ಸಚಿವ ಸುರೇಶ ಕುಮಾರ್ ಹೇಳಿದ ಟೆಕ್ಕಿಯೊಬ್ಬರ ಮನಮಿಡಿಯುವ ಕಥೆ...!
ಬೆಂಗಳೂರು, ಮೇ 21: ಕೊರೊನಾ ವೈರಸ್ ಸಂಕಷ್ಟದ ಸಂದರ್ಭದಲ್ಲಿ ಒಂದೊಂದೆ ಕರುಣಾಜನಕ ಕಥೆಗಳು ಹೊರ ಬರುತ್ತಿವೆ. ದೇಶದಲ್ಲಿ ಕಾರ್ಮಿಕರ ಗೋಳು ಒಂದು ರೀತಿಯಾದರೆ, ವಿದೇಶದಲ್ಲಿ ಇದ್ದವರ ಕರಳು ಹಿಂಡುವ ವ್ಯಥೆಗಳು ಮತ್ತೊಂದು ರೀತಿ. ಕ್ರೂರಿ ಕೊರೊನಾ ವೈರಸ್ ಎದುರು ಎಲ್ಲರೂ ಒಂದೇ ಎಂಬುದು ಸಾಬೀತಾಗುತ್ತಿದೆ.
Recommended Video
ಬೆಂಗಳೂರಿನ ಒಬ್ಬ ಯುವತಿ. ತನ್ನ ಎಂಟೆಕ್ ವಿದ್ಯಾಭ್ಯಾಸದ ಬಳಿಕ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು 2017 ರಲ್ಲಿ ಹೊರದೇಶಕ್ಕೆ ಹೋಗಿದ್ದಾರೆ. ಆ ಹೆಚ್ಚಿನ ಶಿಕ್ಷಣ ಮುಗಿಸಿದ ನಂತರ ಅಲ್ಲಿನ ಅಲ್ಲಿನ ಪ್ರತಿಷ್ಠಿತ ಸಾಫ್ಟವೇರ್ ಕಂಪನಿಯಲ್ಲಿ ಕೆಲಸವೂ ಸಿಕ್ಕಿದೆ. ಇದಕ್ಕಿಂತ ಅದೃಷ್ಟ ಬೇರೆನಿದೆ ಎಂದು ಕೊಳ್ಳಬಹುದು. ಆದರೆ ಈಗ ಆ ಟೆಕ್ಕಿಗೆ ಆಗಿರುವುದೇ ಬೇರೆ.
ನಿಮ್ಮ ದೇಶಕ್ಕೆ ಹೋಗಿ ಎಂದು ಟೆಕ್ಕಿಗೆ ಹೇಳಿದ ವೈದ್ಯರು
ಆ ಯುವ ಟೆಕ್ಕಿಗೆ ಇದೀಗ ಬ್ಲಡ್ ಕ್ಯಾನ್ಸರ್ ಬಂದು ಅಪ್ಪಳಿಸಿದೆ. ಐರ್ಲೆಂಡಿನ ವೈದ್ಯರು ಕೈ ಚೆಲ್ಲಿದ್ದಾರೆ. "ನಿಮ್ಮ ದೇಶಕ್ಕೇ ಹೋಗಿ. ಮನೆಯವರೊಂದಿಗೆ ಇರಿ' (ಬಹುತೇಕ ಈ ಮಾತಿನ ಅರ್ಥ ನಿಮಗೆ ಆಗಿರಬೇಕು) ಎಂದಿದ್ದಾರೆ.
