ಕೊರೊನಾ ನಮ್ಮಿಂದ ಹಲವರನ್ನು ಕಿತ್ತುಕೊಂಡಿದೆ; ಭಾವುಕರಾದ ಮೋದಿ
ನವದೆಹಲಿ, ಮೇ 21: ದೇಶದಲ್ಲಿ ಕೊರೊನಾ ಎರಡನೇ ಅಲೆ ಸಾಕಷ್ಟು ಪರಿಣಾಮ ಬೀರಿದೆ. ಆದರೆ ಕೊರೊನಾ ಸೋಂಕಿನ ನಂತರ ಕಾಣಿಸಿಕೊಳ್ಳುತ್ತಿರುವ ಈ ಬ್ಲ್ಯಾಕ್ ಫಂಗಸ್ ದೇಶಕ್ಕೆ ಹೊಸ ಸವಾಲನ್ನು ಒಡ್ಡಿದೆ. ಈ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಸಜ್ಜಾಗಬೇಕಿದೆ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ಕೊರೊನಾ ನಿರ್ವಹಣೆ ಸಂಬಂಧ ಶುಕ್ರವಾರ ಉತ್ತರ ಪ್ರದೇಶದ ವಾರಾಣಸಿಯಲ್ಲಿನ ಆರೋಗ್ಯ ಕಾರ್ಯಕರ್ತರು, ವೈದ್ಯರೊಂದಿಗೆ ವರ್ಚುಯಲ್ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿದರು. ಕೊರೊನಾ ನಿರ್ವಹಣೆಯಲ್ಲಿ ವಾರಾಣಸಿಯ ಆರೋಗ್ಯ ವ್ಯವಸ್ಥೆ ಕುರಿತು ಮೆಚ್ಚುಗೆ ಸೂಚಿಸಿದರು. ದೇಶದಲ್ಲಿ ಕೊರೊನಾ ನಿಯಂತ್ರಣದ ಕುರಿತು ಹಲವು ಮಾತುಗಳನ್ನು ಹಂಚಿಕೊಂಡರು. ಮುಂದೆ ಓದಿ...
"ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಹೋರಾಡಬೇಕಿದೆ"
ಕೊರೊನಾ ನಮಗೆ ಅತಿ ದೊಡ್ಡ ಸವಾಲನ್ನೇ ಒಡ್ಡಿದೆ. ಇದೀಗ ಕೊರೊನಾ ರೋಗಿಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಬ್ಲ್ಯಾಕ್ ಫಂಗಸ್ ಮತ್ತೊಂದು ಸವಾಲನ್ನು ಎದುರಿಗಿಟ್ಟಿದೆ. ಕೊರೊನಾ ಸೋಂಕಿನ ವಿರುದ್ಧ ನಾವೆಲ್ಲಾ ಒಟ್ಟಾಗಿ ಹೋರಾಡುತ್ತಿದ್ದೇವೆ. ಹಾಗೆಯೇ ಬ್ಲ್ಯಾಕ್ ಫಂಗಸ್ ವಿರುದ್ಧವೂ ಹೋರಾಡುವ ಅವಶ್ಯಕತೆಯಿದೆ. ಅವಶ್ಯಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ನಿಯಂತ್ರಣ; ಸಣ್ಣ ಎಚ್ಚರಿಕೆ ರವಾನಿಸಿದ ಪ್ರಧಾನಿ ಮೋದಿ
"ಕೊರೊನಾ ನಮ್ಮಿಂದ ಹಲವರನ್ನು ಕಿತ್ತುಕೊಂಡಿದೆ"
ಕೊರೊನಾ ಸೋಂಕು ನಮ್ಮಿಂದ ಹಲವು ಜನರನ್ನು ಕಿತ್ತುಕೊಂಡಿದೆ. ಕೊರೊನಾದಿಂದಾಗಿ ಸಾವಿರಾರು, ಲಕ್ಷಾಂತರ ಜನರು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದಾರೆ. ತಮ್ಮವರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪ ವ್ಯಕ್ತಪಡಿಸುತ್ತೇನೆ" ಎಂದು ಪ್ರಧಾನಿ ಸಭೆಯಲ್ಲಿ ಭಾವುಕರಾದ ಸಂಗತಿ ನಡೆಯಿತು.
