ಹರಿಯಾಣ ರೈತರ ಮೇಲೆ ಲಾಠಿ ಚಾರ್ಜ್: 'ಮತ್ತೆ ರಕ್ತ ಹರಿದಿದೆ' ಎಂದ ರಾಹುಲ್ ಗಾಂಧಿ
ನವದೆಹಲಿ, ಆಗಸ್ಟ್ 28: ಹರಿಯಾಣದ ಕರ್ನಾಲ್ ಜಿಲ್ಲೆಯ ರೈತರ ವಿರುದ್ಧ "ಕ್ರೂರ" ಪೋಲೀಸ್ ಲಾಠಿ ಚಾರ್ಜ್ ಅನ್ನು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಶನಿವಾರ ತೀವ್ರವಾಗಿ ವಿರೋಧ ಮಾಡಿದ್ದಾರೆ. ಹಿಂದಿಯಲ್ಲಿ ಎರಡು ಸಾಲುಗಳ ಟ್ವೀಟ್ ಮಾಡಿದ ರಾಹುಲ್ ಗಾಂಧಿ "ಮತ್ತೆ ರಕ್ತ ಹರಿದಿದೆ" ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿಯವರು ಹಿಂಸಾತ್ಮಕ ಛಾಯಾಚಿತ್ರವನ್ನು ಟ್ವೀಟ್ ಮಾಡಿದ್ದು, ಆ ಚಿತ್ರದಲ್ಲಿ ಬಿಳಿ ಕುರ್ತಾ ಪೈಜಾಮಾ ರಕ್ತದಿಂದ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಬಂದಿದೆ. ಹಾಗೆಯೇ ರೈತರ ತಲೆಯ ಮೇಲೆ ಗಾಯವಾಗಿದ್ದು, ಬಟ್ಟೆಯು ರಕ್ತದಿಂದ ತೋಯ್ದು ಹೋಗಿದೆ. ಇನ್ನಿಬ್ಬರು ಆ ವ್ಯಕ್ತಿಯನ್ನು ಕರೆದುಕೊಂಡು ಹೋಗುತ್ತಿರುವುದು ಚಿತ್ರದಲ್ಲಿ ಕಂಡು ಬಂದಿದೆ. ಈ ಚಿತ್ರದೊಂದಿಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, "ಮತ್ತೊಮ್ಮೆ ರೈತರ ರಕ್ತ ಹರಿದಿದೆ ಮತ್ತು ಭಾರತ ನಾಚಿಕೆಯಿಂದ ತಲೆ ಬಾಗಿದೆ," ಎಂದು ಹೇಳಿದ್ದಾರೆ.
ಮೋದಿ ಸರ್ಕಾರದ ಕ್ರೌರ್ಯ ಎಲ್ಲಾ ಮಿತಿಗಳನ್ನು ಮೀರಿದೆ: ರಾಹುಲ್ ಗಾಂಧಿ
ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದಲ್ಲಿ ನಡೆದ ಸಭೆಯ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ರೈತರು ರಾಜ್ಯ ಬಿಜೆಪಿ ಮುಖ್ಯಸ್ಥ ಒಪಿ ಧಂಕರ್ರನ್ನು ತಡೆಯಲು ಯತ್ನ ಮಾಡಿದ ಸಂದರ್ಭದಲ್ಲಿ ರೈತರ ಮೇಲೆ ಬಸ್ತಾರಾ ಟೋಲ್ ಪ್ಲಾಜಾದ ಬಳಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹಂಚಲಾದ ಚಿತ್ರದಲ್ಲಿ ರೈತರು ರಕ್ತಸಿಕ್ತ ಬಟ್ಟೆಯಲ್ಲಿ ಇರುವುದು ಕಂಡು ಬಂದಿದೆ. ಒಂದು ವೀಡಿಯೋದಲ್ಲಿ ಇಬ್ಬರು ಪೋಲಿಸರು ರಕ್ತಸಿಕ್ತ ಬಟ್ಟೆಯಲ್ಲಿದ್ದ ರೈತನನ್ನು ಎಳೆದಾಡುತ್ತಿರುವುದು ತೋರಿಸಿದೆ. ಈ ಲಾಠಿ ಚಾರ್ಚ್ ಕಾರಣದಿಂದಾಗಿ ಆಕ್ರೋಶಕ್ಕೆ ಒಳಗಾಗಿರುವ ರೈತರು ರಾಜ್ಯಾದ್ಯಂತ ಪ್ರಮುಖ ರಸ್ತೆಗಳು ಮತ್ತು ಹೆದ್ದಾರಿಗಳಲ್ಲಿ ತಡೆ ಮಾಡಿದ್ದಾರೆ. ಹಾಗೆಯೇ ರೈತರು ಬಂಧಿತರನ್ನು ಬಿಡುಗಡೆ ಮಾಡುವಂತೆ ಹಾಗೂ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ದ ಪ್ರತಿಭಟಿಸಲು ಒಟ್ಟಾಗಿರುವ ಅನೇಕ ರೈತರ ಗುಂಪು ಸಂಯುಕ್ತ ಕಿಸಾನ್ ಮೋರ್ಚಾ ಪೊಲೀಸರ ಈ "ಕ್ರೂರ" ಕ್ರಮಗಳಿಗಾಗಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ. ರೈತರು ಈ ಪೊಲೀಸರ ಲಾಠಿ ಚಾರ್ಚ್ ವಿರುದ್ದ ನಡೆಸಿದ ಪ್ರತಿಭಟನೆ ನಡೆಸಿದ್ದು ಇದರಿಂದಾಗಿ ದೆಹಲಿ-ಅಮೃತಸರ ಹೆದ್ದಾರಿ ಸೇರಿದಂತೆ ಪ್ರಮುಖ ರಸ್ತೆಗಳು ಮತ್ತು ಹೆದ್ದಾರಿಗಳಲ್ಲಿ ಸಂಚಾರದ ಮೇಲೆ ಪರಿಣಾಮ ಬೀರಿದೆ. ಹಾಗೆಯೇ ಶಂಭು ಟೋಲ್ ಪ್ಲಾಜಾದಲ್ಲಿ ಸಂಚಾರದಟ್ಟನೆ ಉಂಟಾಗಿದೆ.
