ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿ: ಅಭಿಮಾನಿಗಳಿಗೆ ಅಕ್ಷಯ್ ಕುಮಾರ್ ಕರೆ
ನವದೆಹಲಿ, ಜನವರಿ 18: ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ದೇಣಿಗೆ ನೀಡುವಂತೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ. ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ರಾಮಮಂದಿರ ನಿರ್ಮಾಣಕ್ಕೆ ಸಿದ್ಧತೆಗಳು ನಡೆದಿವೆ. ಈಗಾಗಲೇ ಅನೇಕರು ದೇಣಿಗೆ ಸಂಗ್ರಹ ಅಭಿಯಾನ ಆರಂಭಿಸಿದ್ದು, ಅದಕ್ಕೆ ಅಕ್ಷಯ್ ಕುಮಾರ್ ಕೂಡ ಕೈಜೋಡಿಸಿದ್ದಾರೆ.
'ಅಯೋಧ್ಯಾದಲ್ಲಿ ನಮ್ಮ ಭವ್ಯ ಶ್ರೀರಾಮ ದೇವಾಲಯ ನಿರ್ಮಾಣ ಕಾರ್ಯ ಶುರುವಾಗಿರುವುದು ಸಂತಸದ ಸಂಗತಿ. ಈಗ ಅದಕ್ಕೆ ಕಾಣಿಕೆ ಸಲ್ಲಿಸುವುದು ನಮ್ಮ ಸರದಿ. ನಾನು ಆರಂಭಿಸಿದ್ದೇನೆ. ನೀವೂ ಕೈಜೋಡಿಸುತ್ತೀರಿ ಎಂದು ಭಾವಿಸಿದ್ದೇನೆ. ಜೈ ಶ್ರೀರಾಮ್' ಎಂದು ಅಕ್ಷಯ್ ಕುಮಾರ್ ವಿಡಿಯೋದೊಂದಿಗೆ ಟ್ವೀಟ್ ಮಾಡಿದ್ದಾರೆ.
ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ರಾಷ್ಟ್ರಪತಿಯಿಂದ ಮೊದಲ ದೇಣಿಗೆ
ಅಯೋಧ್ಯಾದಲ್ಲಿ ಜನವರಿ 26ರ ಗಣರಾಜ್ಯೋತ್ಸವ ದಿನದಂದು ಮೂರು ಗಿಡಗಳನ್ನು ನೆಡುವ ಹಾಗೂ ತ್ರಿವರ್ಣ ದ್ವಜ ಹಾರಿಸುವ ಮೂಲಕ ಮಸೀದಿ ನಿರ್ಮಾಣ ಕಾರ್ಯ ಕೂಡ ಆರಂಭವಾಗಲಿದೆ. ರಾಮಮಂದಿರ ನಿರ್ಮಾಣವಾಗುವ ಸ್ಥಳದಿಂದ 25 ಕಿಮೀ ದೂರದಲ್ಲಿನ ಐದು ಎಕರೆ ಪ್ರದೇಶದಲ್ಲಿ ಬೆಳಿಗ್ಗೆ 8.30ಕ್ಕೆ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಷನ್ (ಐಐಸಿಎಫ್) ಮಸೀದಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಿದೆ.
ಈ ನಡುವೆ ಅಯೋಧ್ಯಾ ರಾಮಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಣಾ ಜಾಥಾದ ವೇಳೆ ಎರಡು ಸಮುದಾಯಗಳ ಗುಂಪಿನ ನಡುವೆ ಹಿಂಸಾಚಾರ ಸಂಭವಿಸಿದ ಘಟನೆ ಗುಜರಾತ್ನ ಕಚ್ ಜಿಲ್ಲೆಯ ಗಾಂಧಿಧಾಮ ಎಂಬಲ್ಲಿ ಭಾನುವಾರ ನಡೆದಿದೆ.
ರಾಮ ಮಂದಿರ ನಿರ್ಮಾಣಕ್ಕಾಗಿ ಜ.15ರಿಂದ ದೇಣಿಗೆ ಸಂಗ್ರಹ ಅಭಿಯಾನ
ಮೊದಲ ಸಂಘರ್ಷ ಸದಾವು ಎಂಬ ಗ್ರಾಮದಲ್ಲಿ ನಡೆದಿತ್ತು. ಬಳಿಕ ಕಿಡಾನಾ ಗ್ರಾಮದಲ್ಲಿ ಕೂಡ ಇದೇ ಸ್ಥಿತಿ ಉಂಟಾಯಿತು. ಸಮೀಪದ ಗಾಂಧಿಧಾಮದಲ್ಲಿ ಜಾಥಾ ತೆರಳುವಾಗ ಪರಿಸ್ಥಿತಿ ಉದ್ವಿಗ್ನವಾಯಿತು. ವಿಎಚ್ಪಿ ಆಯೋಜಿಸಿದ್ದ ಜಾಥಾದಲ್ಲಿ ಉಂಟಾದ ಜಗಳ ಮಾರಾಮಾರಿಗೆ ಕಾರಣವಾಗಿದೆ. ಪೊಲೀಸರ ಮೇಲೆ ಕಲ್ಲುತೂರಾಟ ನಡೆದಿದೆ. ಈ ಗ್ರಾಮಗಳಲ್ಲಿ ಪೊಲೀಸ್ ಪಡೆ ನೆಲೆಯೂರಿದ್ದು, ಸೆಕ್ಷನ್ 144 ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.