ಗ್ರಾಮಗಳಲ್ಲಿ ಎಚ್ಚರಿಕೆಯಿಂದಿರಲು ಸೂಚನೆ
ಕೊರೊನಾ ವಿರುದ್ಧ ನಾವಿನ್ನೂ ಬಹುಕಾಲ ಹೋರಾಡಬೇಕಿದೆ. ಗ್ರಾಮಗಳಲ್ಲಿ ಕೊರೊನಾ ಸೋಂಕಿನ ನಿರ್ವಹಣೆ ಕುರಿತು ಹೆಚ್ಚಿನ ಗಮನ ನೀಡಬೇಕಿದೆ ಎಂದು ತಿಳಿಸಿದ್ದಾರೆ. ಈ ಸೋಂಕು ನಮ್ಮ ದೇಶದ ಆರೋಗ್ಯ ವ್ಯವಸ್ಥೆಯನ್ನು ಒತ್ತಡಕ್ಕೆ ಸಿಲುಕಿಸಿದೆ. ಹೀಗಾಗಿ ಹಲವು ಆಯಾಮಗಳಲ್ಲಿ ಹೋರಾಡುವುದು ಅನಿವಾರ್ಯವಾಗಿದೆ ಎಂದಿದ್ದಾರೆ. ಕೊರೊನಾ ಲಸಿಕೆ ಕುರಿತು ಮಾತನಾಡಿದ ಅವರು, ತಮ್ಮ ತಮ್ಮ ಸರದಿ ಬಂದಾಗ ಲಸಿಕೆ ತೆಗೆದುಕೊಳ್ಳಿ. ಇದು ನಮ್ಮ ಲೈಫ್ ಜ್ಯಾಕೆಟ್ ಇದ್ದ ಹಾಗೆ ಎಂದರು.
ಕೊರೊನಾ ನಿಯಂತ್ರಣ ವಿಚಾರದಲ್ಲಿ ಕಾಶಿ ಮಾದರಿಯನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ
ವಾರಾಣಸಿ ಆರೋಗ್ಯ ಕಾರ್ಯಕರ್ತರಿಗೆ ಮೆಚ್ಚುಗೆ
ವಾರಾಣಸಿಯಲ್ಲಿ ಕೊರೊನಾ ನಿರ್ವಹಣೆ ಮಾಡುವಲ್ಲಿ ಆರೋಗ್ಯ ಕಾರ್ಯಕರ್ತರ ಶ್ರಮವನ್ನು ಮೋದಿ ಶ್ಲಾಘಿಸಿದರು. ವಾರಾಣಸಿಯಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿಯಲಿಲ್ಲ. ಬದಲಾಗಿ ಕಂಟೈನ್ಮೆಂಟ್ ಝೋನ್ಗಳನ್ನು ಗುರುತಿಸಲಾಗಿದೆ. ಇದರಿಂದಾಗಿ ಸಕರಾತ್ಮಕತೆಯೊಂದಿಗೆ ಕೊರೊನಾ ನಿಯಂತ್ರಣ ಮಾಡಲು ಸಾಧ್ಯವಾಗಿದೆ. ಲಸಿಕೆ ನೀಡುವಲ್ಲಿ ಹಾಗೂ ಕೊರೊನಾ ಕುರಿತು ಜಾಗೃತಿ ಮೂಡಿಸುವಲ್ಲಿ ಆರೋಗ್ಯ ಕಾರ್ಯಕರ್ತರ ಶ್ರಮವನ್ನು ಶ್ಲಾಘಿಸಲೇಬೇಕಿದೆ ಎಂದಿದ್ದಾರೆ.