ ಬಾಲಿವುಡ್ ಅಂಗಳಕ್ಕೆ ಕಾಲಿರಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.
ಇವರು ನಟನೆಯ ಮೂಲಕ ಅತ್ಯಧಿಕ ಅಭಿಮಾನಿಗಳನ್ನು ಹೊಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ, ಇದರ ಜೊತೆಗೆ ತನ್ನ ಸಾಮಾಜಿಕ ಕಾರ್ಯಗಳ ಮೂಲಕ ಇನ್ನಷ್ಟು ಅಭಿಮಾನಿಗಳನ್ನು ಹೆಚ್ಚಿಸಿಕೊಂಡಿದ್ದಾರೆ.
ಬಾಲಿವುಡ್ ಚಿತ್ರೋದ್ಯಮದ ಗಣ್ಯಾತಿಗಣ್ಯರು ಇಂದು ಅದ್ದೂರಿ ಜೀವನ ನಡೆಸುತ್ತಿರುವಾಗ, ನಾನಾ ಮಾತ್ರ ತನ್ನ ತಾಯಿಯ ಜೊತೆ 1ಬಿಎಚ್ಕೆ ಫ್ಲ್ಯಾಟ್ ನಲ್ಲಿ ಜೀವನ ನಡೆಸುತ್ತಿದ್ದಾರೆ. ಅವರಿಗೆ ವೈಭವಯುತ ಜೀವನ ನಡೆಸುವುದು ಕಷ್ಟವೇನಲ್ಲ, ಆದರೆ ದುಂದುವೆಚ್ಚ ಮಾಡದೇ ಬಡವರ ಏಳಿಗೆಗಾಗಿ ಶ್ರಮಿಸುವ ಪಣತೊಟ್ಟಿರುವುದು ಶ್ಲಾಘನೀಯ.
ನಾನಾ ಅವರಿಂದ ಜನಮೆಚ್ಚುವ ಕೆಲಸ
ಖ್ಯಾತ ನಟನಾಗಿದ್ದರೂ ಇವರ ಬಳಿ ಸ್ವಂತ ಕಾರು ಕೂಡಾ ಇಲ್ಲ ಎಂದರೆ ನಂಬಲೇ ಬೇಕು. ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತಿದ್ದ ರೈತರ ಬಗ್ಗೆ ರಾಜಕಾರಣಿಗಳು ಬರಿಯ ಆಶ್ವಾಸನೆ ಹಾಗೂ ಮೊಸಳೆ ಕಣ್ಣೀರು ಸುರಿಸುತಿದ್ದರೆ, ನಾನಾ ಮಾತ್ರ ಜನರು ಮತ್ತು ದೇವರು ಮೆಚ್ಚುವ ಕೆಲಸವನ್ನು ಮಾಡುತ್ತಿದ್ದಾರೆ.
ಆತ್ಮಹತ್ಯೆಗೆ ಶರಣಾದ ರೈತರ ಮನೆಗಳಿಗೆ ಭೇಟಿ
ಮಹಾರಾಷ್ಟ್ರದಲ್ಲಿ ಆತ್ಮಹತ್ಯೆಗೆ ಶರಣಾದ 62 ರೈತರ ಮನೆಗಳಿಗೆ ಭೇಟಿ ನೀಡಿ ನಾನಾ, ತಲಾ 15 ಸಾವಿರ ರೂಪಾಯಿಗಳನ್ನು ಪ್ರತೀ ಮನೆಗೆ ಈಗಾಗಲೇ ಹಂಚಿದ್ದಾರೆ. ಜೊತೆಗೆ, ಉಳಿದ 112 ಮನೆಗಳಿಗೆ ಭೇಟಿ ನೀಡಿ ರೈತರಿಗೆ ಸಾಂತ್ವನ ಹೇಳಿ ಆತ್ಮಹತ್ಯೆ ಮಾಡದಂತೆ ತಡೆದು ಧೈರ್ಯ ತುಂಬಿ ಬಂದಿದ್ದಾರೆ. ಜೊತೆಗೆ, ಮಂತ್ರಿಗಳಿಗೆ ಮನವಿಪತ್ರ ನೀಡಿ ಪರಿಹಾರ ಕಾರ್ಯ ಚುರುಕುಗೊಳ್ಳುವಂತೆ ನೋಡಿ ಕೊಂಡಿದ್ದಾರೆ.
