ಬೋಫೋರ್ಸ್ ಪ್ರಕರಣ ಮರು ತನಿಖೆಗೆ ಮುಂದಾದ ಸಿಬಿಐ
ಬೋಫೋರ್ಸ್ ಪ್ರಕರಣದ ಮರು ತನಿಖೆ. ಕೇಂದ್ರೀಯ ತನಿಖಾ ಸಂಸ್ಥೆಯಿಂದ ಘೋಷಣೆ.
ನವದೆಹಲಿ, ಆಗಸ್ಟ್ 11: ದಶಕಗಳ ಹಿಂದೆ ಭಾರತದ ರಾಜಕೀಯ ವಲಯದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದ್ದ ಬೋಫೋರ್ಸ್ ಫಿರಂಗಿ ಹಗರಣವನ್ನು ಮತ್ತೆ ತನಿಖೆಗೊಳಪಡಿಸುವುದಾಗಿ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ), ಈ ಕುರಿತಂತೆ ತನಗೆ ಸೂಚನೆ ನೀಡಿದ್ದ ಸಂಸದೀಯ ಸಮಿತಿಗೆ ತಿಳಿಸಿದೆ.
ಕಳೆದ ಜುಲೈನಲ್ಲಿ ಕೆಲವು ಸಂಸದರನ್ನೊಳಗೊಂಡ ಸಾರ್ವಜನಿಕ ಲೆಕ್ಕಪತ್ರ ಸಮಿತಿ (public accounts committee), ಬೋಫೋರ್ಸ್ ಹಗರಣವನ್ನು ಪುನಃ ನಡೆಸುವಂತೆ ಸಿಬಿಐಗೆ ತಾಕೀತು ಮಾಡಿತ್ತು.
ಬೋಫೋರ್ಸ್ ಹಗರಣಕ್ಕೆ ಮರುಜೀವ? ಸಿಬಿಐಗೆ ಕೆಲ ಸಂಸದರ ತಾಕೀತು?
ವರ್ಷಗಳ ಹಿಂದೆ, ಬೋಫೋರ್ಸ್ ಹಗರಣದಲ್ಲಿ ಯಾವುದೇ ತನಿಖೆ ನಡೆಸದಂತೆ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವಂತೆಯೂ ಸಮಿತಿ ಸೂಚಿಸಿತ್ತು. ಆ ಸೂಚನೆಯೀಗ ಕಾರ್ಯಗತಕ್ಕೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ, ತಾನು ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಸಿಬಿಐ ತಿಳಿಸಿದೆ.
ರಾಜೀವ್ ಗಾಂಧಿ ಮೇಲೂ ಆರೋಪ
1986ರ ಮಾರ್ಚ್ 24ರಂದು ಭಾರತಕ್ಕೆ ಸ್ವೀಡನ್ ನಿಂದ ಬೋಫೋರ್ಸ್ ಫಿರಂಗಿಗಳು ಭಾರತೀಯ ಸೇನೆಗೆ ಕಾಲಿಟ್ಟಿದ್ದವು. ಇವುಗಳ ತಯಾರಿಕೆಗೆ ಸಂಬಂಧಿಸಿದಂತೆ ಭಾರತ ಸರ್ಕಾರ, ಸ್ವೀಡನ್ ಜತೆಗೆ ಒಪ್ಪಂದ ಮಾಡಿಕೊಂಡಿತ್ತು. ಈ ವ್ಯಾಪಾರದಲ್ಲಿ ಭಾರೀ ಪ್ರಮಾಣದ ಲಂಚ ಹಂಚಿಕೆಯಾಗಿದೆ ಎಂಬ ಆರೋಪಗಳು ಎದ್ದಿದ್ದವು. ಇದರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರ ಮೇಲೂ ಆರೋಪಗಳು ಕೇಳಿಬಂದಿದ್ದವು.
ಬೋಫೋರ್ಸ್ ಕಂಪನಿ ವಿರುದ್ಧ ಪ್ರಕರಣ
1990ರ ಜನವರಿ 22ರಂದು, ಕೇಂದ್ರೀಯ ತನಿಖಾ ಸಂಸ್ಥೆಯು ಈ ಪ್ರಕರಣವನ್ನು ದಾಖಲಿಸಿಕೊಂಡಿತ್ತು. ಬೋಫೋರ್ಸ್ ಫಿರಂಗಿಗಳನ್ನು ತಯಾರಿಸಿದ್ದ ಎ.ಬಿ. ಬೋಫೋರ್ಸ್ ಸಂಸ್ಥೆ ವಿರುದ್ಧವೂ ಕೇಸುಗಳು ದಾಖಲಾಗಿದ್ದವು. ಆ ಕಂಪನಿಯ ಅಂದಿನ ಅಧ್ಯಕ್ಷ ಮಾರ್ಟಿನ್ ಅರ್ಭೋ ಅವರ ವಿರುದ್ಧ ಕೇಸು ದಾಖಲಾಗಿತ್ತು.
ದೆಹಲಿ ಹೈಕೋರ್ಟ್ ತೀರ್ಪು
ಈ ಖರೀದಿಯಲ್ಲಿಆಗಿನ ಕಾಲದಲ್ಲೇ ಒಟ್ಟು 64 ಕೋಟಿ ರು. ಯಷ್ಟು ಲಂಚ ಹರಿದಾಡಿದೆ ಎಂಬ ಆರೋಪಗಳಿವೆ. ಇದರ ತನಿಖೆ ನಡೆಸಿದ್ದ 1999ರ ಅಕ್ಟೋಬರ್ 22ರಂದು ಸಿಬಿಐ, ತನ್ನ ಮೊದಲ ಆರೋಪ ಪಟ್ಟಿ ದಾಖಲಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಸಿಬಿಐ ಕೋರ್ಟ್, 2011ರಲ್ಲಿ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ (ಆತ ದಲ್ಲಾಳಿ) ಕ್ವಟ್ರೋಖಿಯ ಹೆಸರನ್ನು ಪ್ರಕರಣದಿಂದ ಕೈಬಿಟ್ಟಿತ್ತು.
ಈಗ ಈ ಪ್ರಕರಣಕ್ಕೆ ಮರುಜೀವ ತರುವ ಪ್ರಯತ್ನವೇಕೆ?
2019ರ ಮಹಾ ಚುನಾವಣೆಗೆ ಅಖಾಡ ಸಿದ್ಧವಾಗುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಈಗ ಕಾಂಗ್ರೆಸ್ ಗೆ ಕಂಟಕಪ್ರಾಯವಾಗಬಹುದಾದ ಬೋಫೋರ್ಸ್ ಹಗರಣವನ್ನು ಮತ್ತೆ ಕೆದಕಿರುವುದು ಎಲ್ಲರ ಕುತೂಹಲ ಕೆರಳಿಸಿದೆ.