ವಂದೇ ಭಾರತ್ ಮಿಷನ್: ಲಂಡನ್ To ಬೆಂಗಳೂರು ಯಶಸ್ವಿ
ಆ ಯುವತಿ ಅಲ್ಲಿಂದ ವಿಮಾನದಲ್ಲಿ ಇಲ್ಲಿಗೆ ಬರಬೇಕು. ರಾಜ್ಯದ ಗಡಿಗಳೇ ಬಂದ್ ಆಗಿರುವಾಗ ದೂರದ ಐರ್ಲೆಂಡ್ ದೇಶದಿಂದ ಆಕೆ ಬರುವುದು ಹೇಗೆ? ವಿಮಾನಯಾನ ಬಂದ್ ಮಾಡಿ ಒಂದೂವರೆ ತಿಂಗಳುಗಳಾಗಿದ್ದವು. ಈ ಪರಿಸ್ಥಿತಿಯಲ್ಲಿ ಆಕೆಯ ಮನಸ್ಥಿತಿ ಹೇಗಿರಬಹುದು? ಅವರಿಗೆ ಅಲ್ಲಿ ಯಾರೂ ಇಲ್ಲ. ಇನ್ನು ಏಳು ದಿನಗಳೊಳಗೆ ಆಕೆ ವಿಮಾನ ಹತ್ತಿ ಬರಬೇಕು. ಇಲ್ಲದಿದ್ದರೆ ಅವಳ ರೋಗ ನಿರೋಧಕ ಶಕ್ತಿ (immunity power) ಈಗಾಗಲೇ ತೀರಾ ಕ್ಷೀಣವಾಗುತ್ತಿದೆ ಎಂದು ಯುವತಿಯ ಇಲ್ಲಿನ ಬಂಧುಗಳು ಶಿಕ್ಷಣ ಸಚಿವ ಸುರೇಶ ಕುಮಾರ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಸಹಾಯಕ್ಕೆ ಹೋದ ಸಚಿವ ಸುರೇಶ್ ಕುಮಾರ್
ವಿಷಯ ತಿಳಿಯುತ್ತಿದ್ದಂತೆಯೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರ ಗಮನಕ್ಕೆ ಈ ಸಂಗತಿಯನ್ನು ಸಚಿವ ಸುರೇಶ ಕುಮಾರ್ ತಂದಿದ್ದಾರೆ. ಯುವತಿಗೆ ಸಹಾಯ ಮಾಡುವಂತೆ ಅವರು ಮನವಿ ಮಾಡಿದ್ದಾರೆ.
ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರು ವಿದೇಶಾಂಗ ಸಚಿವಾಲಯದ ಮೂಲಕ ಯುವತಿಗೆ ನೆರವು ಕೊಡಿಸಿದ್ದಾರೆ. ಆ ಯುವತಿಯ ಆರೋಗ್ಯ ಸ್ಥಿತಿ ಸೇರಿದಂತೆ ಪೂರ್ಣ ವಿವರ ಕೇಳಿಸಿಕೊಂಡ ವಿದೇಶಾಂಗ ಸಚಿವಾಲಯ, ಮೊದಲ ಆಧ್ಯತೆ ಕೊಟ್ಟು ಭಾರತಕ್ಕೆ ಕರೆಸಿಕೊಳ್ಳಲು ಮುಂದಾಗಿತ್ತು. ಆದರೆ ಆಗ ಮತ್ತೊಂದು ತೊಂದರೆ ಎದುರಾಯ್ತು. ಅದು ಐರ್ಲೆಂಡ್ನಿಂದ ಭಾರತಕ್ಕೆ ನೇರ ವಿಮಾನ ಇರದೆ ಇದ್ದುದು. ಕೊನೆಗೆ ವಂದೇ ಭಾರತ್ ಮಿಷನ್ನಡಿ ಭಾರತಕ್ಕೆ ಯುವತಿ ಬಂದಿದ್ದಾರೆ.
ಮರಳಿದರೂ ಮನೆಯವರೊಂದಿಗೆ ಇರುವಂತಿಲ್ಲ!
ಕೊನೆಗೆ ವಂದೇ ಭಾರತ್ ಮಿಷನ್ ನಡಿ ಆ ಯುವತಿಯನ್ನು ಭಾರತಕ್ಕೆ ಕರೆತರಲಾಯಿತು. ದೇಶಕ್ಕೆ ಬಂದರೂ ಕೊರೊನಾ ವೈರಸ್ ಸೋಂಕಿನ ಶಂಕೆಯಿಂದ ಯುವತಿ ಮನೆಗೆ ಹೋಗುವಂತಿಲ್ಲ, ಮನೆಯವರೊಂದಿಗೆ ಇರುವಂತಿಲ್ಲ.
ವಂದೇ ಭಾರತ್ ಮಿಷನ್ 2: ಈ ಸಲ ಎಷ್ಟು ಮಂದಿ ಭಾರತಕ್ಕೆ ಬರಲಿದ್ದಾರೆ?
ವಿದೇಶದಿಂದ ಬಂದವರು ಕಡ್ಡಾಯವಾಗಿ 14 ದಿನಗಳ ಕಾಲ ಸರ್ಕಾರಿ ಕ್ವಾರಂಟೈನ್ ನಲ್ಲಿರಲೇಬೇಕು. ಅದಕ್ಕೆ ರಿಯಾಯತಿ ಯಾರಿಗೂ ಇಲ್ಲ! ಸಂಕಷ್ಟದ ಮೇಲೊಂದು ಸಂಕಷ್ಟ. ಐರ್ಲೆಂಡ್ ನಿಂದ ಬಂದ ಯುವತಿಗೆ ಬೆಂಗಳೂರಿನ ಮತ್ತಿಕೆರೆಯ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಜೊತೆ ಜೊತೆಗೆ ಕ್ವಾರಂಟೈನ್ಗೆ ವ್ಯವಸ್ಥೆ ಮಾಡಲಾಗಿದೆ.
ಕೈಬಿಡದ ಸ್ನೇಹಿತ
ಉದ್ಯೋಗಕ್ಕೆ ತೆರಳಿದ್ದ ಯುವತಿಗೆ ಐರ್ಲೆಂಡ್ ನಲ್ಲಿ ಆತ್ಮೀಯ ಸ್ನೇಹಿತನೊಬ್ಬ ಸಿಕ್ಕಿದ್ದಾನೆ. ಕಷ್ಟಕಾಲದಲ್ಲಿ ಯುವತಿಯನ್ನು ಐರ್ಲೆಂಡ್ನಿಂದ ಬೆಂಗಳೂರಿಗೆ ಕರೆ ತಂದಿದ್ದಾನೆ.
ಇಷ್ಟೇ ಅಲ್ಲ ಯುವತಿಯ ಜೊತೆಗೆ ಕ್ವಾರಂಟೈನ್ ಇರುತ್ತೇನೆಂದು ಒತ್ತಾಯಿಸಿ ವೈದ್ಯರ ಒಪ್ಪಿಗೆ ಪಡೆದುಕೊಂಡಿದ್ದಾನೆ. ಅವನಿಗೆ ಯುವತಿಯ ಆರೋಗ್ಯ ಸ್ಥಿತಿಯ ಸಂಪೂರ್ಣ ಅರಿವಿದೆ. ಎಲ್ಲವೂ ಗೊತ್ತಾದ ಮೇಲೆಯೂ ಯುವತಿಯ ಆರೈಕೆಗೆ ಗೆಳೆಯ ನಿಂತಿದ್ದಾನೆ. ಎಲ್ಲ ಗೊತ್ತಿದ್ದು ಅವಳೊಂದಿಗೆ ಕ್ವಾಂರಟೈನ್ನಲ್ಲಿದ್ದಾನೆ. ಕೊರೊನಾ ವೈರಸ್ ತಂದಿರುವ ಲಾಕ್ಡೌನ್ ಸಂದರ್ಭದಲ್ಲಿ ಮಾನವೀಯತೆ ಎನ್ನುವುದೂ ಸಾಯುತ್ತಿರುವಾಗ ಯುವತಿಯ ಗೆಳೆಯ ನಿಜಕ್ಕೂ ಸಮಾಜಕ್ಕೇ ಮಾದರಿಯಾಗಿದ್ದಾನೆ.
ಕ್ವಾರಂಟೈನ್ ಅಂತ್ಯ, ಮನೆಗೆ ಯುವತಿ
ಮೇ 11ರಂದು ಆ ಯುವತಿ ಐರ್ಲೆಂಡ್ ನಿಂದ ಬೆಂಗಳೂರಿಗೆ ಬಂದಿದ್ದಾರೆ. ಇದೀಗ 10 ದಿನಗಳ ಕ್ವಾರಂಟೈನ್ ಮುಗಿದಿದೆ. ಇನ್ನು ನಾಲ್ಕು ದಿನಗಳ ನಂತರ ಅವರ 14 ದಿನಗಳ ಕ್ವಾರಂಟೈನ್ ಕೂಡ ಮುಗಿಯಲಿದೆ. ಬಳಿಕ ತನ್ನ ಮನೆಯವರೊಂದಿಗೆ ಯುವತಿ ಇರುವುದು ಸಾಧ್ಯವಾಗುತ್ತದೆ.
ಸಧ್ಯ ಅವರ ಗೆಳೆಯ ತಾನೂ ಆಸ್ಪತ್ರೆಯಲ್ಲಿದ್ದು ಆರೈಕೆ ಮಾಡುತ್ತಿದ್ದಾರೆ. ಮಗಳ ಸ್ಥಿತಿಗೆ ಮನೆಯವರಲ್ಲಿ ದಾರುಣ ನೋವಿದೆ. ಆ ನೋವಿನ ಮಧ್ಯೆಯೂ ಮಗಳು ದೇಶಕ್ಕೆ, ಅದರಲ್ಲೂ ಬೆಂಗಳೂರಿಗೆ ಬಂದಿರುವುದು ಅವರಿಗೂ ಒಂದು ರೀತಿಯ ನೆಮ್ಮದಿ ತಂದಿದೆ.
ಧನ್ಯವಾದ ಹೇಳಿದ ಸಚಿವ ಸುರೇಶ್ ಕುಮಾರ್
ಈ ಎಲ್ಲದರ ಮಧ್ಯೆ ಯುವತಿಯನ್ನು ಬೆಂಗಳೂರಿಗೆ ಕರೆತರಲು ಪ್ರಯತ್ನಿಸಿದ್ದ ಸಚಿವ ಸುರೇಶ ಕುಮಾರ್ ಅವರು ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ. ಇದೇನು ಒಳ್ಳೆಯ ಕೆಲಸವೊ? ಏನೊ ಒಂದು ಅರ್ಥ ಆಗುತ್ತಿಲ್ಲ ಎಂದು ನೋವಿನಿಂದಲೇ ತಮ್ಮ ಧಾರುಣ ಅನುಭವವನನ್ನು 'ಒನ್ಇಂಡಿಯಾ ಕನ್ನಡ'ದ ಜೊತೆಗೆ ಹಂಚಿಕೊಂಡಿದ್ದಾರೆ. ಈ ಸಂಕಷ್ಟದ ಸಂದರ್ಭದಲ್ಲಿ ಇನ್ನೂ ಎಂಥೆಂಥ ಧಾರುಣ ಪರಿಸ್ಥಿತಿಗಳನ್ನು ನಾವು ಎದುರಿಸುತ್ತೆವೆಯೊ ಎಂದು ವ್ಯಥೆಯನ್ನು ವ್ಯಕ್ತಪಡಿಸಿದ್ದಾರೆ.
ತಕ್ಕಮಟ್ಟಿಗೆ ಸುಧಾರಿಸಿಕೊಂಡಿರುವ ಯುವತಿ
ನೆಮ್ಮದಿಯ ಸಂಗತಿ ಎಂದರೆ ಆ ಯುವತಿಗೆ ಕೋವಿಡ್ 19 ಸೋಂಕು ನೆಗಟಿವ್ ಬಂದಿದೆ. ಜೊತೆಗೆ ಮತ್ತೊಂದು ಬಾರಿ ಟೆಸ್ಟ್ ಮಾಡಿ ಮನೆಗೆ ಕಳಿಸಿಕೊಡಲಾಗುತ್ತದೆ. ವೈದ್ಯರೊಬ್ಬರು ಹೇಳುವಂತೆ, ಆ ರೋಗ ಇದೆಯಲ್ಲ ಅದೊಂಥರ ಗೇಮ್ ಪ್ಲೇ ಮಾಡುತ್ತದೆ. ಗುಣಮುಖವಾಗುವ ಆಸೆ ಹುಟ್ಟಿಸುತ್ತೆ. ಮತ್ತೆ ರೋಗ ಜಾಸ್ತಿ ಆಗುತ್ತದೆ. ವ್ಯಕ್ತಿಯು ರೋಗ ನಿರೋಧಕ ಶಕ್ತಿಯ ಮೇಲೆ ಎಲ್ಲ ಅವಲಂಬಿತವಾಗುತ್ತದೆ. ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸುವುದಷ್ಟೆ ನಮ್ಮಿಂದಾಗುವ ಕೆಲಸ!