ರೈತರ ಪತ್ನಿಯರಿಗೆ ಹೊಲಿಗೆ ಯಂತ್ರ
ನಮ್ಮಲ್ಲಿರುವ ಮಾನವತ್ವದ ಜಾಗೃತಿಗಾಗಿ ನಾವು ಇಂತಹ ಸಮಾಜಸೇವೆಗಳನ್ನು ಮಾಡಲೇಬೇಕು. ನಾನು ಇದನ್ನು ನನಗಾಗಿ ಮಾಡುತ್ತಿಲ್ಲ ಬದಲಿಗೆ ನಮಗೆಲ್ಲರಿಗಾಗಿ ಮಾಡುತ್ತಿರುವೆ, ಬನ್ನಿ ನಾವೆಲ್ಲಾ ಒಟ್ಟು ಸೇರಿ ಸಮಾಜಸೇವೆ ಮಾಡೋಣ ಎಂದು ಹೇಳುವ ನಾನಾ, ರೈತರ ಪತ್ನಿಯರಿಗೆ ಹೊಲಿಗೆ ಯಂತ್ರ ಉಚಿತವಾಗಿ ಒದಗಿಸಿ ಅವರ ಕುಟುಂಬದ ರಕ್ಷಣೆಗೆ ಮುಂದಾಗಿದ್ದಾರೆ .
ಹಳ್ಳಿಗಳನ್ನು ದತ್ತುಪಡೆದ ನಾನಾ
ಹಲವು ಹಳ್ಳಿಗಳನ್ನು ದತ್ತುಪಡೆದು ಅವುಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ನಾನಾ, ಬಾಲಿವುಡ್ ಚಿತ್ರ 'ಪ್ರಹಾರ್, ದಿ ಫೈನಲ್ ಅಟ್ಯಾಕ್' ಎಂಬ ಚಿತ್ರದಲ್ಲಿ ಸೇನಾ ಆಫಿಸರ್ ಪಾತ್ರ ನಿರ್ವಹಣೆಯಲ್ಲಿ ನೈಜತೆ ಬರಬೇಕೆಂಬ ಉದ್ದೇಶದಿಂದ ಸೇನೆಯಲ್ಲಿ ಮೂರು ವರ್ಷಗಳ ತರಬೇತಿ ಕೂಡಾ ಪಡೆದಿದ್ದರು. ಹಾಗಾಗಿ, ಇವರು ಸೇನೆಯ ಕ್ಯಾಪ್ಟನ್ ಶ್ರೇಯಾಂಕ ಕೂಡಾ ಹೊಂದಿದ್ದಾರೆ .
22 ಕೋಟಿ ಮೊತ್ತ ಸಂಗ್ರಹ
ನಾನಾ ಪ್ರಾರಂಭಿಸಿದ ಚಾರಿಟಿ ಸಂಸ್ಥೆಗೆ ನಾಗರೀಕರಿಂದ ಇದುವರೆಗೆ 22 ಕೋಟಿ ರೂಪಾಯಿ ಮೊತ್ತ ಸಂಗ್ರಹವಾಗಿದೆ. ಇದಲ್ಲದೇ ನಾನಾ, ತನ್ನ 30 ವರ್ಷದ ದುಡಿಮೆಯ 95% ಭಾಗವನ್ನು ಚಾರಿಟಿ ಸಂಸ್ಥೆಗೆ ನೀಡಿದ್ದಾರೆ. ಸಂಗ್ರಹವಾದ ಮೊತ್ತದಿಂದ ರೈತರ ಭೂಮಿಗೆ ನೀರಿನ ವ್ಯವಸ್ಥೆ ಮಾಡುವ ಗುರಿಯನ್ನು ನಾನಾ ಹೊಂದಿದ್ದಾರೆ.