ಹೆಣಗಳು ತೇಲಿಬಂದ ಪ್ರದೇಶದಲ್ಲಿ ಕುಡಿಯುವ ನೀರು ಗುಣಮಟ್ಟ ಪರೀಕ್ಷೆಗೆ ಸೂಚನೆ
ನವದೆಹಲಿ, ಮೇ 18: ಶವಗಳು ರಾಶಿ ರಾಶೀ ತೇಲಿಬಂದಿದ್ದ ಪ್ರದೇಶಗಳಲ್ಲಿ ಕುಡಿಯುವ ನೀರಿನ ಗುಣಮಟ್ಟವನ್ನು ಪರೀಕ್ಷಿಸುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಕುಡಿಯುವ ಉದ್ದೇಶಕ್ಕಾಗಿ ಗ್ರಾಮಗಳಿಗೆ ಪೂರೈಸುತ್ತಿರುವ ನೀರು ಗುಣಮಟ್ಟದದ್ಆಗಿದೆ ಎಂಬುದರ ಕುರಿತು ಖಾತರಿಗಾಗಿ ಗುಣಮಟ್ಟ ಪರೀಕ್ಷೆ ನಡೆಸುವಂತೆ ಹೇಳಿದೆ.
ನದಿಯಲ್ಲಿ ಹೆಣಗಳು ತೇಲುತ್ತಿರುವ ಪ್ರಕರಣಗಳು ವರದಿಯಾದ ಬಳಿಕ , ಇದರಿಂದಾಗಿ ನೀರು ಕಲುಷಿತಗೊಂಡು ಸೋಂಕು ಸಾಂಕ್ರಾಮಿಕವಾಗಿ ಹರಡಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದರು.
ಕೋವಿಡ್ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ಜಲಜೀವನ್ ಮಿಷನ್ ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆ.
ಗಂಗಾ ನದಿ ಬಳಿ ಶವಕ್ಕೆ ಪೆಟ್ರೋಲ್, ಟೈರ್ ಬಳಸಿ ಅಂತ್ಯಸಂಸ್ಕಾರ: 5 ಮಂದಿ ಪೊಲೀಸರ ಅಮಾನತು
ಹಲವು ನದಿಗಳಲ್ಲಿ ಮುಖ್ಯವಾಗಿ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಶವಗಳು ಹಾಗೂ ಭಾಗಶಃ ಸುಟ್ಟ ದೇಹಗಳು ತೇಲುತ್ತಿವೆ ಎಂಬ ಆಘಾತಕಾರಿ ಸುದ್ದಿ ಹಿನ್ನೆಲೆ ಕೇಂದ್ರ ಈ ಸೂಚನೆ ನೀಡಿದೆ.
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸಾರ್ವಜನಿಕ ಆರೋಗ್ಯದ ಸುರಕ್ಷತೆ ದೃಷ್ಟಿಯಿಂದ ಗುಣಮಟ್ಟದ ನೀರು ಪೂರೈಕೆಯ ಬಗ್ಗೆ ಗಮನಹರಿಸಬೇಕಿದೆ, ಸ್ಯಾನಿಟೈಸ್ ವ್ಯವಸ್ಥೆ ಉತ್ತಮಪಡಿಸುವುದು ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಅಗತ್ಯ ಎಂದು ಸಚಿವಾಲಯ ಹೇಳಿದೆ.
ದೇಶಾದ್ಯಂತ ಎಲ್ಲಾ ಗ್ರಾಮಗಳಲ್ಲಿ ನೀರಿನ ಪರೀಕ್ಷೆ ನಡೆಸಬೇಕು, ಸಾರ್ವಜನಿಕರು ಮತ್ತು ಸಾರ್ವಜನಿಕ ಸಂಸ್ಥೆಗಳಿಗೆ ಗುಣಮಟ್ಟದ ನೀರು ಪೂರೈಕೆಯಾಗುತ್ತಿದೆಯೇ ಎಂಬುದರ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕಿದೆ.