ಕಪ್ಪು ಹಣ ಇಟ್ಟವರ ರಕ್ಷಿಸಲು ಹೊರಟಿತೆ ಕೇಂದ್ರ ಸರ್ಕಾರ?
ನವದೆಹಲಿ, ಅ. 17 : ಇತ್ತ ಅಕ್ರಮ ಆಸ್ತಿಗಳಿಕೆ ಸಂಬಂಧ ಶಿಕ್ಷೆಗೊಳಗಾಗಿದ್ದ ಜಯಲಲಿತಾಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದ್ದರೆ, ಅತ್ತ ಕೇಂದ್ರ ಸರ್ಕಾರ ವಿದೇಶದಲ್ಲಿ ಕಪ್ಪುಹಣ ಇಟ್ಟವರ ಹೆಸರನ್ನು ಯಾವ ಕಾರಣಕ್ಕೂ ಬಹಿರಂಗ ಮಾಡಬಾರದು ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಶುಕ್ರವಾರ ಮನವಿಯೊಂದನ್ನು ಸಲ್ಲಿಸಿದೆ. ಇದನ್ನು ಕೇಂದ್ರ ಸರ್ಕಾರದ ಇಬ್ಬಗೆಯ ನೀತಿ ಎಂದೇ ವಿಶ್ಲೇಷಿಸಲಾಗಿದೆ.
ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹಿರಿಯ ವಕೀಲ ರಾಮ್ ಜೇಠ್ಮಲಾನಿ, ಒಂದು ಕಡೆ ನರೇಂದ್ರ ಮೋದಿ ವಿದೇಶದಲ್ಲಿರುವ ಕಪ್ಪು ಹಣ ವಾಪಸ್ ತರುತ್ತೇನೆ ಎಂದು ಹೇಳುತ್ತಿದ್ದಾರೆ. ಇನ್ನೊಂದು ಕಡೆ ಕೇಂದ್ರ ಸರ್ಕಾರವೇ ಹಣ ಇಟ್ಟವರ ಹೆಸರು ಬಹಿರಂಗ ಮಾಡದಂತೆ ಮನವಿ ಮಾಡಿಕೊಳ್ಳುತ್ತದೆ. ಯಾಕೆ ಈ ರೀತಿಯ ಇಬ್ಬಗೆಯ ನೀತಿ ಅನುಸರಿಸಲಾಗುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.[ಕಪ್ಪು ಹಣ: ಮಾಹಿತಿ ಹಂಚಿಕೆಗೆ ಕೊನೆಗೂ ಒಪ್ಪಿಗೆ]
ಈ ರೀತಿಯ ಮನವಿಗಳು ಭ್ರಷ್ಟರಿಗೆ ಮತ್ತಷ್ಟು ಹಣ ಮಾಡಿಕೊಳ್ಳುವಂತೆ ಪ್ರೆರೇಪಿಸುತ್ತವೆ. ನಾಗರಿಕರ ಹಣ ಲೂಟಿ ಹೊಡೆಯುತ್ತಿರುವವರಿಗೆ ಮತ್ತೆ ಯಾವುದೇ ಅಂಕುಶ ಇಲ್ಲದಂತಾಗುತ್ತದೆ ಎಂದು ವಿಷಾದಿಸಿದ್ದಾರೆ. ಕೇಂದ್ರ ಸರ್ಕಾರದ ಈ ಮನವಿಯನ್ನು ಅಕ್ಟೋಬರ್ 28ರಂದು ಸುಪ್ರೀಂ ಕೋರ್ಟ್ ವಿಚಾರಣೆಗೆ ತೆಗೆದುಕೊಳ್ಳಲಿದೆ.
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ವಿರುದ್ಧವೂ ವಾಗ್ದಾಳಿ ನಡೆಸಿರುವ ಜೇಠ್ಮಲಾನಿ, ಪ್ರಧಾನಿ ಮೋದಿ ಈ ಬಗ್ಗೆ ವಿಶೇಷ ಗಮನ ನೀಡಬೇಕಿದೆ. ಮೋದಿಗೆ ಪತ್ರವೊಂದನ್ನು ಬರೆದು ಇಂಥ ಮನವಿಯನ್ನು ಹಿಂದಕ್ಕೆ ಪಡೆಯುವಂತೆ ಕೋರುತ್ತೇನೆ ಎಂದು ಹೇಳಿದ್ದಾರೆ.[ದೇಶದಲ್ಲಿ 1 ಲಕ್ಷ ಕೋಟಿ ಕಪ್ಪು ಹಣ ಪತ್ತೆ]
ಸ್ವಿಸ್ ಬ್ಯಾಂಕ್ ನಲ್ಲಿ ಹಣ ಇಟ್ಟಿರುವ ಭಾರತೀಯರ ಹೆಸರುಗಳನ್ನು ನೀಡುವುದಾಗಿ ಬ್ಯಾಂಕ್ ಅಧಿಕಾರಿಗಳು ಹೇಳಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ ಕೇಂದ್ರ ಸರ್ಕಾರ ಹೆಸರು ಬಹಿರಂಗ ಮಾಡದಂತೆ ಸುಪ್ರೀಂಗೆ ಮನವಿ ಸಲ್ಲಿಸಿರುವುದು ಕುತೂಹಲ ಮೂಡಿಸಿದೆ.