'ನಿಮ್ಮ ಕಾಳಜಿ ನೀವೇ ವಹಿಸಿ; ಸರ್ಕಾರ ವ್ಯಾಪಾರದಲ್ಲಿ ಬ್ಯುಸಿ ಆಗಿದೆ'
ಇನ್ನು ರಾಹುಲ್ ಗಾಂಧಿಯನ್ನು ಹೊರತುಪಡಿಸಿ, ಕಾಂಗ್ರೆಸ್ನ ಹರಿಯಾಣ ಮುಖ್ಯಸ್ಥರು ಕೂಡ ಈ ಕ್ರೂರ ಲಾಠಿಚಾರ್ಚ್ ಅನ್ನು ಖಂಡಿಸಿದ್ದಾರೆ. ಈ ಬಗ್ಗೆ ವಿಡಿಯೋ ಹೇಳಿಕೆ ನೀಡಿರುವ ಕುಮಾರಿ ಸೆಲ್ಜಾ, "ಕರ್ನಾಲ್ನಲ್ಲಿ ನಮ್ಮ ರೈತರ ಮೇಲೆ ಲಾಠಿ ಚಾರ್ಚ್ ನಡೆದಿರುವುದು ಅತ್ಯಂತ ಕಳವಳಕಾರಿ ವಿಷಯವಾಗಿದೆ. ಕಾಂಗ್ರೆಸ್ ಪಕ್ಷವು ಈ ದಾಳಿಯನ್ನು ಪ್ರಬಲವಾಗಿ ಖಂಡನೆ ಮಾಡುತ್ತದೆ. ಇದು ಬಿಜೆಪಿ ರೈತರ ಬಗ್ಗೆ ತೋರುವ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ," ಎಂದು ಆರೋಪ ಮಾಡಿದ್ದಾರೆ. ಹಾಗೆಯೇ ವೈರಲ್ ವಿಡಿಯೋವನ್ನು ಕೂಡಾ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕರ್ನಾಲ್ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಯುಷ್ ಸಿನ್ಹಾ "ಅವರ (ರೈತರ) ತಲೆಯನ್ನು ಹೊಡೆಯಿರಿ" ಎಂದು ಪೊಲೀಸರಿಗೆ ಹೇಳುವುದು ಕಂಡು ಬಂದಿದೆ.
ಕಳೆದ ನವೆಂಬರ್ 26 ರಿಂದ ಕೇಂದ್ರ ಸರ್ಕಾರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ದ ರೈತರು ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಈ ಪ್ರತಿಭಟನೆಗೆ ಕಾಂಗ್ರೆಸ್, ಸಿಪಿಐಎಂ ಸೇರಿದಂತೆ ಹಲವಾರು ವಿರೋಧ ಪಕ್ಷಗಳು ಬೆಂಬಲವನ್ನು ವ್ಯಕ್ತಪಡಿಸಿದೆ. ಹಾಗೆಯೇ ಇತ್ತೀಚೆಗೆ ನಡೆದ ಸಂಸತ್ತಿನ ಮುಂಗಾರು ಅಧಿವೇಶನದಲ್ಲೂ ರೈತರ ಬಗ್ಗೆ ಚರ್ಚೆಗೆ ವಿರೋಧ ಪಕ್ಷಗಳು ಒತ್ತಾಯ ಮಾಡಿದ್ದು ಈ ಸಂದರ್ಭ ನಡೆದ ಗದ್ದಲದಲ್ಲಿ ಪದೇ ಪದೇ ಅಧಿವೇಶನವು ಸ್ಥಗಿತವಾಗಿದೆ. ಬಿಜೆಪಿ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದ ರಾಹುಲ್ ಗಾಂಧಿ ಸಂಸತ್ತಿಗೆ ಟ್ರಾಕ್ಟರ್ ಓಡಿಸಿಕೊಂಡು ಬಂದಿದ್ದರು. ಹಾಗೆಯೇ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹಾಗೂ 14 ಇತರ ವಿರೋಧ ಪಕ್ಷದ ನಾಯಕರು ದೆಹಲಿಯ ಜಂತರ್ ಮಂತರ್ನಲ್ಲಿ ಜಂಟಿ ಪ್ರತಿಭಟನೆ ನಡೆಸಿದರು.
(ಒನ್ ಇಂಡಿಯಾ ಸುದ್ದಿ)